ಕೈಕೊಟ್ಟ ಮುಂಗಾರು: ಕಬ್ಬು ಫಸಲಿಗೆ ಹೊಡೆತ, ಸಕ್ಕರೆ ಉತ್ಪಾದನೆ ಕಡಿಮೆ, ಬೆಲೆ ಏರಿಕೆ ಸಾಧ್ಯತೆ!

ಈ ಬಾರಿಯ ಮಳೆ ಕೊರತೆಯ ಚಿಂತೆ ಕೇವಲ ರಾಜ್ಯದ  ರೈತರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಮಾತ್ರ ಸೀಮಿತವಾಗಿಲ್ಲ,  ಇದು ಈಗ ಎಲ್ಲಾ ರಾಜ್ಯಗಳಿಗೂ ಆತಂಕದ ವಿಷಯವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಈ ಬಾರಿಯ ಮಳೆ ಕೊರತೆಯ ಚಿಂತೆ ಕೇವಲ ರಾಜ್ಯದ  ರೈತರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಮಾತ್ರ ಸೀಮಿತವಾಗಿಲ್ಲ,  ಇದು ಈಗ ಎಲ್ಲಾ ರಾಜ್ಯಗಳಿಗೂ ಆತಂಕದ ವಿಷಯವಾಗಿದೆ.

ದೆಹಲಿಯಲ್ಲಿ ಗುರುವಾರ ನಡೆದ ಕಬ್ಬು ಮತ್ತು ಸಕ್ಕರೆ ಆಯುಕ್ತರ ಅಖಿಲ ಭಾರತ ಸಭೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಬರಗಾಲದ ಪರಿಸ್ಥಿತಿ ಮತ್ತು ನೀರಿನ ಬಿಕ್ಕಟ್ಟಿನ ಕುರಿತು ಚರ್ಚಿಸಲಾಯಿತು. ನೈಋತ್ಯ ಮುಂಗಾರು ಮಳೆಯ ಕೊರತೆಯಿಂದಾಗಿ ಕಬ್ಬು ಬೆಳೆಯುವ ಪ್ರದೇಶದ ಪ್ರಮಾಣ ಕಡಿಮೆಯಾಗಿದೆ, ಇದರಿಂದ ಕಬ್ಬಿನ ಗುಣಮಟ್ಟ ಮತ್ತು ಸಕ್ಕರೆ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ಕರ್ನಾಟಕವು ಭಾರತದಲ್ಲಿ ಮೂರನೇ ಅತಿದೊಡ್ಡ ಸಕ್ಕರೆ ಉತ್ಪಾದನ ರಾಜ್ಯವಾಗಿದೆ. ಭಾರತದ ಸಕ್ಕರೆ ಬೇಡಿಕೆಯ ಸುಮಾರು ಶೇ. 10 ರಷ್ಟು ಕರ್ನಾಟಕ ಪೂರೈಸುತ್ತದೆ.  ಈ ವರ್ಷ, ಕಳಪೆ ಮಳೆಯ ಕಾರಣ, ಈಗಾಗಲೇ ಕಬ್ಬಿನ ಉತ್ಪಾದನೆಯಲ್ಲಿ 10-15 ರಷ್ಟು ಕೊರತೆಯಿದೆ, ಪರಿಸ್ಥಿತಿ ಮುಂದುವರಿದರೆ ಇದು ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಕೊರತೆ ಉಂಟಾಗಲಿದೆ ಮತ್ತು ಇದು ಸಕ್ಕರೆ ಬೆಲೆಯಲ್ಲಿ ಏರಿಕೆಗೆ ಕಾರಣವಾಗಬಹುದು ಎಂದು ಸಭೆಯಲ್ಲಿ ಹಾಜರಿದ್ದ ಕರ್ನಾಟಕದ ಅಧಿಕಾರಿಗಳು  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ರೈತರು ಮತ್ತು ಅಧಿಕಾರಿಗಳ ಪ್ರಕಾರ, ಕಳೆದ ವರ್ಷ ರಾಜ್ಯದ ಕಬ್ಬು ರೈತರಿಗೆ ಬಂಪರ್ ವರ್ಷವಾಗಿತ್ತು. ಆದರೆ ಈಗ ಸಾಗುವಳಿ ಪ್ರದೇಶ ಕಡಿಮೆ ಆಗಿರುವುದರಿಂದ ಕಬ್ಬಿನ ಉತ್ಪಾದನೆ ಹಾಗೂ ಸಕ್ಕರೆ ಇಳುವರಿಯೂ ಕಡಿಮೆಯಾಗಲಿದೆ.

