ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ಬಿಜೆಪಿ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಳ: ಸಿಂಗಾಪುರ ಮಾದರಿ ಅಳವಡಿಸಲು ತೇಜಸ್ವಿ ಸೂರ್ಯ ಸಲಹೆ

ಕಾರುಗಳ ಸಂಖ್ಯೆಯನ್ನು ಸೀಮಿತಗೊಳಿಸುವ ಬೆಸ-ಸಮ ಮಾದರಿ ಅಥವಾ ಸಿಂಗಾಪುರ ಮಾದರಿ ಪರಿಹಾರಗಳನ್ನು ಬೆಂಗಳೂರು ಪ್ರಯೋಗಿಸಬೇಕಾಗಿದೆ ಎಂದು ಸೂರ್ಯ ಸಲಹೆ ನೀಡಿದ್ದಾರೆ.
Published on

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮ ಮೆಟ್ರೋ, ಬಿಎಂಟಿಸಿ ಸೇರಿ ಯಾವುದೇ ಸಂಚಾರ ವ್ಯವಸ್ಥೆಗಳು ಬಂದರೂ ಸಹ ಪರಿಸ್ಥಿತಿ ಸುಧಾರಣೆ ಆಗುತ್ತಿಲ್ಲ. ಈ ಹಿನ್ನಲೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಬೆಂಗಳೂರು ನಗರದ ಸಮಸ್ಯೆಗೆ ಪರಿಹಾರ ಹುಡುಕುಬೇಕು ಎಂದು ಕರೆ ನೀಡಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಅವರು ಬುಧವಾರ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಬೆಂಗಳೂರು ನಗರದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ. ಕಾರುಗಳ ಸಂಖ್ಯೆಯನ್ನು ಸೀಮಿತಗೊಳಿಸುವ ಬೆಸ-ಸಮ ಮಾದರಿ ಅಥವಾ ಸಿಂಗಾಪುರ ಮಾದರಿ ಪರಿಹಾರಗಳನ್ನು ಬೆಂಗಳೂರು ಪ್ರಯೋಗಿಸಬೇಕಾಗಿದೆ ಎಂದು ಸೂರ್ಯ ಸಲಹೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಸುಲಭವಾಗಿದ್ದ ಭಾನುವಾರವೂ ವಾರದ ದಿನಗಳಂತೆ ದುಃಸ್ವಪ್ನವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ಸಮರ್ಪಕ ನಗರ ಯೋಜನೆ ಜಾರಿಗೊಳಿಸದ ಹೊರತು ಬ್ರ್ಯಾಂಡ್ ಬೆಂಗಳೂರು ಕನಸಷ್ಟೇ: ಸಂಸದ ತೇಜಸ್ವಿ ಸೂರ್ಯ

ಪ್ರತಿದಿನ, ನಾವು ಸಾವಿರಾರು ಹೊಸ ಖಾಸಗಿ ವಾಹನಗಳನ್ನು ರಸ್ತೆಗಳಲ್ಲಿ ಸೇರಿಸುತ್ತಿದ್ದು ಸಮಸ್ಯೆ ಹೆಚ್ಚಿಸುತ್ತದೆ. ಬೆಂಗಳೂರು ನಗರದಲ್ಲಿನ ರಸ್ತೆಗಳು, ವಸತಿ ಪ್ರದೇಶಗಳಲ್ಲಿನ ಸಣ್ಣ ಲೈನ್‌ಗಳು ವಾಹನ ನಿರ್ವಹಣೆಯ ಸಾಮರ್ಥ್ಯವನ್ನು ಮೀರಿವೆ. ಹೆಚ್ಚಿನ ಹೊಸ ರಸ್ತೆಗಳನ್ನು ನಿರ್ಮಾಣ ಮಾಡಲು ಈಗ ಸ್ಥಳದ ಅಭಾವವಿದೆ. ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆ ಆಯ್ಕೆಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸೂರ್ಯ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಜನಸಂದಣಿ ಇರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಾಹನಗಳನ್ನು ಪರಿಗಣಿಸಿ ಸಾರ್ವಜನಿಕ ಸಾರಿಗೆ ಆಯ್ಕೆಗಳಿಗೆ ಬದಲಾಯಿಸುವುದು ಸೂಕ್ತ ಪರ್ಯಾಯವಲ್ಲ. ಮೆಟ್ರೋ ನಿಲ್ದಾಣಗಳಲ್ಲಿ ಅವ್ಯವಸ್ಥೆ ಹೆಚ್ಚಿದ್ದು, ಪೀಕ್ ಅವರ್‌ನಲ್ಲಿ ರೈಲುಗಳು ಕೂಡ ತುಂಬಿ ತುಳುಕುತ್ತಿದ್ದು, ಉಸಿರುಗಟ್ಟಿಸುವಂತಾಗಿದೆ.

ಹೆಚ್ಚು ದರ ಕೇಳುವ ಉಬರ್ ಓಲಾ ಟ್ಯಾಕ್ಸಿಗಳು ವಿಶ್ವಾಸಾರ್ಹವಲ್ಲ.ಅವರು ನಾವು ಹೇಳಿದ ಕಡೆ ಬರುವುದಿಲ್ಲ. ನಮ್ಮ ಫುಟ್‌ಪಾತ್‌ಗಳು ಪಾದಚಾರಿ ಸ್ನೇಹಿಯಾಗಿಲ್ಲ ಮತ್ತು ಹೆಚ್ಚಿನ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದಾರೆ. ಜೀವನದ ಗುಣಮಟ್ಟ ದಿನೇ ದಿನೇ ಹದಗೆಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಗುಂಡಿಗಳು, ಅವೈಜ್ಞಾನಿಕ ಹಂಪ್ಸ್‌ಗಳ ಬಗ್ಗೆ ಗಮನ ನೀಡಬೇಕಾದ ಬಿಬಿಎಂಪಿ ಮತ್ತು ಅಧಿಕಾರಿಗಳು ಜನವಸತಿ ಪ್ರದೇಶ, ವಾಣಿಜ್ಯೋದ್ಯಮ ಬೆಳವಣಿಗೆ ನೋಡುತ್ತಾ, ಸಮಸ್ಯೆಗಳ ಬಗ್ಗೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com