ಮುಂಗಾರು ಕೊರತೆ; ಕುಸಿದ ವಿದ್ಯುತ್ ಉತ್ಪಾದನೆ- ಹೆಚ್ಚಿದ ಬೇಡಿಕೆ: ಮಿತ ವಿದ್ಯುತ್ ಪೂರೈಕೆಗೆ ಸರ್ಕಾರ ನಿರ್ಧಾರ!

ಮುಂಗಾರು ವೈಫಲ್ಯದಿಂದ ರಾಜ್ಯದಲ್ಲಿ ವಿದ್ಯುತ್ ಬೇಡಿಕೆಯ ಪ್ರಮಾಣ ಬಹಳ ಹೆಚ್ಚಾಗಿದ್ದು, ಮಿತ ವಿದ್ಯುತ್ ಪೂರೈಕೆಗೆ ಇಂಧನ ಇಲಾಖೆ ನಿರ್ಧರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮುಂಗಾರು ವೈಫಲ್ಯದಿಂದ ರಾಜ್ಯದಲ್ಲಿ ವಿದ್ಯುತ್ ಬೇಡಿಕೆಯ ಪ್ರಮಾಣ ಬಹಳ ಹೆಚ್ಚಾಗಿದ್ದು, ಮಿತ ವಿದ್ಯುತ್ ಪೂರೈಕೆಗೆ ಇಂಧನ ಇಲಾಖೆ ನಿರ್ಧರಿಸಿದೆ.

ಈ ಉದ್ದೇಶಕ್ಕಾಗಿ ಇಂಧನ ಇಲಾಖೆಯು ಶೀಘ್ರದಲ್ಲೇ ಆದ್ಯತೆ ಮತ್ತು ಆದ್ಯತೆಯೇತರ ಗ್ರಾಹಕರನ್ನು ಪಟ್ಟಿ ಮಾಡಲಿದೆ. ಕೊರತೆ ನೀಗಿಸಲು ರಾಜ್ಯ ಸರ್ಕಾರ ಇತರ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ಕ್ರಮ ಕೈಗೊಂಡಿದೆ.

ಇಲಾಖೆಯ ಅಧಿಕಾರಿಗಳ ಪ್ರಕಾರ, ಕಳೆದ ವರ್ಷ ಇದೇ ಅವಧಿಗೆ 12,000 ಮೆಗಾವ್ಯಾಟ್‌ ಬೇಡಿಕೆಯಿತ್ತು, ಆದರೆ ಈಗ ಅಕ್ಟೋಬರ್‌ನಲ್ಲಿ ಗರಿಷ್ಠ ಬೇಡಿಕೆ 15000 ಮೆಗಾವ್ಯಾಟ್ ಆಗಿದೆ. ರಾಜ್ಯವು 1500-2000 ಮೆಗಾವ್ಯಾಟ್ ಉತ್ಪಾದನೆಯಲ್ಲಿ ಕೊರತೆ ಎದುರಿಸುತ್ತಿದೆ. ಹೀಗಾಗಿ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಕಡಿಮೆ ಮಾಡಲು ನಿರ್ಧರಿಸಿದೆ.

ನಿರಂತರ ಜ್ಯೋತಿಯಂತಹ ಯೋಜನೆಗಳ ಅಡಿಯಲ್ಲಿ ಗ್ರಾಹಕರಿಗೆ ವಿದ್ಯುತ್ ಪೂರೈಕೆಗೆ ನಿರ್ಬಂದ ಹೇರಲಾಗುತ್ತದೆ. ಕೈಗಾರಿಕೆಗಳು, ಆಸ್ಪತ್ರೆಗಳು ಮತ್ತು ಇತರ ಅಗತ್ಯ ಸೇವೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಕಡಿತ ಇರುವುದಿಲ್ಲ. ಆದಾಗ್ಯೂ ಮನೆ ಬಳಕೆಯ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ಕಡಿತ ಇರುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ಬಿಕ್ಕಟ್ಟನ್ನು ತಗ್ಗಿಸಲು ಆದ್ಯತೆಯ ಆಧಾರದ ಮೇಲೆ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಹೇಳಿದ್ದಾರೆ.

