ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ KHIR ಸಿಟಿ ಯೋಜನೆಗೆ ಆಗಸ್ಟ್ 23 ರಂದು ಚಾಲನೆ!

ಕೆಎಚ್ಐಆರ್ ಸಿಟಿಯಲ್ಲಿ ಆರಂಭವಾಗಲಿರುವ ಉದ್ದಿಮೆಗಳಿಗೆ ಸಕಲ ರೀತಿಯ ಸೌಲಭ್ಯಗಳನ್ನೂ ಒದಗಿಸಲಾಗುವುದು. ರಾಜ್ಯದಲ್ಲೇ ನೆಲೆ ಹೊಂದಿರುವ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಉದ್ದಿಮೆಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೂ ಇಲ್ಲಿ ಅವಕಾಶವಿರಲಿದೆ.
KHIR city (file pic)
ಕೆಹೆಚ್ ಐಆರ್ ಸಿಟಿ (ಸಾಂಕೇತಿಕ ಚಿತ್ರ)online desk
Updated on

ಬೆಂಗಳೂರು: ದೇಶದಲ್ಲೇ ಪ್ರಪ್ರಥಮ ಎನ್ನಲಾದ, ಬಹು ಮಹತ್ತ್ವಾಕಾಂಕ್ಷೆಯ `ನಾಲೆಡ್ಜ್, ಹೆಲ್ತ್ ಇನ್ನೋವೇಶನ್ ಮತ್ತು ರೀಸರ್ಚ್ ಸಿಟಿ’ (ಕೆಎಚ್ಐಆರ್ ಸಿಟಿ) ಯೋಜನೆಯ ಮೊದಲನೇ ಹಂತಕ್ಕೆ ಆ.23ರ ಶುಕ್ರವಾರ ಚಾಲನೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಶನಿವಾರ ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, `ನಗರದಿಂದ 60 ಕಿ.ಮೀ. ದೂರದಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಒಟ್ಟು 2,000 ಎಕರೆಯಲ್ಲಿ ಕೆಎಚ್ಐಆರ್ ಸಿಟಿ ಅಭಿವೃದ್ಧಿಪಡಿಸಲಾಗುವುದು. ಮೊದಲ ಹಂತದಲ್ಲಿ ಒಂದು ಸಾವಿರ ಎಕರೆ ಜಾಗದಲ್ಲಿ ಯೋಜನೆ ತಲೆ ಎತ್ತಲಿದೆ. ಒಟ್ಟು ಎರಡೂ ಹಂತಗಳಲ್ಲಿ 40 ಸಾವಿರ ಕೋಟಿ ರೂ.ಗಳಿಗಿಂತಲೂ ಹೆಚ್ಚು ಹೂಡಿಕೆ ಆಗಲಿದ್ದು, 50 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. 23ರ ಬೆಳಿಗ್ಗೆ 11 ಗಂಟೆಗೆ ನಗರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೆಎಚ್ಐಆರ್ ಸಿಟಿಗೆ ಚಾಲನೆ ಸಿಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಉದ್ಯಮ ವಲಯದ ಪ್ರಮುಖರು ಕೂಡ ಭಾಗವಹಿಸಲಿದ್ದು, ಹೆಸರುಗಳು ಅಂತಿಮವಾಗುತ್ತಿವೆ ಎಂದರು.

ಪ್ರಪಂಚದ ಬೇರೆಬೇರೆ ಭಾಗಗಳಲ್ಲಿಯೂ ವಿಶೇಷ ನಗರಗಳ ಪರಿಕಲ್ಪನೆ ಇದೆ. ಕೇಂದ್ರ ಸರಕಾರ ಕೂಡ ಇದೇ ಮಾದರಿಯನ್ನು ಅನುಸರಿಸುತ್ತದೆ. ಆದರೆ, ಕೆಎಚ್ಐಆರ್ ಸಿಟಿಯಲ್ಲಿ ನಾಲ್ಕೂ ವಲಯಗಳಲ್ಲಿನ ಜಾಗತಿಕ ಮಟ್ಟದ ಅತ್ಯುನ್ನತ ಕಂಪನಿಗಳು ನೆಲೆಯೂರಲಿವೆ. ಇದಕ್ಕೆ ಬೇಕಾದ ಜಮೀನು, ವಿದ್ಯುತ್, ನೀರು, ರಸ್ತೆ ಮತ್ತಿತರ ಸೌಲಭ್ಯಗಳನ್ನು ರಾಜ್ಯ ಸರಕಾರ ಒದಗಿಸಲಿದೆ. ಇದರಿಂದ ಆರ್ಥಿಕ ವರಮಾನ ಹೆಚ್ಚಳದ ಜೊತೆಗೆ ರಫ್ತು ವಹಿವಾಟು ಕೂಡ ವೃದ್ಧಿಸಲಿದೆ. ಇದರಿಂದಾಗಿ ಬೆಂಗಳೂರು ನಗರವು ಇನ್ನೊಂದು ಸ್ತರ ಮೇಲೇರಲಿದೆ ಎಂದು ಅವರು ಹೇಳಿದ್ದಾರೆ.

