ಬೆಂಗಳೂರು: ರಾಜ್ಯ ಸರ್ಕಾರದ ಅಧೀನದಲ್ಲಿರುವ ಡಿ ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಲಿಮಿಟೆಡ್ನಲ್ಲಿ (ಡಿಡಿಯುಟಿಟಿಎಲ್) ನಡೆದಿರುವ ಹಣ ದುರುಪಯೋಗದ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ, ಡಿಡಿಯುಟಿಎಲ್ 47.10 ಕೋಟಿ ರೂಪಾಯಿ ಮತ್ತು ಅಕ್ರಮಕ್ಕೆ ಸಂಬಂಧಿಸಿದ 782 ಕಡತಗಳು ಕಳೆದು ಹೋಗಿದೆ ಎಂದು ಸ್ಥಳೀಯ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಪ್ರಕರಣದ ಆರೋಪಿಗಳಾದ ನವೀನ್ ಕುಮಾರ್ ಬಿ, ಎಂಎಸ್ ನಂದೀಶ್ ಮತ್ತು ಗಾಯತ್ರಿದೇವಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್ 51ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಯಶವಂತ್ ಕುಮಾರ್ ಅವರ ಮುಂದೆ ಈ ವಿಷಯ ತಿಳಿಸಿದರು.
ಆರೋಪಿಗಳು ಪ್ರಾಥಮಿಕವಾಗಿ ಡಿಡಿಯುಟಿಟಿಎಲ್ಗೆ ನಕಲಿ ಬಿಲ್ಗಳನ್ನು ಸಲ್ಲಿಸಿ ಪೂರ್ಣಗೊಳ್ಳದ ಕಾಮಗಾರಿಗಳಿಗೆ ಹಣ ಪಡೆದಿದ್ದು, 47 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಸರಕಾರಿ ವಕೀಲರು ತಿಳಿಸಿದ್ದಾರೆ. ಅರ್ಜಿದಾರರು ಕ್ರಮವಾಗಿ ವೆನಿಶಾ ಎಂಟರ್ಪ್ರೈಸಸ್, ಎಸ್ಎಸ್ ಎಂಟರ್ಪ್ರೈಸಸ್ ಮತ್ತು ಮಯೂರ್ ಅಡ್ವರ್ಟೈಸಿಂಗ್ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ನವೀನ್ ಕುಮಾರ್ ತನಿಖಾ ಅಧಿಕಾರಿಗಳಿಗೆ ಸಹಕರಿಸುತ್ತಿಲ್ಲ, ನಂದೀಶ್ ತನ್ನ ಎಸ್ ಎಸ್ ಎಂಟರ್ ಪ್ರೈಸಸ್ ಸಂಸ್ಥೆಯನ್ನು ಮಾರಾಟ ಮಾಡಿದ್ದು, ಗಾಯತ್ರಿದೇವಿ ತಲೆಮರೆಸಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
Advertisement