ಬೆಂಗಳೂರು: ಪ್ರತಿ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಕುಟುಂಬಗಳಿಗೆ 10 ಕೆಜಿ ಉಚಿತ ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆಯನ್ನು ಕಾಂಗ್ರೆಸ್ ಘೋಷಣೆ ಮಾಡಿದ್ದು, ಈ ಯೋಜನೆ ಅನುಷ್ಠಾನಕ್ಕೆ ಬಂದಿದ್ದೇ ಆದರೆ, ಮಕ್ಕಳಲ್ಲಿನ ಅಪೌಷ್ಟಿಕತೆ ದೂರಾಗಲಿದೆ ಎಂದು ಹೇಳಲಾಗುತ್ತಿದೆ.
ಚೈಲ್ಡ್ ರೈಟ್ಸ್ ಟ್ರಸ್ಟ್ನ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ್ ಶರ್ಮಾ ಮಾತನಾಡಿ, ಪ್ರತಿಯೊಬ್ಬರೂ ಇಂತಹ ಯೋಜನೆಯನ್ನು ಸ್ವಾಗತಿಸುತ್ತಿದ್ದಾರೆ. ಬಹುತೇಕ ಎಲ್ಲಾ ಸರ್ಕಾರಗಳು ಆಹಾರ ಭದ್ರತೆಗಾಗಿ ಕೆಲಸ ಮಾಡಿದೆ. 1960 ರ ದಶಕದಲ್ಲಿ, ಪಡಿತರ ಚೀಟಿಗಳನ್ನು ಪರಿಚಯಿಸಲಾಯಿತು. ಹಸಿವು ಮತ್ತು ಅಪೌಷ್ಟಿಕತೆಯನ್ನು ಪರಿಹರಿಸುವುದು ಇದರ ಉದ್ದೇಶವಾಗಿತ್ತು. ಆಹಾರ ಲಭ್ಯವಿದ್ದರೂ ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದ ಹುಡುಗಿಯರಲ್ಲಿ ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸಲಾಗಿಲ್ಲ. ಅಪೌಷ್ಟಿಕತೆಯ ವಿರುದ್ಧ ಹೋರಾಡಲು, ಇಂತಹ ಯೋಜನೆಗಳ ಜಾರಿಗೆ ತರುವುದು ಅವಶ್ಯಕವಾಗಿದೆ. ಕೆಲವರು ಇಂತಹ ಯೋಜನೆಗಳ ಬಗ್ಗೆ ವ್ಯಂಗ್ಯವಾಡಬಹುದು, ಆದರೆ ಆ ಜನರಿಗೆ ಸಮಾಜದ ವಾಸ್ತವತೆಯ ಅರಿವಿಲ್ಲ ಎಂದು ಹೇಳಿದ್ದಾರೆ.
ಯೋಜನೆಯಡಿಯಲ್ಲಿ ಅಕ್ಕಿ, ರಾಗಿ ಅಥವಾ ಜೋಳ ಮಾತ್ರವಲ್ಲದೆ, ಸರ್ಕಾರವು ಎಣ್ಣೆ ಮತ್ತು ಬೇಳೆಕಾಳುಗಳನ್ನು ಕೂಡ ನೀಡಬೇಕು. ಉಚಿತವಲ್ಲದಿದ್ದರೂ ಕನಿಷ್ಠ ಶುಲ್ಕವನ್ನು ವಿಧಿಸಬೇಕು, ಏಕೆಂದರೆ ಈ ಕ್ರಮವು ಹೆಚ್ಚಿನ ಜನರಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುತ್ತದೆ ಎಂದು ತಿಳಿಸಿದ್ದಾರೆ.
ಆದರೆ, ಯೋಜನೆ ಅಗತ್ಯವಿರುವವರಿಗೆ ತಲುವಂತೆ ಮಾಡುವುದು, ಮಧ್ಯವರ್ತಿಗಳ ನಿಯಂತ್ರಿಸುವುದೇ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಯೋಜನೆಗೆ ಅರ್ಹರಾಗದವರು ಪಡಿತರ ಪಡೆಯದೆ ಬಿಪಿಎಲ್ ಕಾರ್ಡ್ ಗಳ ತ್ಯಜಿಸುವ ಮನಸ್ಥಿತಿಗಳು ಬರಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮತ್ತು ಆತ್ಮಸಾಕ್ಷಿಯ ಅಗತ್ಯವಿದೆ.
ಅಕ್ರಮ ದಾಸ್ತಾನುಗಳ ತಡೆಯುವುದು, ಪ್ರಾವಿಷನ್ ಸ್ಟೋರ್ ಗಳಿಗೆ ಮಾರಾಟ ಮಾಡುವುದು. ಹಳೆಯ ಪಡಿತರಗಳನ್ನು ವಿತರಿಸುವುದು, ಮಳೆಯಿಂದಾಗಿ ಧಾನ್ಯಗಳು ನಾಶಗೊಳ್ಳದಂತೆ ನೋಡಿಕೊಳ್ಳುವುದು ಹಾಗೂ ಭ್ರಷ್ಟಾಚಾರ ತಡೆಯುವುದು ಸರ್ಕಾರದ ಮುಂದಿರುವ ಮತ್ತೊಂದು ಸವಾಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.
Advertisement