ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಇಬ್ಬರು ಬಾಂಬರ್‌ಗಳು 10 ದಿನ NIA ವಶಕ್ಕೆ!

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾನನ್ನು ನ್ಯಾಯಾಧೀಶರು 10 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳ ವಶಕ್ಕೆ ನೀಡಿ ಆದೇಶಿಸಿದ್ದಾರೆ.
ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು.
Updated on

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾನನ್ನು ನ್ಯಾಯಾಧೀಶರು 10 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳ ವಶಕ್ಕೆ ನೀಡಿ ಆದೇಶಿಸಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಗೊಳಿಸಿ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ದ ಉಗ್ರರನ್ನು ಎನ್​​ಐಎ ಅಧಿಕಾರಿಗಳು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

ಇಬ್ಬರು ಉಗ್ರರನ್ನು ಎನ್​ಐಎ ಅಧಿಕಾರಿಗಳು ಮಂಡಿವಾಳದ ಎಫ್​ಎಸ್​ಎಲ್​ ಸೆಂಟರ್​ ಬಳಿಯಿರುವ ಇಂಟ್ರಾಗೇಷನ್​​ ಸೆಲ್​ನಲ್ಲಿ ವಿಚಾರಣೆ ನಡೆಸಿದರು. ಬಳಿಕ ಬೆಳಿಗ್ಗೆ 10:30 ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮ ಸಮುಚ್ಚಯದಲ್ಲಿರುವ ನಿವಾಸದಲ್ಲಿ ನ್ಯಾಯಾಧೀಶರ ಮುಂದೆ ಉಗ್ರರನ್ನು ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶರು 10 ದಿನಗಳ ಕಾಲ ಎನ್​ಐಎ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.

ಬಂಧಿತ ಆರೋಪಿಗಳು.
ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟ​​​ ಆರೋಪಿಗಳು ಬೆಂಗಳೂರಿಗೆ: ನ್ಯಾಯಾಧೀಶರ ಮುಂದೆ ಹಾಜರು, ನಕಲಿ ಆಧಾರ್ ಕಾರ್ಡು ಬಳಕೆ ಪತ್ತೆ

ಕಳೆದ ಮಾರ್ಚ್ 1 ರಂದು ಬೆಂಗಳೂರಿನ ಐಟಿ ಕಾರಿಡಾರ್ ಕುಂದಲ ಹಳ್ಳಿ ಕಾಲೋನಿಯಲ್ಲಿರುವ ದಿ ರಾಮೇಶ್ವರ ಕೆಫೆಗೆ ಗ್ರಾಹಕನೆತ ತೆರಳಿ ಟಿಫನ್ ಬಾಕ್ಸ್ ಬ್ಯಾಗ್ ನಲ್ಲಿ ಬಾಂಬ್ ಇಟ್ಟು ಮುಸಾವೀರ್ ಪರಾರಿಯಾಗಿದ್ದ. ಬಾಂಬ್ ಸ್ಫೋಟದ ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಕೃತ್ಯದ ಹಿಂದೆ ಭಯೋತ್ಪಾದಕ ಸಂಘಟನೆ ಕೈವಾಡ ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಎನ್ಐಎ ಮಧ್ಯಪ್ರವೇಶಿಸಿತ್ತು. ಅಷ್ಟರಲ್ಲಿ ಶಂಕಿತ ಉಗ್ರರ ಜಾಡು ಹಿಡಿಯುವಲ್ಲಿ ಸಿಸಿಬಿ ಪೊಲೀಸರು ಕೂಡ ಯಶಸ್ಸು ಕಂಡಿದ್ದರು.

ಕೆಫೆ ವಿಧ್ವಸಂಕ ಕೃತ್ಯದಲ್ಲಿ ಬಾಂಬರ್ ಬೆನ್ನು ಹತ್ತಿದ್ದ ಎನ್ಐಎ ಹಾಗೂ ಸಿಸಿಬಿ, ಕುಂದಲಹಳ್ಳಿಯಿಂದ ಬಳ್ಳಾರಿವರೆಗೆ ಸುಮಾರು 800ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿದ್ದರು. ಆ ದೃಶ್ಯಾವಳಿಗಳಲ್ಲಿದ್ದ ಶಂಕಿತನಿಗೂ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿರುವ ಮುಸಾವೀರ್ ಹುಸೇನ್ ಶಾಜಿಬ್ ಭಾವಚಿತ್ರಕ್ಕೂ ತಾಳೆಯಾಗಿತ್ತು. ಅಲ್ಲದೆ, ಕೆಫೆಗೆ ಬಾಂಬ್ ಇಡಲು ಬಂದಾಗ ಮುಸಾವೀರ್ ಧರಿಸಿದ್ದ ಕ್ಯಾಪ್ ಕೂಡ ಆತನ ಗುರಿತು ಪತ್ತೆಗೆ ಮಹತ್ವದ ಸುಳಿವು ನೀಡಿತ್ತು.

