ಬಾಗಲಕೋಟೆ: ವೈಯಕ್ತಿಕ ವಿಚಾರಗಳ ವಿಚಾರಕ್ಕೆ ಬಂದರೆ ನಿಮ್ಮ ಕರಾಳ ರಹಸ್ಯಗಳನ್ನು ಬಯಲು ಮಾಡುವುದಾಗಿ ಮಾಜಿ ಸಚಿವ ಮುರುಗೇಶ್ ನಿರಾಣಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಗುರುವಾರ ಎಚ್ಚರಿಕೆ ನೀಡಿದ್ದಾರೆ.
ಕಲಾದಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನೀವು ನನ್ನ ಮೇಲೆ ವೈಯಕ್ತಿಕ ದಾಳಿಯನ್ನು ಮುಂದುವರಿಸಿದರೆ ನಾನು ನಿಮ್ಮ ರಹಸ್ಯಗಳನ್ನು ಬಹಿರಂಗಪಡಿಸುತ್ತೇನೆ. ನಿಮ್ಮ ನೂರಾರು ವಿಷಯಗಳು ನನ್ನ ಬಳಿ ಇವೆ. ಗೌರವ ಕೊಟ್ಟು ಸುಮ್ಮನಿದ್ದೇನೆ ಎಂದರೆ ಅದು ನನ್ನ ದೌರ್ಬಲ್ಯ ಎಂದುಕೊಳ್ಳಬೇಡಿ’ ಎಂದು ಎಚ್ಚರಿಕೆ ನೀಡಿದರು.
ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ಮಾಡುತ್ತಿರುವುದನ್ನು ಉಲ್ಲೇಖಿಸಿದ ಅವರು, 'ಜಗದೀಶ್ ಶೆಟ್ಟರ್ ಮತ್ತು ಮೃಣಾಲ್ ಇಬ್ಬರೂ ಒಂದೇ ಸಮುದಾಯದವರು (ಬಣಜಿಗ). ನೀವೇಕೆ ಅಲ್ಲಿ ಪ್ರಚಾರ ಮಾಡುತ್ತಿದ್ದೀರಿ? ಪಂಚಮಸಾಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ. ಸುಳ್ಳು ಹೇಳಿ ಅಭ್ಯರ್ಥಿಯನ್ನು ಬೆಂಬಲಿಸುವ ಅಗತ್ಯ ಏನಿದೆ?' ಎಂದು ನಿರಾಣಿ ಪ್ರಶ್ನಿಸಿದರು.
'ನೀವು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಿಸುವತ್ತ ಗಮನ ಹರಿಸಿ. ಯಾವುದೇ ಪಕ್ಷದ ಪರ ಪ್ರಚಾರ ಮಾಡುವುದನ್ನು ಬಿಡಿ. ಹಿಂದಿನ ಬಿಜೆಪಿ ಸರ್ಕಾರ 2ಡಿ ಟ್ಯಾಗ್ ನೀಡಿದಾಗ ನೀವು ಕಾಂಗ್ರೆಸ್ ಏಜೆಂಟ್ನಂತೆ ವರ್ತಿಸಿದ್ದೀರಿ. ಪ್ರತಿಭಟನೆ ನಡೆಸಿ ಬೆದರಿಕೆ ಹಾಕುವ ಮೂಲಕ ಬಿಜೆಪಿ ಸರ್ಕಾರಕ್ಕೆ ಸಮಸ್ಯೆ ಸೃಷ್ಟಿಸಲು ಯತ್ನಿಸಿದ್ದೀರಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 3 ತಿಂಗಳಲ್ಲಿ 2ಎ ಕೋಟಾ ಸಿಗಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು. ಆರು ತಿಂಗಳು ಕಳೆದರೂ ಆಡಳಿತಾರೂಢ ಕಾಂಗ್ರೆಸ್ ಇನ್ನೂ ಕಾರ್ಯೋನ್ಮುಖವಾಗಿಲ್ಲ' ಎಂದು ದೂರಿದರು.
ಬೆಳಗಾವಿಗೆ ಜಗದೀಶ್ ಶೆಟ್ಟರ್ ಹೊರಗಿನವರು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಖಾನಾಪುರ ತಾಲ್ಲೂಕಿನವರು. ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಹೆಬ್ಬಾಳ್ಕರ್ ಕೂಡ ಹೊರಗಿನವರು. ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸಲಿಲ್ಲವೇ? ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಕೂಡ ಕರ್ನಾಟಕದಿಂದ ಸ್ಪರ್ಧಿಸಿದ್ದರು. ನೀವು ಒಬ್ಬರ ಕಡೆಗೆ ಒಂದು ಬೆರಳನ್ನು ತೋರಿಸಿದರೆ, ನಾಲ್ಕು ಬೆರಳುಗಳು ನಿಮ್ಮ ಕಡೆಗೆ ತೋರಿಸುತ್ತವೆ ಎಂದು ಕಿಡಿಕಾರಿದರು.
Advertisement