ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ 2 ಗಂಟೆಯವರೆಗೂ ಬಿಸಿಲು ಕಾಣಿಸಿಕೊಂಡಿದ್ದರೂ, ನಂತರ ಏಕಾಏಕಿ ಜೋರು ಮಳೆ ಸುರಿಯಲಾರಂಭಿಸಿತು. ಶಿವಾಜಿನಗರ, ಕೆ. ಆರ್. ಸರ್ಕಲ್, ಕೆ.ಆರ್. ಮಾರುಕಟ್ಟೆ, ಮೆಜೆಸ್ಟಿಕ್, ಶಾಂತಿನಗರ, ಎಂಜಿ ರಸ್ತೆ, ಬಿನ್ನಿಗಾನಹಳ್ಳಿ ಮೊದಲಾದ ಕಡೆಗಳಲ್ಲಿ ಭರ್ಜರಿ ಮಳೆಯಾಗಿದ್ದು,ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.
ಸಂಜೆ 4-30ರ ಸುಮಾರಿನಲ್ಲಿಯೇ ಮಬ್ಬು ಕತ್ತಲಿನ ಅನುಭವವಾಯಿತು. ಇದು ವಾಹನ ಸವಾರರಿಗೆ ಸಮಸ್ಯೆ ಉಂಟು ಮಾಡಿತು. ಮಳೆಯಿಂದಾಗಿ ನಗರದಲ್ಲಿಯೂ ಟ್ರಾಫಿಕ್ ಹೆಚ್ಚಳವಾಗಿ, ಕೆಲವೆಡೆ ಗಂಟೆಗಂಟೆಗೆ ವಾಹನ ದಟ್ಟಣೆ ಕಂಡುಬಂದಿತು. ಕೆಲಸ ಮುಗಿಸಿ ಮನೆಗೆ ಹೊರಟವರು ಮಳೆಗೆ ಸಿಕ್ಕಿಕೊಳ್ಳುವ ಆತಂಕದಲ್ಲಿದ್ದರು. ನಂತರ ಸ್ವಲ್ಪ ಮಳೆ ಬಿಡುವು ನೀಡಿತು.
ಈ ಮಧ್ಯೆ ಇಂದಿನಿಂದ ಇನ್ನೂ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಹಲವೆಡೆ, ಕರಾವಳಿಯ ಕೆಲವೆಧಿಡೆ, ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ ಜಿಲ್ಲೆಯ ಕೆಲವು ಕಡೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಯೆಲ್ಲೊಅಲರ್ಟ್ ನೀಡಿತ್ತು.
Advertisement