ಕರ್ನಾಟಕ ವಿಧಾನಸಭೆ ಚುನಾವಣೆ: 80 ವರ್ಷ ಮೇಲ್ಪಟ್ಟವರು, ವಿಶೇಷ ಚೇತನರು ಮನೆಯಿಂದಲೇ ಮತ ಚಲಾಯಿಸಲು ವ್ಯವಸ್ಥೆ!

ಇದೇ ಮೊದಲ ಬಾರಿಗೆ 80 ವರ್ಷಕ್ಕೂ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರೂ ಮನೆಯಿಂದಲೇ ಮತದಾನ ಮಾಡಲು ಬಯಸಿದರೆ ಅದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್

ಬೆಂಗಳೂರು: ಇದೇ ಮೊದಲ ಬಾರಿಗೆ 80 ವರ್ಷಕ್ಕೂ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರೂ ಮನೆಯಿಂದಲೇ ಮತದಾನ ಮಾಡಲು ಬಯಸಿದರೆ ಅದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆ ಕುರಿತು ಮಾಹಿತಿ ನೀಡಿದ ಅವರು, ಕಳೆದ ಮೂರು ದಿನಗಳಿಂದ ರಾಜಕೀಯ ಪಕ್ಷಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಇದೇ ಮೊದಲ ಬಾರಿಗೆ, ರಾಜ್ಯದಲ್ಲಿ ಎಲ್ಲಾ 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ವಿಶೇಷ ಮತದಾರರು  ಬಯಸಿದಲ್ಲಿ, ಅವರ ಮನೆಯಿಂದಲೂ ಮತದಾನ ಮಾಡುವ ಸೌಲಭ್ಯ ಒದಗಿಸಲಿದ್ದೇವೆ. ಅಧಿಸೂಚನೆ ಹೊರಡಿಸಿದ 5 ದಿನಗಳೊಳಗೆ ಫಾರ್ಮ್ 12 ಡಿ ಲಭ್ಯವಿರುತ್ತದೆ. ಇದರಿಂದ 80 ವರ್ಷಕ್ಕೂ ಮೇಲ್ಪಟ್ಟವರು ಅಥವಾ ವಿಶೇಷ ಚೇತನ ಮತದಾರರು ಮನೆಯಿಂದಲೇ ತಮ್ಮ ಹಕ್ಕು ಚಲಾಯಿಸಬಹುದು ಎಂದರು.

80 ವರ್ಷ ಮೇಲ್ಪಟ್ಟವರನ್ನು ಮತದಾನ ಕೇಂದ್ರಕ್ಕೆ ಬರುವಂತೆ ಚುನಾವಣಾ ಆಯೋಗ ಪ್ರೋತ್ಸಾಹಿಸುತ್ತಿದ್ದರೂ, ಬರಲು ಸಾಧ್ಯವಾಗದವರು ಈ ಸೌಲಭ್ಯವನ್ನು ಪಡೆಯಬಹುದು ಎಂದು ಅವರು ಹೇಳಿದರು. ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗುವುದು ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊಗ್ರಾಫ್ ಮಾಡಲಾಗುವುದು ಎಂದು ಕುಮಾರ್ ವಿವರಿಸಿದರು. "ಮನೆಯಿಂದ ಮತದಾನದ ಸೌಲಭ್ಯ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳಿಗೆ ತಿಳಿಸಲಾಗುವುದು ಎಂದು ಅವರು ಹೇಳಿದರು.

ವಿಶೇಷ ಚೇತನರಿಗಾಗಿ  'ಸಕ್ಷಮ್' ಮೊಬೈಲ್ ಆ್ಯಪ್ ಪರಿಚಯಿಸಲಾಗಿದೆ. ಇದರಲ್ಲಿ ಲಾಗಿನ್ ಆಗಿ ಮತದಾನದ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಮತ್ತೊಂದು 'ಸುವಿಧಾ' ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.  ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮತ್ತು ಅಫಿಡವಿಟ್ ಗೆ ಇದು ಆನ್ ಲೈನ್ ಪೋರ್ಟಲ್ ಆಗಿದೆ. ಅಭ್ಯರ್ಥಿಗಳು ಸಭೆ, ರ್‍ಯಾಲಿಗಳಿಗೆ ಅನುಮತಿ ಪಡೆಯಲು 'ಸುವಿಧಾ' ಪೋರ್ಟಲ್  ಬಳಸಬಹುದಾಗಿದೆ. ಮತದಾರರ ಅನುಕೂಲಕ್ಕಾಗಿ  ನೋ ಯುವರ್ ಕ್ಯಾಂಡಿಡೇಟ್ (ಕೆವೈಸಿ) ಎಂಬ ಅಭಿಯಾನವನ್ನು ಆರಂಭಿಸಲಾಗಿದೆ ಎಂದು  ಉನ್ನತ ಚುನಾವಣಾ ಅಧಿಕಾರಿ ತಿಳಿಸಿದರು. 

ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಯನ್ನು ಏಕೆ ಆಯ್ಕೆ ಮಾಡಿ  ಟಿಕೆಟ್ ನೀಡಿದರು ಎಂಬುದನ್ನು ರಾಜಕೀಯ ಪಕ್ಷಗಳು ತಮ್ಮ ಪೋರ್ಟಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮತದಾರರಿಗೆ ತಿಳಿಸಬೇಕು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ  ದೂರು ಸಲ್ಲಿಸಲು ಆಯೋಗವು ಇ-ವಿಜಿಲ್ ಆ್ಯಪ್ ಪರಿಚಯಿಸಿದೆ. ಇದಕ್ಕೆ  ಪ್ರತಿಕ್ರಿಯಿಸಲು 100 ನಿಮಿಷ ಬೇಕಾಗುತ್ತದೆ ಎಂದರು  "ಇದು ಉಲ್ಲಂಘನೆ ರೆಕಾರ್ಡ್ ಮಾಡಲು, ವರದಿ ಮಾಡಲು ಮತ್ತು ಪರಿಹರಿಸಲು ಒಂದೇ  ಆ್ಯಪ್ ಆಗಿದ್ದು, 100 ನಿಮಿಷಗಳಲ್ಲಿ ಕುಂದುಕೊರತೆ ಪರಿಹರಿಸುತ್ತದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿನ ಚುನಾವಣೆ ಕುರಿತು ಮಾತನಾಡಿದ ರಾಜೀವ್ ಕುಮಾರ್,  224 ಕ್ಷೇತ್ರಗಳಲ್ಲಿ 36 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮತ್ತು 15 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. 2.59 ಕೋಟಿ ಮಹಿಳಾ ಮತದಾರರು ಸೇರಿದಂತೆ ಒಟ್ಟಾರೇ 5.21 ಕೋಟಿ ಮತದಾರರಿದ್ದಾರೆ. 16,976 ಮಂದಿ 100 ವರ್ಷಕ್ಕೂ ಮೇಲ್ಪಟ್ಟವರಾಗಿದ್ದಾರೆ. 4,699 ತೃತೀಯ ಲಿಂಗಿಗಳು ಇದ್ದಾರೆ ಮತ್ತು 9.17 ಲಕ್ಷ ಮಂದಿ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. 12.15 ಲಕ್ಷ ಮತದಾರರು 80 ವರ್ಷಕ್ಕೂ ಮೇಲ್ಪಟ್ಟವರಾಗಿದ್ದು, 5.55 ಲಕ್ಷ ಮಂದಿ ವಿಶೇಷ ಚೇತನ ಮತದಾರರಿದ್ದಾರೆ ಎಂದು ವಿವರಿಸಿದರು. 

ರಾಜ್ಯದಲ್ಲಿ 24,063 ನಗರ ಪ್ರದೇಶಗಳಲ್ಲಿ ಮತಗಟ್ಟೆಗಳು ಸೇರಿದಂತೆ ಒಟ್ಟಾರೇ 58, 272 ಮತಗಟ್ಟೆ ಸ್ಥಾಪಿಸಲಾಗುವುದು, ಪ್ರತಿಯೊಂದು ಮತಗಟ್ಟೆಯಲ್ಲಿ ಸರಾಸರಿ 883 ಮತದಾರರಿದ್ದಾರೆ. ಈ ಮತಗಟ್ಟೆಗಳಲ್ಲಿ 1,320 ಮಂದಿ ಮಹಿಳೆಯರು, 224 ಯುವಜನತೆ ಮತ್ತು 224 ದಿವ್ಯಾಂಗರು ನಿರ್ವಹಿಸಲಿದ್ದಾರೆ. 29,141 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಇರಲಿದ್ದು, 1,200 ಸೂಕ್ಷ್ಮ ಮತಗಟ್ಟೆಗಳಾಗಿವೆ. ಬಹುತೇಕ ಮತಗಟ್ಟೆಗಳು ಶಾಲೆಗಳಲ್ಲಿ ಇರಲಿದ್ದು, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ಶಾಶ್ವತವಾಗಿ ಒದಗಿಸಲಾಗುವುದು, ಇದು ಶಾಲಾ ಮಕ್ಕಳಿಗೆ ಭಾರತೀಯ ಚುನಾವಣಾ ಆಯೋಗದ ಗಿಫ್ಟ್ ಆಗಿದೆ ಎಂದರು. 

ಸಂಭವನೀಯ ಚುನಾವಣಾ ದಿನಾಂಕ ಕುರಿತು ಪ್ರಶ್ನೆಗೆ ಉತ್ತರಿಸಿದ  ರಾಜೀವ್ ಕುಮಾರ್,  ಪ್ರಸ್ತುತ ರಾಜ್ಯ ವಿಧಾನಸಭೆಯ ಅವಧಿ  ಮೇ 24 ರಲ್ಲಿ ಮುಗಿಯಲಿದೆ. ಅದಕ್ಕೂ ಮುನ್ನ ಚುನಾವಣೆ ನಡೆಸಬೇಕು, ರಾಜ್ಯದಲ್ಲಿ ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗೆ ಸಜ್ಜಾಗುವಂತೆ  ಅಧಿಕಾರಿಗಳಿಗೆ ನಿರ್ದೇಶಿಸಿದರು.  ಕರ್ನಾಟಕದಲ್ಲಿ ಎಷ್ಟು ಹಂತಗಳಲ್ಲಿ ಚುನಾವಣೆಗಳನ್ನು ನಡೆಯಲಿದೆ ಎಂಬುದು ಪರೀಕ್ಷೆಗಳು ಮತ್ತು ಹಬ್ಬಗಳಂತಹ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ.

ಚುನಾವಣೆ ಸಂದರ್ಭದಲ್ಲಿ ಪಕ್ಷಪಾತ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,  ಚುನಾವಣೆಯಲ್ಲಿ ಹಣದ ದುರುಪಯೋಗವಾಗದಂತೆ ಬ್ಯಾಂಕ್‌ಗಳು ತಮ್ಮದೇ ಆದ ರೀತಿಯಲ್ಲಿ ಮತ್ತು ತಮ್ಮದೇ ವ್ಯವಸ್ಥೆಯ ಮೂಲಕ ನಿಗಾ ಇಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com