ಕಾಲರಾ ಪ್ರಕರಣ 10ಕ್ಕೆ ಏರಿಕೆ; ಬಿಎಂಸಿಆರ್‌ಐ ಹಾಸ್ಟೆಲ್ ವಾರ್ಡನ್ ಅಮಾನತು: ಈ ದಿನದ ಪ್ರಮುಖ ಸುದ್ದಿಗಳು-07-04-2024

ರಾಜ್ಯದಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 6 ಪ್ರಕರಣಗಳು ದೃಢಪಟ್ಟಿದೆ
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)online desk

1. ರಾಜ್ಯದಲ್ಲಿ ಕಾಲರಾ ಪ್ರಕರಣ10ಕ್ಕೆಏರಿಕೆ

ರಾಜ್ಯದಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 6 ಪ್ರಕರಣಗಳು ದೃಢಪಟ್ಟಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಮತ್ತು ರಾಮನಗರ ಜಿಲ್ಲೆಯಲ್ಲಿ 1 ಕೇಸ್ ಬೆಳಕಿಗೆ ಬಂದಿದೆ. ಇನ್ನು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಸಂಸ್ಥೆಯ ಬಾಲಕಿಯರ ಹಾಸ್ಟೆಲ್‌ನ ವಿದ್ಯಾರ್ಥಿನಿಯರ ಪೈಕಿ ಇಬ್ಬರಿಗೆ ಕಾಲರ ಸೋಂಕು ಕಾಣಿಸಿಕೊಂಡ ಪ್ರಕರಣದಲ್ಲಿ ಹಾಸ್ಟೆಲ್‌ ವಾರ್ಡನ್‌ ಡಾ.ಅಖಿಲಾಂಡೇಶ್ವರಿ ಅವರನ್ನು ಅಮಾನತುಗೊಳಿಸಲಾಗಿದೆ. ಹಾಸ್ಟೆಲ್‌ಗಳ ನಿರ್ವಹಣೆಗಾಗಿ ಸಮಿತಿ ರಚಿಸಲು ಮತ್ತು ಮಾಸಿಕ ಸಭೆ ನಡೆಸಲು, ತಿಂಗಳಿಗೊಮ್ಮೆ ಹಾಸ್ಟೆಲ್‌ ಆವರಣಕ್ಕೆ ಭೇಟಿ ನೀಡಲು ಬಿಎಂಸಿಆರ್‌ಐ ಡೀನ್‌ ಮತ್ತು ನಿರ್ದೇಶಕರಿಗೆ ಆದೇಶಿಸಲಾಗಿದೆ.

2. ಚಿತ್ರದುರ್ಗ: ಬಸ್ಅಪಘಾತ, 4ಸಾವು

ಚಾಲಕನ ನಿಯಂತ್ರಣ ತಪ್ಪಿದ ಖಾಸದಿ ಬಸ್ಸೊಂದು ಪಲ್ಟಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನಲ್ಲಿ ನಡೆದಿದೆ. ಬೆಂಗಳೂರಿನಿಂದ ಗೋಕರ್ಣದತ್ತ ಶಿವಮೊಗ್ಗ ಮಾರ್ಗವಾಗಿ ಬಸ್​ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಬಸ್ಸಿನಲ್ಲಿ 50 ಮಂದಿ ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಈ ನಡುವೆ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

3. ದಕ್ಷಿಣಕನ್ನಡ ಜಿಲ್ಲೆ ಬಜರಂಗದಳ ಮುಖಂಡನ ಗಡಿಪಾರು ಆದೇಶ ರದ್ದು

ಭಜರಂಗ ದಳ ಮುಖಂಡ ಭರತ್ ಕುಮಾರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಮಂಗಳೂರು ಉಪ ವಿಭಾಗಾಧಿಕಾರಿ ಹೊರಡಿಸಿರುವ ಗಡಿಪಾರು ಆದೇಶ ಊಹೆಗಳಿಂದ ಕೂಡಿದೆ. ಭರತ್ ಕುಮಾರ್ ಅಪರಾಧಿಕ ಪ್ರಕರಣಗಳಲ್ಲಿ ಭಾಗಿಯಾಗಬಹುದು ಎಂಬ ಶಂಕೆ ಕಾನೂನು ಬಾಹಿರ. ಆದ್ದರಿಂದ, ಗಡಿಪಾರು ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದ್ದರು. ಅರೆನ್ಯಾಯಿಕ ಪ್ರಕ್ರಿಯೆಯಲ್ಲಿನ ಅಧಿಕಾರ ಚಲಾಯಿಸಿದ ಹೈಕೋರ್ಟ್ ಗಡಿಪಾರು ಆದೇಶವನ್ನು ರದ್ದುಗೊಳಿಸಿದೆ.

4. ಈಶ್ವರಪ್ಪ ವಿರುದ್ಧ FIR

ಲೋಕಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಾವಣಾಧಿಕಾರಿಯಿಂದ ಅಗತ್ಯ ಅನುಮತಿ ಪಡೆಯದೆ ರಾಜಕೀಯ ಕಾರ್ಯಕ್ರಮ ಆಯೋಜಿಸಿದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ರ್ಥಹಳ್ಳಿ ತಾಲೂಕಿನ ನೊಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬುತೀರ್ಥದ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತರುವಾಯ ಹತ್ತಿರದ ಅರ್ಚಕರ ನಿವಾಸದ ಅಂಗಳದಲ್ಲಿ ಸುಮಾರು 50 ರಿಂದ 60 ವ್ಯಕ್ತಿಗಳೊಂದಿಗೆ ಸಭೆಯನ್ನು ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.

5. ಒಂದೇ ಬೈಕ್ನಲ್ಲಿ 5ಮಂದಿ ಪ್ರಯಾಣ: ವೀಡಿಯೋ ವೈರಲ್

ಒಂದೇ ಬೈಕಿನಲ್ಲಿ 5 ಮಂದಿ ಬಾಲಕರು ಪ್ರಯಾಣ ಮಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿಯ ಟ್ರಾಫಿಕ್ ಪೊಲೀಸರು ಬೈಕ್ ಸೀಜ್ ಮಾಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಾಲಾ ಬಾಲಕನೋರ್ವ ಬೈಕ್ ಮೇಲೆ ಇತರೆ 4 ಮಂದಿ ಸ್ನೇಹಿತರನ್ನು ಕೂರಿಸಿಕೊಂಡು ಅಪಾಯಕಾರಿಯಾಗಿ ಬೈಕ್ ಚಲಾಯಿಸಿದ್ದ. ಕ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು, ಅದರ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪ್ರಾಪ್ತರ ಕೈಯಲ್ಲಿ ವಾಹನಗಳನ್ನ ಕೊಡಬಾರದು ಎಂದು ಅದೆಷ್ಟೇ ಜಾಗೃತಿ ಮೂಡಿಸಿದರು ಕೂಡ, ಕೆಲ ಪೊಷಕರು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮಕ್ಕಳ ಕೈಗೆ ಬೈಕ್, ಸ್ಕೂಟರ್ ಕೊಟ್ಟು ಕಳಿಸಿದ್ದು, ಇದೀಗ ಪೊಲೀಸರ ಕೈಗೆ ಸಿಲುಕಿ ಪ್ರಕರಣ ಎದುರಿಸುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com