ಬೆಂಗಳೂರಿನಲ್ಲಿ ಜೈ ಶ್ರೀ ರಾಮ್ ಘೋಷಣೆ ಕೂಗಿದ ಮೂವರ ಮೇಲೆ ಹಲ್ಲೆ; ನಾಲ್ವರ ಬಂಧನ
ಬೆಂಗಳೂರು: ಬೆಂಗಳೂರಿನಲ್ಲಿ ರಾಮ ನವಮಿಯ ಸಂದರ್ಭದಲ್ಲಿ ಜೈ ಶ್ರೀ ರಾಮ್ ಘೋಷಣೆ ಕೂಗಿದ ಮೂವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಇಲ್ಲಿನ ಚಿಕ್ಕಬೆಟ್ಟಹಳ್ಳಿಯಲ್ಲಿ ಬುಧವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳೆಲ್ಲರೂ ಎಂಎಸ್ ಪಾಳ್ಯದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬುಧವಾರ ರಾತ್ರಿ ಹಲ್ಲೆಗೊಳಗಾದವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಘಟನೆಯನ್ನು ಖಂಡಿಸಿದ್ದಾರೆ.
ಸಂಜೀವಿನಿನಗರದ ನಿವಾಸಿಗಳಾದ ಪವನ್ಕುಮಾರ್, ರಾಹುಲ್ ಮತ್ತು ಬಿನಾಯಕ್ ಎಂಬವರು ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನವನ್ನು ಪರಿಶೀಲಿಸಲು ಎಂಎಸ್ ಪಾಳ್ಯ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ಕೇಸರಿ ಧ್ವಜವನ್ನು ಹೊಂದಿದ್ದರು ಮತ್ತು "ಜೈ ಶ್ರೀ ರಾಮ್" ಎಂದು ಕೂಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕಿನಲ್ಲಿ ಹೋಗುತ್ತಿದ್ದ ಫರ್ಮಾನ್ ಮತ್ತು ಸಮೀರ್ ಅವರನ್ನು ತಡೆದು, "ಜೈ ಶ್ರೀ ರಾಮ್" ಘೋಷಣೆಗಳನ್ನು ಏಕೆ ಕೂಗುತ್ತಿದ್ದೀರಿ? "ಅಲ್ಲಾಹು ಅಕ್ಬರ್" ಎಂದು ಮಾತ್ರ ಕೂಗಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಫರ್ಮಾನ್ ಕೇಸರಿ ಧ್ವಜ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.
ಆರೋಪಿಗಳಾದ ಸಮೀರ್, ಫರ್ಮಾನ್ ಇಬ್ಬರು ಅಪ್ರಾಪ್ತರೊಂದಿಗೆ ಹಿಂತಿರುಗಿ ಬಂದು ಪವನ್ ಕುಮಾರ್, ರಾಹುಲ್ ಮತ್ತು ಬಿನಾಯಕ್ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ತೆರಳಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
"ನಮ್ಮ ಪೊಲೀಸ್ ತಂಡವು ಸ್ಥಳಕ್ಕೆ ತೆರಳಿ, ಸಂತ್ರಸ್ತರನ್ನು ಠಾಣೆಗೆ ಕರೆತರಲಾಯಿತು ಮತ್ತು ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ.
ರಾಹುಲ್ ತಲೆಗೆ ಕೋಲಿನಿಂದ ಹೊಡೆದಿದ್ದು, ಬಿನಾಯಕ್ ಮೂಗಿಗೆ ಗಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪವನ್ ಅವರು ನೀಡಿದ ದೂರಿನ ಆಧಾರದ ಮೇಲೆ ವಿದ್ಯಾರಣ್ಯಪುರ ಪೊಲೀಸರು ಐಪಿಸಿ ಸೆಕ್ಷನ್ 295 ಎ ಮತ್ತು 298 ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