ಬನ್ನೇರುಘಟ್ಟ: ಆನೆ ತುಳಿತಕ್ಕೆ ಬುಡಕಟ್ಟು ಸಮುದಾಯದ ಮಹಿಳೆ ಬಲಿ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ (ಬಿಎನ್‌ಪಿ)ಲ್ಲಿ ಆನೆ ದಾಳಿಗೆ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ (ಬಿಎನ್‌ಪಿ)ಲ್ಲಿ ಆನೆ ದಾಳಿಗೆ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

ನಾಗಮ್ಮ (45) ಆನೆ ತುಳಿತಕ್ಕೆ ಸಾವನ್ನಪ್ಪಿದ ಮಹಿಳೆಯಾಗಿದ್ದಾರೆ. ಘಟನೆ ನಡೆದ ಸ್ಥಳವು ಬನ್ನೇರುಘಟ್ಟ ಜೈವಿಕ ಉದ್ಯಾನವನದ (ಬಿಬಿಪಿ) ನಿಯಂತ್ರಣ ಮತ್ತು ನಿರ್ವಹಣೆಯಲ್ಲಿದೆ ಎಂದು ತಿಳಿದುಬಂದಿದೆ.

ಮೃತ ಮಹಿಳೆ ನಾಗಮ್ಮ ಅವರು, ಒಂದು ವರ್ಷದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿರುವ ಕುಮಾರ್ ಅವರ ತಾಯಿಯಾಗಿದ್ದಾರೆ. ಕುಮಾರ್ ಅವರು ಮೃಗಾಲಯದಲ್ಲಿರಾತ್ರಿ ವೇಳೆ ವಾಚರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಆನೆಗಳು ಮೃಗಾಲಯದ ಪ್ರದೇಶದಲ್ಲಿ ಅಲೆದಾಡದಂತೆ ನೋಡಿಕೊಳ್ಳುವುದು ಕುಮಾರ್ ಅವರ ಕಾರ್ಯವಾಗಿದೆ.

ಘಟನೆ ನಡೆದಾಗ ನಾಗಮ್ಮ ತನ್ನ ಮಗನನ್ನು ಭೇಟಿ ಮಾಡಲು ಆಹಾರದೊಂದಿಗೆ ಅರಣ್ಯ ಪ್ರದೇಶದ ಮೂಲಕ ನಡೆದು ಬರುತ್ತಿದ್ದರು ಎಂದು ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ನಡೆದಿರುವುದು ದುರದೃಷ್ಟಕರ. ಅರಣ್ಯ ಇಲಾಖೆ ಅಡಿಯಲ್ಲಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲಾಗುವುಹು ಎಂದು ತಿಳಿಸಿದ್ದಾರೆ.

ಆನೆ ದಾಳಿ ನಡೆಸಿದ ಸಂದರ್ಭದಲ್ಲಿ ನಾಗಮ್ಮ ಅವರ ಜೊತೆಗೆ ಇನ್ನೂ 3-4 ಜನರಿದ್ದರು. ಆನೆ ಹತ್ತಿರ ಬರುತ್ತಿದ್ದಂತೆಯೇ ಉಳಿದವರು ತಪ್ಪಿಸಿಕೊಂಡು ಓಡಿದ್ದಾರೆ. ಆದರೆ, ನಾಗಮ್ಮ ಅವರಿಗೆ ಓಡಲು ಸಾಧ್ಯವಾಗಿಲ್ಲ. ಈ ಪ್ರದೇಶವು ಹುಲಿಗಳು ಸೇರಿದಂತೆ ಇತರೆ ವನ್ಯಜೀವಿಗಳ ನೆಲೆಯಾಗಿದ್ದು, ಆಗಾಗ್ಗೆ ಆನೆಗಳು ಅಲೆದಾಡುತ್ತಿರುತ್ತವೆ. ಸುರಕ್ಷಣಾ ಕಾರಣಗಳಿಂದಲೇ ಅರಣ್ಯ ಪ್ರದೇಶದಲ್ಲಿ ನಡೆದುಕೊಂಡು ಹೋಗದಂತೆ ಎಚ್ಚರಿಕೆಗಳನ್ನು ನೀಡಲಾಗಿದೆ. ಆದರೆ, ಬುಡಕಟ್ಟು ಸಮುದಾಯದ ಜನರು ನಮ್ಮ ಸೂಚನೆಗಳನ್ನು ಪಾಲನೆ ಮಾಡುವುದಿಲ್ಲ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಹಿಂದೆ ಪಶುವೈದ್ಯ ಡಾ.ವಿಶ್ವನಾಥ್ ಅವರು ಮೃಗಾಲಯದ ಆವರಣದಲ್ಲಿ ಸಾವನ್ನಪ್ಪಿದ್ದರು. ಇದೀಗ ನಾಗಮ್ಮ ಅವರ ಸಾವು ಸಂಭವಿಸಿರುವುದು ಎರಡನೇ ಘಟನೆಯಾಗಿದೆ ಎಂದು ಅರಣ್ಯಾಧಿಕಾರಿಗಳು ಸ್ಮರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com