ಬೆಂಗಳೂರು: ಎಸ್ಯುವಿ ಡಿಕ್ಕಿ ಹೊಡೆದ ನಂತರ ವ್ಯಾನ್ ವೊಂದು ಉರುಳಿ ಬಿದ್ದು, ಬೆಂಕಿ ಹೊತ್ತಿಕೊಂಡು ಹದಿಹರೆಯದ ಯುವತಿಯೊಬ್ಬಳು ಸಜೀವ ದಹನವಾಗಿರುವ ಘಟನೆ ಮಾದನಾಯಕನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಬಳಿಯ ನೈಸ್ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ.
ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ, 15-18 ವರ್ಷ ವಯಸ್ಸಿನವರಾಗಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಸರಹಳ್ಳಿಯ ನಿವಾಸಿಗಳೆಂದು ಹೇಳಲಾದ ಎಂಟು ಜನರ ಕುಟುಂಬವು ರಾತ್ರಿ 9.45 ರ ಸುಮಾರಿಗೆ ವ್ಯಾನ್ ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಎಸ್ಯುವಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ವ್ಯಾನ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ. ವ್ಯಾನ್ನಲ್ಲಿದ್ದವರು ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದಾಗ ಸಾರ್ವಜನಿಕರು ಏಳು ಜನರನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ವ್ಯಾನ್ ಗೆ ವ್ಯಾಪಿಸಿ ಯುವತಿ ಸಾವನ್ನಪ್ಪಿದ್ದಾಳೆ.
ಗಾಯಾಳುಗಳ ಪೈಕಿ ಕೆಲವರಿಗೆ ಮುರಿತಗಳಾಗಿದ್ದರೆ ಇನ್ನು ಕೆಲವರಿಗೆ ಸುಟ್ಟ ಗಾಯಗಳಾಗಿವೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ನೆಲಮಂಗಲ ಸಂಚಾರ ಪೊಲೀಸರು ತಿಳಿಸಿದ್ದಾರೆ.
Advertisement