ಬೆಂಗಳೂರು: ತುರ್ತು ಸೇವೆಗಳಿಂದ ನಿರ್ಣಾಯಕ ಸಮಯದಲ್ಲಿ ರೋಗಿಗಳ ಜೀವವನ್ನು ಉಳಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ತುರ್ತು ಚಿಕಿತ್ಸಾ ವಿಭಾಗಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಹೇಳಿದರು.
ವೈದೇಹಿ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದಲ್ಲಿ (ವಿಮ್ಸ್) ಶನಿವಾರ ನಡೆದ 3ನೇ ವಾರ್ಷಿಕ ರಾಜ್ಯ ಮಟ್ಟದ ತುರ್ತು ವೈದ್ಯಕೀಯ ಸಮ್ಮೇಳನವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ರಾಜ್ಯದಲ್ಲಿ ತುರ್ತು ಚಿಕಿತ್ಸಾ ವಿಭಾಗಗಳಿವೆ. ಆದರೆ, ವೈದ್ಯರ ಕೌಶಲ್ಯವನ್ನು ಹೆಚ್ಚಿಸುವ ಹಾಗೂ ತುರ್ತು ಚಿಕಿತ್ಸಾ ವಿಭಾಗಗಳನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಈ ಕುರಿತು ಚರ್ಚೆ ಮತ್ತು ಸಂಶೋಧನೆಯ ಮೂಲಕ ಉತ್ತಮ ಕಲಿಕೆಯ ಅವಕಾಶಗಳನ್ನು ಸೃಷ್ಟಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ವೈದೇಹಿ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ಸಲಹೆಗಾರ ಮತ್ತು ಸಂಶೋಧನಾ ಸಲಹೆಗಾರ ಡಾ.ಮಹೇಶ್ ಕೊತ್ತಪಲ್ಲಿ ಅವರು ಮಾತನಾಡಿ, ಚಿಕಿತ್ಸೆಯ ಗುಣಮಟ್ಟವನ್ನು ಸುಧಾರಿಸಲು ಎಲ್ಲಾ ನಗರಗಳಲ್ಲೂ ಮೂರು ಹಂತದ ಟ್ರಾಮಾ ಸೆಂಟರ್ಗಳನ್ನು ಸ್ಥಾಪಿಸಬೇಕೆಂದು ಮನವಿ ಮಾಡಿಕೊಂಡರು.
Advertisement