ಬೆಂಗಳೂರು: ಕುಡಿದ ಅಮಲಿನಲ್ಲಿ ಈಜಲು ತೆರಳಿದ್ದ 33 ವರ್ಷದ ವ್ಯಕ್ತಿಯೊಬ್ಬರು ವಿಭೂತಿಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ವಿಭೂತಿಪುರ ನಿವಾಸಿ ಸ್ಯಾಮ್ಯುಯೆಲ್ ಎಂದು ಗುರುತಿಸಲಾಗಿದೆ. ಅವರು ಬಾರ್ ಬೆಂಡಿಂಗ್ ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ಈಜಲು ಹೋಗುವುದಾಗಿ ಮನೆಯವರಿಗೆ ತಿಳಿಸಿ ಹೊರಟಿದ್ದಾರೆ. ಅವರು ಹೊರಡುವ ಮುನ್ನ ಮದ್ಯ ಸೇವಿಸಿದರು ಎಂಬುದು ತಿಳಿದುಬಂದಿದೆ.
ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ದಾರಿಹೋಕರು ರಕ್ಷಣೆಗೆ ಬಂದರೂ ಅವರನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
Advertisement