ಮುಸ್ಲಿಮರ ಶೇ 4ರಷ್ಟು ಮೀಸಲಾತಿ ರದ್ದು: ಸರ್ಕಾರದ ನಿರ್ಧಾರದ ಬಗ್ಗೆ ತಜ್ಞರು ಏನಂತಾರೆ?

2B ಮೀಸಲಾತಿಯು ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾಗಿತ್ತು. ಆದರೆ, ಇಡಬ್ಲ್ಯುಎಸ್ ಮೀಸಲಾತಿಯು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮಾತ್ರ ಲಭ್ಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮುಸ್ಲಿಮರಿಗೆ ಇತರೆ ಹಿಂದುಳಿದ ವರ್ಗಗಳ 2ಬಿ (ಧಾರ್ಮಿಕ ಅಲ್ಪಸಂಖ್ಯಾತರು) ವರ್ಗದಡಿಯಲ್ಲಿ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಪಡಿಸುವ ಮೂಲಕ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಮೀಸಲಾತಿಯ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರದಿಂದ ಸಮುದಾಯದ ಸದಸ್ಯರಲ್ಲಿ ಅಭದ್ರತೆ ಮತ್ತು ಗೊಂದಲಕ್ಕೆ ಕಾರಣವಾಗಿದೆ.

ಶುಕ್ರವಾರದ ಕ್ಯಾಬಿನೆಟ್ ನಿರ್ಧಾರದ ಪ್ರಕಾರ, 2B ಪ್ರವರ್ಗವನ್ನು ರದ್ದುಗೊಳಿಸಲಾಗಿದೆ ಮತ್ತು ಮುಸ್ಲಿಮರಿಗೆ ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯುಎಸ್) ಅಡಿಯಲ್ಲಿ ಮೀಸಲಾತಿಯನ್ನು ನೀಡಲಾಗಿದೆ. ಮುಸ್ಲಿಮರು ಈಗ ಇಡಬ್ಲ್ಯುಎಸ್ ಅಡಿಯಲ್ಲಿ ಕಡಿಮೆ ಮೀಸಲಾತಿಯನ್ನು ಪಡೆಯುತ್ತಾರೆಯೇ ಎಂದು ಸಮುದಾಯ ಪ್ರಶ್ನಿಸುತ್ತಿದೆ.

2B ಮೀಸಲಾತಿಯು ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾಗಿತ್ತು. ಆದರೆ, ಇಡಬ್ಲ್ಯುಎಸ್ ಮೀಸಲಾತಿಯು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮಾತ್ರ ಲಭ್ಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿಎಸ್ ದ್ವಾರಕಾನಾಥ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿ, ಕರ್ನಾಟಕದಲ್ಲಿ (ಅಂದಿನ ಮೈಸೂರು ರಾಜ್ಯವನ್ನು ಒಳಗೊಂಡಂತೆ), ನಾಲ್ವಡಿ ಕೃಷ್ಣರಾಜ ಒಡೆಯರ್, ಹಾವನೂರು ಅಥವಾ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಅವರ ಅನೇಕ ವರದಿಗಳು ಮುಸ್ಲಿಮರನ್ನು 'ಧಾರ್ಮಿಕ ಹಿಂದುಳಿದ ವರ್ಗ' ಎಂದು ಪರಿಗಣಿಸಿದೆ ಮತ್ತು ಕೇವಲ ಮೀಸಲಾತಿಗಾಗಿ 'ಧರ್ಮ' ಎಂದು ಪರಿಗಣಿಸಿಲ್ಲ ಎಂದಿದ್ದಾರೆ.