ಸಿಇಇ (ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್) ಶ್ರೇಣಿಯ ನೋಡಲ್ ಅಧಿಕಾರಿಗಳು ಪ್ರತಿ ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆಯ ಮೇಲ್ವಿಚಾರಣೆ ಮಾಡುತ್ತಾರೆ. ಈ ನೋಡಲ್ ಅಧಿಕಾರಿಗಳು 220ಕೆವಿ ಕೇಂದ್ರಗಳಿಗೆ ಮಂಜೂರಾದ ವಿದ್ಯುತ್ ಪೂರೈಕೆ ಮೇಲ್ವಿಚಾರಣೆ ಮಾಡುತ್ತಾರೆ ಎಂದು ಹೆಚ್ಚುವರಿ ಕಾರ್ಯದರ್ಶಿ (ಇಂಧನ ಇಲಾಖೆ) ಗೌರವ್ ಗುಪ್ತಾ  ತಿಳಿಸಿದ್ದಾರೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಪ್ರಕಾರ, ಅಕ್ಟೋಬರ್ 6 ರಂದು ಬೆಸ್ಕಾಂ ಮಿತಿಯಲ್ಲಿ 7,386 ಮೆಗಾ ವ್ಯಾಟ್ ಮತ್ತು ಬೆಂಗಳೂರು ನಗರದಲ್ಲಿ 3,645 ಮೆಗಾವ್ಯಾಟ್ ಬೇಡಿಕೆ ಇತ್ತು. ಈಗ ಹೆಚ್ಚುತ್ತಿರುವ  ಬೇಡಿಕೆಯನ್ನು ಪೂರೈಸಲು ರಾಜ್ಯವು ವಿದ್ಯುತ್ ಖರೀದಿಸಲು ಯೋಜಿಸುತ್ತಿದೆ. ಅಕ್ಟೋಬರ್‌ನಿಂದ ಮೇ 2024 ರವರೆಗೆ  ಪ್ರೀ ಸೋಲಾರ್ ಮತ್ತು ಪೋಸ್ಟ್ ಸೋಲಾರ್ ಸಮಯದಲ್ಲಿ ಉತ್ತರ ಪ್ರದೇಶದೊಂದಿಗೆ 300 ರಿಂದ 600 ಮೆಗಾ ವ್ಯಾಟ್ ವಿದ್ಯುತ್ ಖರೀದಿಸಲು ಮಾತುಕತೆ ನಡೆಸಿದೆ.

ಪಾವಗಡದಲ್ಲಿ ವಿದ್ಯುತ್ ಉತ್ಪಾದನೆ 800 ಮೆಗಾವ್ಯಾಟ್‌ಗೆ ಇಳಿಕೆ

ನವೆಂಬರ್ ನಿಂದ 2024ರ ಮುಂಗಾರು ಹಂಗಾಮಿನ ವರೆಗೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಇಂಧನ ಇಲಾಖೆಯು ಪಂಜಾಬ್‌ನಿಂದ ವಿನಿಮಯ ಯೋಜನೆಯಡಿ ವಿದ್ಯುತ್‌ ಪಡೆಯಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ವರ್ಷ ಆಗಸ್ಟ್‌ ತಿಂಗಳಲ್ಲಿ 17.000 ಮೆಗಾ ವ್ಯಾಟ್‌ನಷ್ಟು ವಿದ್ಯುತ್ಗೆ ಬೇಡಿಕೆ ಇತ್ತು.ಸೆಪ್ಟಂಬರ್ ನಲ್ಲಿ ಆಗಾಗ್ಗೆ ಮಳೆಯಾದ ಪರಿಣಾಮ ಬೇಡಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು, ಸದ್ಯ ವಿವಿಧ ವಲಯಗಳಿಂದ, ವಿಶೇಷವಾಗಿ ರೈತರಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈಗ ಉಷ್ಣ ವಿದ್ಯುತ್ ಉತ್ಪಾದನೆಯತ್ತ ಗಮನ ಹರಿಸಲಾಗಿದೆ.

ಮೋಡ ಕವಿದ ವಾತಾವರಣದಿಂದಾಗಿ ಪಾವಗಡ ಸೋಲಾರ್ ಪಾರ್ಕ್‌ನಲ್ಲಿ 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಕುಸಿದಿದೆ. ಪವನ ಯೋಜನೆಗಳಿಂದ ವಿದ್ಯುತ್ ಉತ್ಪಾದನೆಯು  2000 ಮೆಗಾ ವ್ಯಾಟ್ ನಿಂದ 400 ಮೆಗಾ ವ್ಯಾಟ್ ಗೆ ಇಳಿದಿದೆ. ನವೀಕರಿಸಬಹುದಾದ ಮೂಲಗಳಿಂದ 2000 ಮೆಗಾವ್ಯಾಟ್ ಕೊರತೆಯಿದೆ. ಹೀಗಾಗಿ ಉಷ್ಣ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ.

ಪ್ರಸ್ತುತ, ರಾಜ್ಯವು ಉಷ್ಣ ಯೋಜನೆಗಳಿಂದ ಮತ್ತು ವಿದ್ಯುತ್ ಖರೀದಿಯ ಮೂಲಕ 7000 ಮೆಗಾ ವ್ಯಾಟ್ ಪಡೆಯುತ್ತಿದೆ. ರಾಜ್ಯವು ತನ್ನ ಮೂರು ಶಾಖೋತ್ಪನ್ನ ಯೋಜನೆಗಳಿಂದ 1953 ಮೆಗಾ ವ್ಯಾಟ್ ಉತ್ಪಾದಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com