ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ಗಗನಸಖಿಯೊಬ್ಬರು ತಾನು ವಾಸವಿದ್ದ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಸಾವಿಗೀಡಾಗಿದ್ದು, ಕೊಲೆ ಆರೋಪದ ಮೇಲೆ ಆಕೆಯ ಬಾಯ್ ಫ್ರೆಂಡ್ ಸಾಫ್ಟ್ವೇರ್ ಇಂಜಿನಿಯರ್ ನನ್ನು ಸೋಮವಾರ ಬಂಧಿಸಲಾಗಿದೆ.
ಮೃತ ಗಗನಸಖಿಯನ್ನು ಹಿಮಾಚಲ ಪ್ರದೇಶ ಮೂಲದ ಅರ್ಚನಾ ಧಿಮಾನ್(28) ಎಂದು ಗುರುತಿಸಲಾಗಿದೆ. ಅರ್ಚನಾ ಸಾಯುವ ನಾಲ್ಕು ದಿನಗಳ ಮುನ್ನ ಕಳೆದ ಶುಕ್ರವಾರ ದುಬೈನಿಂದ ಬೆಂಗಳೂರಿಗೆ ಬಂದಿದ್ದರು.
ವರದಿಯ ಪ್ರಕಾರ, ಅರ್ಚನಾ ತನ್ನ ಗೆಳೆಯ ಕೇರಳದ ಆದೇಶ್ನೊಂದಿಗೆ ಕೋರಮಂಗಲ ಉಪನಗರದಲ್ಲಿರುವ ರೇಣುಕಾ ರೆಸಿಡೆನ್ಸಿಯಲ್ಲಿ ಇದ್ದರು. ಅರ್ಚನಾ ಬಾಲ್ಕನಿಯಿಂದ ಬಿದ್ದ ತಕ್ಷಣ, ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಇದನ್ನು ಓದಿ: ಬೆಂಗಳೂರು: 4ನೇ ಮಹಡಿಯಿಂದ ಜಿಗಿದು ಗಗನಸಖಿ ಆತ್ಮಹತ್ಯೆ
ಅರ್ಚನಾ ಅವರನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿದ್ದಾನೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಇಬ್ಬರು ಆಗಾಗ ಜಗಳವಾಡುತ್ತಿದ್ದರು. ಆಕೆಯನ್ನು ಕೊಲ್ಲುವ ಉದ್ದೇಶದಿಂದ ಆದೇಶ್ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ತಳ್ಳಿದ್ದಾನೆ ಎಂದು ಅವರು ದೂರಿದ್ದಾರೆ.
ಪೊಲೀಸರ ಪ್ರಕಾರ, ಅರ್ಚನಾ ಟೆಕ್ಕಿ ಆದೇಶ್ ನನ್ನು ಡೇಟಿಂಗ್ ಆ್ಯಪ್ನಲ್ಲಿ ಭೇಟಿಯಾಗಿದ್ದಳು ಮತ್ತು ಕಳೆದ ಆರು ತಿಂಗಳಿಂದ ಆತನೊಂದಿಗೆ ಸಂಬಂಧ ಹೊಂದಿದ್ದಳು.
ಉಪ ಪೊಲೀಸ್ ಆಯುಕ್ತ ಸಿ.ಕೆ. ಬಾಬಾ ಅವರು ಅರ್ಚನಾ ತಂದೆ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿದ್ದಾರೆ ಮತ್ತು ಆದೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement