
ಬೆಂಗಳೂರು: ಲೋಕಸಭಾ ಚುನಾವಣೆಗೆ ಮತದಾನ ಮಾಡಲು ಹೆಚ್ಚಿನ ಜನರು ಪ್ರಯಾಣಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ವಿಶೇಷ ರೈಲುಗಳ ವ್ಯವಸ್ಥೆಗೆ ಮುಂದಾಗಿದೆ.
ಬೆಂಗಳೂರು- ಮಂಗಳೂರು ಸೆಂಟ್ರಲ್ ಮಾರ್ಗದಲ್ಲಿ ವಿಶೇಷ ರೈಲುಗಳು ಸಂಚರಿಸಲಿವೆ.
ನೈಋತ್ಯ ರೈಲ್ವೆ ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು-ಮಂಗಳೂರು ಸೆಂಟ್ರಲ್ ವಿಶೇಷ ರೈಲು- ರೈಲು ಸಂಖ್ಯೆ.06553 ಏಪ್ರಿಲ್ 25 ರಂದು (ಗುರುವಾರ) ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಸಂಜೆ 6:00 ಗಂಟೆಗೆ ಹೊರಡಲಿದ್ದು, ಮರುದಿನ ಬೆಳಗ್ಗೆ 10 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ ಎಂದು ಮಾಹಿತಿ ನೀಡಿದೆ.
ಮಂಗಳೂರು ಸೆಂಟ್ರಲ್ - ಬೆಂಗಳೂರು ವಿಶೇಷ ರೈಲು- ರೈಲು ಸಂಖ್ಯೆ.06554-ಎಪ್ರಿಲ್ 26 ರಂದು (ಶುಕ್ರವಾರ) ಮಧ್ಯಾಹ್ನ 12 ಗಂಟೆಗೆ ಮಂಗಳೂರಿನ ಸೆಂಟ್ರಲ್ನಿಂದ ಹೊರಡಲಿದ್ದು, ಮರುದಿನ ಮುಂಜಾನೆ 3 ಗಂಟೆಗೆ ಬೆಂಗಳೂರಿನ ಸರ್.ಎಂ ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.
ಹೆಚ್ಚುವರಿಯಾಗಿ, ನೈಋತ್ಯ ರೈಲ್ವೆ ಅಧಿಕಾರಿಗಳು ಬೆಂಗಳೂರಿನಿಂದ ಉಡುಪಿಗೆ ಸಂಪರ್ಕ ಕಲ್ಪಿಸಲು ಯಶವಂತಪುರ ಕುಂದಾಪುರ ವಿಶೇಷ ಎಕ್ಸ್ಪ್ರೆಸ್ ನ್ನು ಘೋಷಿಸಿದ್ದಾರೆ.
ರೈಲು ಸಂಖ್ಯೆ.06547 ಬೆಂಗಳೂರಿನ ಯಶವಂತಪುರದಿಂದ ಏಪ್ರಿಲ್ 25 ರಂದು ರಾತ್ರಿ 11:20 ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 10:45 ಕ್ಕೆ ಕುಂದಾಪುರಕ್ಕೆ ಆಗಮಿಸಲಿದೆ.
ಕುಂದಾಪುರದಿಂದ ಯಶವಂತಪುರಕ್ಕೆ ಹಿಂದಿರುಗುವ ಪ್ರಯಾಣ, ರೈಲು ನಂ.06548, ಏಪ್ರಿಲ್ 26 ರಂದು ಬೆಳಿಗ್ಗೆ 11:20 ಕ್ಕೆ ಕುಂದಾಪುರದಿಂದ ಹೊರಟು ಅದೇ ದಿನ ರಾತ್ರಿ 9:50 ಕ್ಕೆ ಯಶವಂತಪುರವನ್ನು ತಲುಪಲಿದೆ. ಏಪ್ರಿಲ್ 26 ರಂದು 28 ಲೋಕಸಭಾ ಸ್ಥಾನಗಳ ಪೈಕಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕರಾವಳಿ ಪ್ರದೇಶದ ಮತದಾರರಿಗೆ ತಡೆರಹಿತ ಪ್ರಯಾಣವನ್ನು ಸುಲಭಗೊಳಿಸುವುದು ವಿಶೇಷ ರೈಲುಗಳ ವ್ಯವಸ್ಥೆಯ ಗುರಿಯಾಗಿದೆ ಎಂದು ರೈಲ್ವೆ ಹೇಳಿದೆ.
Advertisement