ಚೆನ್ನೈ ನಗರದ ಮಾಲ್ ನಲ್ಲಿ ಕ್ಯಾಪ್ ಖರೀದಿಲು ತೆರಳಿದ್ದಾಗ ಆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಮುಸಾವೀರ್ ಹಾಗೂ ಮತೀನ್ ಸೆರೆಯಾಗಿದ್ದರು. ಕೆಫೆ ಕೃತ್ಯದಲ್ಲಿ ಈ ಇಬ್ಬರ ಪಾತ್ರ ಖಚಿತವಾದ ಬಳಿಕ ಎನ್ಐಎ, ಶಂಕಿತರ ಸುಳಿವು ನೀಡಿದರೆ ರೂ.10 ಲಕ್ಷ ಬಹುಮಾನ ಘೋಷಿಸಿತ್ತು.

ಬಂಧಿತ ಆರೋಪಿಗಳು.
ರಾಮೇಶ್ವರಂ ಕೆಫೆ ಸ್ಫೋಟದ ಬಾಂಬರ್ ಹಾಗೂ ಉಗ್ರ ಮತೀನ್ ಸಿಕ್ಕಿದ್ದೇಗೆ?: ಇಲ್ಲಿದೆ ರೋಚಕ ಮಾಹಿತಿ!

2022ರಿಂದ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ನಡೆದಿರುವ ಭಯೋತ್ಪಾದಕ ಕೃತ್ಯಗಳಲ್ಲಿ ಶಿವಮೊಗ ಮಾಡ್ಯುಲ್ ನ ಮುಸಾವೀರ್ ಹಾಗೂ ಮತೀನ್ ಪ್ರಮುಖ ಪಾತ್ರವಹಿಸಿದ್ದರು. ಮೂರು ವರ್ಷಗಳಿಂದ ಎನ್ಐಎ ಕೈ ಸಿಗದೆ ತಲೆಮರೆಸಿಕೊಂಡಿಜ್ಜ ಈ ಇಬ್ಬರು ವಿದೇಶದಲ್ಲಿ ನೆಲೆಸಿರಬಹುದು ಎಂದು ಶಂಕೆ ವ್ಯಕ್ತವಾಗಿತ್ತು. ಆದರೆ, ಕೆಫೆ ಸ್ಫೋಟದಲ್ಲಿ ಈ ಇಬ್ಬರ ಕೈವಾಡ ಗೊತ್ತಾದ ಕೂಡಲೇ ಎಚ್ಚೆತ್ತ ಎನ್ಐಎ, ಮತೀನ್ ಹಾಗೂ ಮುಸಾವೀರ್ ಬೇಟೆಗಿಳಿಯಿತು.

ಕೆಫೆ ಬಾಂಬ್ ಇಟ್ಟ ಬಳಿಕ ಬಳ್ಳಾರಿ ಮೂಲಕ ಕರ್ನಾಟಕ ತೊರೆದ ಶಂಕಿತರು, ಕೇರಳ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಅಡ್ಡಾಡಿ ಕೊನೆಗೆ ಪಶ್ಚಿಮ ಬಂಗಳಾದ ಕೋಲ್ಕತಾ ತಲುಪಿದ್ದರು. ಶಿವಮೊಗ್ಗ ಇಸಿಸ್ ಸಂಪರ್ಕ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ, ಉತ್ತರಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ 18 ಸ್ಥಳಗಳಲ್ಲಿ ಎನ್ಐಎ ದಾಳಿ ನಡೆಸಿ, ಪರಿಶೀಲನೆ ನಡೆಸಿತ್ತು. ಈ ವೇಳೆ ಚಿಕ್ಕಮಗಳೂರು ಜಿಲ್ಲೆ ಕಳಸದ ಮುಸಾಮಿಲ್ ಷರೀಫ್ ನ್ನು ಬಂಧಿಸಿದ ಎನ್ಐಎ, ನಂತರ ಶಿವಮೊಗ್ಗ ಪ್ರಕರಣಗಳಲ್ಲಿ ಜೈಲಿನಲ್ಲಿದ್ದ ಮುನೀರ್ ನನ್ನು ಕೂಡ ವಶಕ್ಕೆ ಪಡೆದು ಆರೋಪಿಯನ್ನಾಗಿಸಿತ್ತು. ಈ ಇಬ್ಬರ ವಿಚಾರಣೆ ವೇಳೆ ಲಭ್ಯವಾದ ಮಾಹಿತಿ ಮೇರೆಗೆ ತನಿಖೆ ಚುರುಕುಗೊಳಿಸಿದ ಅಧಿಕಾರಿಗಳಿಗೆ, ಪಶ್ಚಿಮ ಬಂಗಾಳದ ಕೋಲ್ಕತಾ ಬಳಿ ಹೋಟೆಲ್ ನಲ್ಲಿ ಶಂಕಿತರು ಇರುವ ಸುಳಿವು ಸಿಕ್ಕಿದೆ.

ಕೋಲ್ಕತಾ ಸಮೀಪದ ಮೇದಿನಿಪುರದ ಹೋಟೆಲ್ ನಲ್ಲಿ ನಕಲಿ ಹೆಸರು ಬಳಸಿ, ಮುಸಾವೀರ್ ಹಾಗೂ ಮತೀನ್ ಉಳಿದುಕೊಂಡಿದ್ದರು. ಗಾಢ ನಿದ್ರೆಯಲ್ಲಿದ್ದ ಶಂಕಿತರಿಗೆ, ನಸುಕಿನಲ್ಲಿ ದುಃಸ್ವಪ್ನದಂತೆ ಎನ್ಐಎ ಅಧಿಕಾರಿಗಳು ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com