ಕಳೆದ ವರ್ಷ ಕರ್ನಾಟಕದಲ್ಲಿ 7.5 ಲಕ್ಷ ಹೆಕ್ಟೇರ್‌ನಲ್ಲಿ ಸಾಗುವಳಿ ಪ್ರದೇಶವಿದ್ದು, ಈ ವರ್ಷ ಒಂದು ಲಕ್ಷ ಹೆಕ್ಟೇರ್‌ ಕಡಿಮೆಯಾಗಿದೆ. ಕಳೆದ ವರ್ಷ 705 ಲಕ್ಷ ಟನ್ ಕಬ್ಬು ಉತ್ಪಾದನೆ ಆಗಿದ್ದರೆ, ಈ ವರ್ಷ 520 ಲಕ್ಷ ಟನ್ ಕಬ್ಬು ಉತ್ಪಾದನೆಯಾಗುವ ನಿರೀಕ್ಷೆ ಇದೆ.

ಕಳೆದ ವರ್ಷ, ಪ್ರತಿ ಹೆಕ್ಟೇರ್‌ಗೆ ಇಳುವರಿ 94 ಟನ್‌ಗಳಷ್ಟಿತ್ತು, ಈ ವರ್ಷ, ಇದು ಸುಮಾರು 80 ಟನ್‌ಗಳ ನಿರೀಕ್ಷೆಯಿದೆ, ಕಳೆದ ವರ್ಷ 6.10 ಕೋಟಿ ಟನ್ ಕಬ್ಬು ಅರೆಯಲಾಗಿದ್ದು, ಈ ವರ್ಷ 4-5 ಕೋಟಿ ಟನ್ ಕಬ್ಬು ಅರೆಯುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

ದಕ್ಷಿಣ ಕರ್ನಾಟಕದಲ್ಲಿ ಮಾತ್ರ, ವರ್ಷಕ್ಕೆ ಎರಡು ಬಾರಿ ಕಬ್ಬು ನಾಟಿ ನಡೆಯುತ್ತದೆ  ಜುಲೈ ಅಂತ್ಯ ಮತ್ತು ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ನಾಟಿ ಮಾಡಲಾಗುತ್ತದೆ. ಭಾರತದ ಉಳಿದ ಭಾಗಗಳಲ್ಲಿ, ಅಕ್ಟೋಬರ್/ನವೆಂಬರ್‌ನಲ್ಲಿ ನಾಟಿ ಮಾಡಲಾಗುತ್ತದೆ.

ಈ ಪ್ರದೇಶಗಳು ಕೊರತೆ ಮಳೆ ಮತ್ತು ಕಳಪೆ ವಿದ್ಯುತ್ ಪೂರೈಕೆಯನ್ನು ಎದುರಿಸಬೇಕಾಗುತ್ತದೆ. ಜುಲೈನಲ್ಲಿ ಬೆಳೆಗಳನ್ನು ಹಾಕಿದ ರೈತರು ಯಾವುದೇ ಬೆಳವಣಿಗೆಯನ್ನು ಕಾಣುತ್ತಿಲ್ಲ, ಕೆಲವರು ಅದನ್ನು ಕ್ರಷಿಂಗ್ ಘಟಕಗಳಿಗೆ ಸರಬರಾಜು ಮಾಡುವ ಬದಲು ಉತ್ಪನ್ನವಾಗಿ ಮಾರಾಟ ಮಾಡುತ್ತಿದ್ದಾರೆ, ಇದು ಸಕ್ಕರೆ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com