‘ಮುಸ್ಲಿಮರು ಆತಂಕ ಪಡಬಾರದು’

ಇಂದಿರಾ ಸಾಹ್ನಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಸರ್ಕಾರವು ಯಾವುದೇ ಸಮುದಾಯವನ್ನು ಮೀಸಲಾತಿಯಿಂದ ತೆಗೆದುಹಾಕಲು ಅಥವಾ ಸೇರಿಸಲು ಬಯಸಿದಾಗ, ಆ ಸಮುದಾಯದ ಪ್ರಾಯೋಗಿಕ ಡೇಟಾ ಇರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಸರ್ಕಾರದ ಬಳಿ ಅಂತಹ ಡೇಟಾ ಇಲ್ಲ ಮತ್ತು ಯಾವುದೇ ಸ್ಪಷ್ಟತೆ ಇಲ್ಲ ಎಂದು ಅವರು ಹೇಳಿದರು.

ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಮಾತನಾಡಿ, ಕಳೆದ ಎಲ್ಲಾ ವರ್ಷಗಳಲ್ಲಿ ಮುಸ್ಲಿಮರಿಗೆ ವರ್ಗ (2ಬಿ) ಅಡಿಯಲ್ಲಿ ಕೋಟಾ ನೀಡಲಾಗಿದೆ. ಇದು ಒಂದು ನಿರ್ದಿಷ್ಟ ಧರ್ಮಕ್ಕೆ ಮಾತ್ರ ಮೀಸಲಾಗಿಲ್ಲ. ನಾವು ಅದನ್ನು ಸರಿಪಡಿಸಿದ್ದೇವೆ. ಕರ್ನಾಟಕದಲ್ಲಿ ಶೇ 97 ರಷ್ಟು ಸಮುದಾಯಗಳು/ಜಾತಿಗಳು ಮೀಸಲಾತಿ ಹೊಂದಿವೆ. ಇಡಬ್ಲ್ಯುಎಸ್ ಕೋಟಾವು ಈ ಯಾವುದೇ ಮೀಸಲಾತಿ ಅಡಿಯಲ್ಲಿ ಇಲ್ಲದವರಿಗೆ ಮಾತ್ರ ಮೀಸಲಾಗಿದೆ. ಕರ್ನಾಟಕದ ಜನಸಂಖ್ಯೆಯ ಶೇ 3ರಷ್ಟು ಜನರು ಶೇ 10ರಷ್ಟು ಇಡಬ್ಲ್ಯುಎಸ್ ಕೋಟಾವನ್ನು ಪಡೆಯಲು ಅರ್ಹರಾಗಿರುವ ಕಾರಣ ಮುಸ್ಲಿಮರು ದೊಡ್ಡ ಭಾಗವನ್ನು ಪಡೆಯುತ್ತಿರುವುದರಿಂದ ಆತಂಕಪಡಬೇಕಾಗಿಲ್ಲ ಎಂದು ಅವರು ಹೇಳಿದರು.

ಸರ್ಕಾರದ ಮೀಸಲಾತಿ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಿದ್ಧವಾಗಿದ್ದೇವೆ. ಅಲ್ಲದೆ, ತಾವು ಮತ್ತೆ ಅಧಿಕಾರಕ್ಕೆ ಬಂದರೆ, ಈ ಕ್ಯಾಬಿನೆಟ್ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತೇವೆ  ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. 

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, 1990ರ ದಶಕದ ಆರಂಭದಿಂದಲೂ ಮುಸ್ಲಿಮರಿಗೆ ಕೋಟಾ ಸವಲತ್ತು ನೀಡಲಾಗಿದೆ. ಮುಸ್ಲಿಮರು ಈಗ ಇಡಬ್ಲ್ಯುಎಸ್ ಅಡಿಯಲ್ಲಿ ಇತರ ಜಾತಿಗಳೊಂದಿಗೆ ಹೋರಾಡಬೇಕಾಗಿದೆ. ನಾವು ಇದಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಖಂಡಿತವಾಗಿಯೂ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಅವರು ಹೇಳಿದರು. 

ರಾಜ್ಯ ಸಚಿವ ಸಂಪುಟದ ಈ ನಿರ್ಧಾರವನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com