
ಬೆಳಗಾವಿ: ಗೂಗಲ್ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಪ್ರಯಾಣಿಸಿ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಕುಟುಂಬವನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿರುವ ವಿಚಿತ್ರ ಘಟನೆ ಬೆಳಗಾವಿಯಲ್ಲಿ ವರದಿಯಾಗಿದೆ.
ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಪ್ರಯಾಣಿಸಿ ಎಲ್ಲೆಲ್ಲೋ ತಲುಪಿ ಯಡವಟ್ಟಾಗಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.
ಇತ್ತೀಚೆಗೆ ಗೂಗಲ್ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಪ್ರಯಾಣಿಸಿ ನಿರ್ಮಾಣ ಹಂತದ ಸೇತುವೆಯಿಂದ ಕಾರು ಬಿದ್ದು ಮೂವರು ಮೃತಪಟ್ಟ ಘಟನೆ ಕಳೆದ ವಾರ ಉತ್ತರ ಪ್ರದೇಶದಲ್ಲಿ ಸಂಭವಿಸಿತ್ತು.
ಇದೀಗ ಬೆಳಗಾವಿಯ ಖಾನಾಪುರ ಕಾಡಿನಲ್ಲಿ ಕಾರೊಂದು ನಾಪತ್ತೆಯಾಗಿದ್ದು, ಪೊಲೀಸರ ಕಾರ್ಯಾಚರಣೆ ಬಳಿಕ ಪತ್ತೆಯಾಗಿದೆ.
ಹೌದು.. ಬಿಹಾರದಿಂದ ಗೋವಾಕ್ಕೆ ಹೊರಟಿದ್ದ ಮಹಿಳೆಯರು ಸೇರಿದಂತೆ ನಾಲ್ವರಿದ್ದ ಕಾರು ಗೂಗಲ್ ಮ್ಯಾಪ್ ತೋರಿದ ಮಾರ್ಗದಲ್ಲಿ ಪ್ರಯಾಣಿಸಿ ದಟ್ಟಾರಣ್ಯ ಸೇರಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ. ಸದ್ಯ ಕಾರಿನ ಸಮೇತ ಕಣ್ಮರೆಯಾದವರನ್ನು ಪತ್ತೆ ಮಾಡಿ ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಏನಿದು ಘಟನೆ?
ಉಜ್ಜಯಿನಿಯಿಂದ ಗೋವಾಕ್ಕೆ ತೆರಳುತ್ತಿದ್ದ ಕಾರಿನಲ್ಲಿದ್ದವರು ಗೂಗಲ್ ಮ್ಯಾಪ್ ಹಾಕಿಕೊಂಡಿದ್ದರು. ಬಿಹಾರದ ರಾಜದಾಸ್ ರಣಜಿತ್ದಾಸ್ ಎಂಬುವರು ಉಜ್ಜಯಿನಿಯಿಂದ ಗೋವಾಕ್ಕೆ ಕುಟುಂಬ ಸಮೇತ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಬುಧವಾರ ಗೋವಾದಲ್ಲಿ ತಾವು ತಲುಪಬೇಕಿದ್ದ ಸ್ಥಳದ ಲೊಕೇಶನ್ ಹಾಕಿಕೊಂಡು ಪ್ರಯಾಣಿಸುತ್ತಿದ್ದರು. ಆಗ ಅವರು ಮಧ್ಯರಾತ್ರಿ ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗಮಧ್ಯದ ಮುಖ್ಯ ರಸ್ತೆಯಿಂದ 7-8 ಕಿಮೀ ಒಳಗೆ ದಟ್ಟ ಕಾಡಿನೊಳಗೆ ತೆರಳಿದ್ದಾರೆ.
ಅಲ್ಲಿ ಮೊಬೈಲ್ ನೆಟ್ವರ್ಕ್ ಕೂಡ ಸಿಕ್ಕಿಲ್ಲ. ಕಗ್ಗತ್ತಲಲ್ಲಿ ಸಿಲುಕಿದ್ದ ರಾಜದಾಸ್ ಕುಟುಂಬ ತೀವ್ರ ಆತಂಕಗೊಂಡಿತ್ತು. ಇದರಿಂದ ಧೃತಿಗೆಡದ ರಾಜದಾಸ್, ತಮ್ಮ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿ ಇಡೀ ರಾತ್ರಿ ಅಲ್ಲಿಯೇ ಕಳೆದಿದ್ದಾರೆ. ಬೆಳಗ್ಗೆ ಆಗುತ್ತಲೇ ತಾವು ಇರುವ ಸ್ಥಳದಿಂದ ಮೂರ್ನಾಲ್ಕು ಕಿ.ಮೀ ದೂರದ ಪ್ರದೇಶಕ್ಕೆ ಬಂದಾಗ, ಮೊಬೈಲ್ ನೆಟ್ವರ್ಕ್ ಸಿಕ್ಕಿದೆ. ತಕ್ಷಣ 100 ಸಂಖ್ಯೆಗೆ ಕರೆ ಮಾಡಿ ಪೊಲೀಸ್ ಕಂಟ್ರೋಲ್ ರೂಂ ಜೊತೆ ಸಂಪರ್ಕ ಸಾಧಿಸಿದ್ದಾರೆ. ತಮಗೆ ದಾರಿ ಕಾಣದಾಗದೇ ಸಂಕಷ್ಟದಲ್ಲಿದ್ದು, ಸಹಾಯಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು
ದಾರಿ ತಪ್ಪಿದ ಪ್ರಯಾಣಿಕರಿಗೆ ಅಲ್ಲಿಂದ ಎತ್ತ ಕಡೆ ತೆರಳಬೇಕು ಎಂಬುದೂ ಗೊತ್ತಾಗಿಲ್ಲ. ಬಳಿಕ ಕಾರಿನ ಚಾಲಕ ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಖಾನಾಪುರ ಠಾಣೆ ಪಿಐ ಮಂಜುನಾಥ ನಾಯ್ಕ, 112 ವಾಹನದ ಇನ್ - ಚಾರ್ಜ್ ಎಎಸ್ಐ ಬಡಿಗೇರ, ಮುಖ್ಯ ಪೇದೆ ಜಯರಾಮ ಹಮ್ಮಣ್ಣವರ, ಪೇದೆ ಮಂಜುನಾಥ ಮುಸಳಿ ಹಾಗೂ ಸಿಬ್ಬಂದಿ, ರಾಜದಾಸ್ ಅವರ ಲೈವ್ ಲೊಕೇಶನ್ ನೆರವಿನಿಂದ ಅವರಿದ್ದ ಸ್ಥಳವನ್ನು ಪತ್ತೆ ಹಚ್ಚಿದ್ದಾರೆ.
ಸ್ಥಳೀಯರ ನೆರವಿನೊಂದಿಗೆ ಅವರನ್ನು ಸಂಪರ್ಕ ಮಾಡಿದ ಪೊಲೀಸರು, ಬಳಿಕ ಸ್ಥಳಕ್ಕೆ ಹೋಗಿ ಮುಖ್ಯ ರಸ್ತೆಗೆ ಕರೆ ತಂದಿದ್ದಾರೆ. ಮುಂದೆ ಗೋವಾಗೆ ಹೋಗಲು ಅನುಕೂಲ ಮಾಡಿ ಕೊಟ್ಟಿದ್ದಾರೆ.
Advertisement