ಬೆಂಗಳೂರು: ಸಾರಿಗೆ ನೌಕರರ ವೇತನ ಹೆಚ್ಚಳ ಕುರಿತು ಚರ್ಚಿಸಲು ಕೆಎಸ್ಆರ್'ಸಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ನಡುವೆ ಸಚಿವ ಶ್ರೀರಾಮುಲು ಅವರು ಬುಧವಾರ ನಡೆಸಿದ ಎರಡನೇ ಸುತ್ತಿನ ಸಭೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ವೇತನ ಹೆಚ್ಚಳದ ಚೆಂಡು ಇದೀಗ ಮುಖ್ಯಮಂತ್ರಿಗಳ ಅಂಗಳ ತಲುಪಿದೆ.
ಸಾರಿಗೆ ನೌಕರರಿಗೆ ಶೇ.14ರಷ್ಟು ವೇತನ ಹೆಚ್ಚಿಸುವ ರಾಜ್ಯ ಸರ್ಕಾರದ ಭರವಸೆಯನ್ನು ಸಾರಿಗೆ ಸಂಘಟನೆಗಳ ಮುಖಂಡರು ತಿರಸ್ಕರಿಸಿದ್ದು, ಶೇ.20ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದಾರೆ.
2ನೇ ಸಭೆಯೂ ವಿಫಲವಾದ ಕಾರಣ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಾಗಿದ್ದು, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಂಘಗಳು ಮಾ.21ರವರೆಗೆ ಸರ್ಕಾರಕ್ಕೆ ಗಡುವು ನೀಡಿವೆ.
ಸಾರಿಗೆ ಕಾರ್ಯಕರ್ತ ಮತ್ತು ಕೆಎಸ್ಆರ್ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಎಚ್ವಿ ಅನಂತ ಸುಬ್ಬರಾವ್ ಮಾತನಾಡಿ, ಮಾರ್ಚ್ 8 ರ ಸಭೆಯಲ್ಲಿ ಸಾರಿಗೆ ಸಚಿವರು ಶೇಕಡಾ 8-10 ರಷ್ಟು ವೇತನ ಹೆಚ್ಚಳ ಮಾಡುವುದಾಗಿ ತಿಳಿಸಿದ್ದರು, ಕೆಎಸ್ಆರ್ಟಿಸಿ ಎಂಡಿ ಶೇಕಡಾ 10-14 ರಷ್ಟು ಹೆಚ್ಚಳ ಭರವಸೆ ನೀಡಿದರು. "ನಮ್ಮ ಆರಂಭಿಕ ಬೇಡಿಕೆಯು ಕನಿಷ್ಟ 25 ಶೇಕಡಾ ಹೆಚ್ಚಳವಾಗಿದ್ದರೂ, ಅದನ್ನು ಶೇಕಡಾ 20 ಕ್ಕೆ ಇಳಿಸಿದ್ದೇವೆ. ಆದರೆ ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರವು ಇನ್ನೂ ಆರ್ಥಿಕ ಚೇತರಿಕೆಯ ಹಂತದಲ್ಲಿದೆ ಎಂದು ಎಂಡಿ ಹೇಳಿದರು. ಆದರೆ, ಸರ್ಕಾರವು ಸರ್ಕಾರಿ ನೌಕರರಿಗೆ ಶೇ 17 ಮತ್ತು ಕೆಪಿಟಿಸಿಎಲ್ ಕಾರ್ಮಿಕರಿಗೆ ಶೇ 20 ರಷ್ಟು ಮಧ್ಯಂತರ ಪರಿಹಾರವನ್ನು ನೀಡಿದೆ ಹೀಗಾಗಿ ನಮ್ಮ ವೇತನವನ್ನು ಶೇ.20ರಷ್ಟು ಹೆಚ್ಚಳ ಮಾಡಬೇಕೆಂದು ಆಗ್ರಹಿಸುತ್ತಿದ್ದೇವೆಂದು ಹೇಳಿದ್ದಾರೆ.
“ನಮ್ಮ ಬೇಡಿಕೆಯ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಎಂಡಿ ಭರವಸೆ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಸಿಎಂ ಬಳಿಗೆ ನಿಯೋಗ ಕೊಂಡೊಯ್ಯುವ ಯೋಜನೆಯೂ ಇದೆ ಎಂದು ಸುಬ್ಬರಾವ್ ತಿಳಿಸಿದರು.
ಯುಗಾದಿಯ ಒಂದು ದಿನ ಮುಂಚಿತವಾಗಿಯೇ ಮಾರ್ಚ್ 21 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಾರಿಗೆ ಸಂಸ್ಥೆಗಳು ಮುಂದಾಗಿವೆ. ಒಂದು ವೇಳೆ ಸಾರಿಗೆ ನೌಕರರು ಹಾಗೂ ಸರ್ಕಾರದ ಒಮ್ಮತದ ನಿರ್ಧಾರಕ್ಕೆ ಬಾರದೇ ಹೋದರಲ್ಲಿ ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಿಂದ ತಮ್ಮ ಊರುಗಳಿಗೆ ತೆರಳುವ ಲಕ್ಷಾಂತರ ಜನರು ಸಂಕಷ್ಟಕ್ಕೊಳಗಾಗಲಿದ್ದಾರೆ.
Advertisement