KHIR city (file pic)
ಧಾರವಾಡ ಸಮೀಪ ಕೈಗಾರಿಕಾ ಕೇಂದ್ರ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಪ್ರಸ್ತಾಪ

ಜಾಗತಿಕವಾಗಿ ಉತ್ಕೃಷ್ಟ ಮಟ್ಟದ ಉದ್ದಿಮೆಗಳು, ವಿಶ್ವವಿದ್ಯಾಲಯಗಳು, ಮೆಡಿಕಲ್ ಟೂರಿಸಂ, ಸಂಶೋಧನೆ, ಚಿಕಿತ್ಸೆ, ನಾವೀನ್ಯತೆ ಇವುಗಳಿಗೆ ಉದ್ದೇಶಿತ ಸಿಟಿಯಲ್ಲಿ ಆದ್ಯತೆ ನೀಡಲಾಗುವುದು. ಜೊತೆಗೆ ಭವಿಷ್ಯದ ಸಂಚಾರ ವ್ಯವಸ್ಥೆ, ಸೆಮಿಕಂಡಕ್ಟರ್, ಅಡ್ವಾನ್ಸ್ಡ್ ಮೆಟೀರಿಯಲ್ಸ್, ನವೋದ್ಯಮಗಳು, ವೈಮಾಂತರಿಕ್ಷ, ರಕ್ಷಣೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಜೀವವಿಜ್ಞಾನಗಳು ಮತ್ತು ಆಧುನಿಕ ತಂತ್ರಜ್ಞಾನ ವಲಯಗಳ ಕಂಪನಿಗಳು ಕೂಡ ಇಲ್ಲಿ ಬರಲಿವೆ.

ಮುಖ್ಯವಾಗಿ ಒಟ್ಟಾರೆ ಯೋಜನೆಯಿಂದ ಅಪಾರ ಸಂಖ್ಯೆಯ ಪರೋಕ್ಷ ಉದ್ಯೋಗಗಳು ಕೂಡ ಸೃಷ್ಟಿಯಾಗಲಿವೆ. ಇದರಿಂದ ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಇದಕ್ಕಾಗಿ ಸರಕಾರವು ಸ್ಪಷ್ಟ ರೂಪುರೇಷೆಯನ್ನು ಈಗಾಗಲೇ ಆಖೈರುಗೊಳಿಸಿದೆ ಎಂದು ಅವರು ವಿವರಿಸಿದ್ದಾರೆ.

ಕೆಎಚ್ಐಆರ್ ಸಿಟಿಯಲ್ಲಿ ಆರಂಭವಾಗಲಿರುವ ಉದ್ದಿಮೆಗಳಿಗೆ ಸಕಲ ರೀತಿಯ ಸೌಲಭ್ಯಗಳನ್ನೂ ಒದಗಿಸಲಾಗುವುದು. ರಾಜ್ಯದಲ್ಲೇ ನೆಲೆ ಹೊಂದಿರುವ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಉದ್ದಿಮೆಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೂ ಇಲ್ಲಿ ಅವಕಾಶವಿರಲಿದೆ. ಈ ಮೂಲಕ ನಮ್ಮಲ್ಲಿನ ಸಂಸ್ಥೆಗಳು ಕೂಡ ಜಾಗತಿಕ ಗುಣಮಟ್ಟದ ಎತ್ತರಕ್ಕೆ ಬೆಳೆಯಲು ಅವಕಾಶ ಒದಗಿಸಲಾಗುವುದು. ಒಟ್ಟಿನಲ್ಲಿ ನಾವು ಜಾಗತಿಕ ಮಟ್ಟದಲ್ಲಿ ಪ್ರಮುಖ ಹೂಡಿಕೆ ತಾಣವಾಗಿ ಹೊರಹೊಮ್ಮಬೇಕು ಎನ್ನುವುದು ಇದರ ಹಿಂದಿನ ಆಶಯಗಳಲ್ಲಿ ಒಂದಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com