ಬೆಂಗಳೂರಿನಲ್ಲಿ ಗಗನಸಖಿ ಅರ್ಚನಾ ಸಾವಿನ ಪ್ರಕರಣಕ್ಕೆ ತಿರುವು: ಪ್ರಿಯಕರ ಆದೇಶ್ ಬಂಧನ, ಕೇಸು ದಾಖಲು
ಬೆಂಗಳೂರು: ನಗರದ ಕೋರಮಂಗಲದಲ್ಲಿ ಹಿಮಾಚಲ ಪ್ರದೇಶ ಮೂಲದ ಗಗನ ಸಖಿ ಅರ್ಚನಾ(28ವ) ಬಹು ಮಹಡಿ ಅಪಾರ್ಟ್ ಮೆಂಟಿನಿಂದ ಬಿದ್ದು ಮೃತಪಟ್ಟ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅರ್ಚನಾಳ ಪ್ರಿಯಕರ ಕಾಸರಗೋಡು ಮೂಲದ ಆದೇಶ್ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದ್ದು ಆತನನ್ನು ಬಂಧಿಸಲಾಗಿದೆ.
ಡೇಟಿಂಗ್ ಆಪ್ ನಲ್ಲಿ ಪರಿಚಯ, ಪ್ರೀತಿ: ಡೇಟಿಂಗ್ ಆಪ್ ನಲ್ಲಿ ಪರಿಚಯವಾದ ಅರ್ಚನಾ ಮತ್ತು ಆದೇಶ ಕಳೆದ ಆರು ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರತಿಷ್ಟಿತ ಏರ್ ಲೈನ್ಸ್ ನಲ್ಲಿ ಗಗನ ಸಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅರ್ಚನಾ ಪ್ರಿಯಕರನನ್ನು ಭೇಟಿ ಮಾಡಲು ನಾಲ್ಕು ದಿನಗಳ ಹಿಂದೆಯಷ್ಟೆ ದುಬೈನಿಂದ ಬಂದಿದ್ದರು.
ಮೊನ್ನೆ ಮಾರ್ಚ್ 10ರಂದು ರಾತ್ರಿ ಕೋರಮಂಗಲದಲ್ಲಿರುವ ಅಪಾರ್ಟ್ ಮೆಂಟಿನ ನಾಲ್ಕನೆ ಮಹಡಿಯಿಂದ ಕೆಳಗಿ ಬಿದ್ದು ಅರ್ಚನಾ ಮೃತಪಟ್ಟಿದ್ದಳು. ಮದುವೆಯಾಗುವಂತೆ ಅರ್ಚನಾ ಒತ್ತಾಯಿಸಿದಾಗ, ಆದೇಶ್ ಇದಕ್ಕೆ ನಿರಾಕರಿಸಿದ್ದ ಎನ್ನಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮದ್ಯದ ಅಮಲಿನಲ್ಲಿ ಆದೇಶ್, ಅರ್ಚನಾಳನ್ನು ಬಲವಾಗಿ ತಳ್ಳಿದ್ದ ಎಂದು ಆರೋಪಿಸಲಾಗಿದೆ.
ದೂಡಿದ ರಭಸಕ್ಕೆ ಅರ್ಚನಾ ಮೇಲಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ ಆದೇಶ್ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಮೂಲತ: ಕಾಸರಗೋಡು ಜಿಲ್ಲೆಯವನಾಗಿದ್ದಾನೆ.
ಈ ಜೋಡಿ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಆದೇಶ್ನ ವಿಚಾರಣೆಯಿಂದ ತಿಳಿದುಬಂದಿದೆ. ದುರ್ಘಟನೆ ನಡೆದ ರಾತ್ರಿ ಇಬ್ಬರೂ ಮದ್ಯ ಸೇವಿಸಿದ್ದರು. ಅರ್ಚನಾ ಬಾಲ್ಕನಿಯಿಂದ ಜಾರಿಬಿದ್ದು, ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟು ಹೊತ್ತಿಗೆ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು ಎಂದು ಆದೇಶ್ ಪೊಲೀಸರಿಗೆ ತಿಳಿಸಿದ್ದಾರೆ.
ಮಹಿಳೆಯ ಸಾವಿನಲ್ಲಿ ಆದೇಶ್ ಪಾತ್ರವಿದೆ ಎಂಬ ಶಂಕೆಯ ಮೇರೆಗೆ ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆತನನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲು ಅರ್ಚನಾ ಅವರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