
ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಇತಿಹಾಸ, ಆಡಳಿತ, ಸಾಧನೆ ಅವರು ನೀಡಿದ ಕೊಡುಗೆಗಳನ್ನು ನಾಡಿನ ಜನರಿಗೆ ತಿಳಿಸಿಕೊಡುವ ಉದ್ದೇಶದಿಂದ ನಿರ್ಮಿಸಲು ಉದ್ದೇಶಿಸಿರುವ ಕೆಂಪೇಗೌಡ ಅಧ್ಯಯನ ಕೇಂದ್ರವು ನಿರ್ಲಕ್ಷ್ಯಕ್ಕೊಳಗಾಗಿದೆ.
ಕೆಂಪೇಗೌಡರ ಆಡಳಿತ ಮತ್ತು ಅವರ ಜೀವನ ಚರಿತ್ರೆಯನ್ನು ಕಟ್ಟಿಕೊಡುವುದು ಹಾಗೂ ಅವರ ಮುಂದಾಳತ್ವದಲ್ಲಿ ನಗರದಲ್ಲಿ ನಿರ್ಮಾಣವಾಗಿದ್ದ ಕೆರೆಕಟ್ಟೆಗಳು, ದೇವಾಲಯಗಳು, ನಗರದ ಗಡಿಗೋಪುರಗಳ ಬಗ್ಗೆ ಜನರಿಗೆ ಸಮಗ್ರ ಮಾಹಿತಿ ನೀಡುವುದು ಈ ಕೇಂದ್ರದ ಉದ್ದೇಶವಾಗಿದೆ. ಜ್ಞಾನಭಾರತಿ ವಿಶ್ವವಿದ್ಯಾನಿಲಯ ಕ್ಯಾಂಪಸ್ನಲ್ಲಿ ಅಧ್ಯಯನ ಕೇಂದ್ರವಿದ್ದು 100-ಕೋಟಿ ಯೋಜನೆಯು ಈಗ ಅಪೂರ್ಣವಾಗಿದೆ, ಸೈಟ್ ನಿವಾಸಿಗಳು ಮತ್ತು ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬಯಲು ಮಲವಿಸರ್ಜನೆಯ ವಲಯವಾಗಿ ಮಾರ್ಪಟ್ಟಿದೆ.
2016ರಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭವಾದ ಈ ಅಧ್ಯಯನ ಕೇಂದ್ರದಲ್ಲಿ ಮ್ಯೂಸಿಯಂ, 30 ಅಡಿಯ ಕೆಂಪೇಗೌಡರ ಕಂಚಿನ ಪ್ರತಿಮೆ, ಹವಾನಿಯಂತ್ರಿತ ಸಭಾಂಗಣ, ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ಯೋಜಿಸಲಾಗಿತ್ತು. ಆದರೂ, ಸುಮಾರು ಎಂಟು ವರ್ಷಗಳ ನಂತರ, ಕಾಮಗಾರಿ ಇನ್ನೂ ಅಪೂರ್ಣವಾಗಿಯೇ ಉಳಿದಿದೆ. ನಿರ್ಮಾಣ ಹಂತದಲ್ಲಿರುವ ಕೇಂದ್ರ ಮಲಿನಗೊಂಡಿದೆ. ಈ ಪ್ರದೇಶದ ಸುತ್ತಮುತ್ತಲಿನ ಕಾರ್ಮಿಕರು ಮತ್ತು ಸ್ಥಳೀಯ ನಿವಾಸಿಗಳು ಇದನ್ನು ಮಲವಿಸರ್ಜನೆಯ ತಾಣವಾಗಿ ಬಳಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು TNIE ಗೆ ತಿಳಿಸಿದರು. ಇದಲ್ಲದೆ, ಕುಸಿಯುತ್ತಿರುವ ವಿಶ್ವವಿದ್ಯಾನಿಲಯದ ಕಾಂಪೌಂಡ್ ಗೋಡೆಯು ಜನರ ಪ್ರವೇಶಕ್ಕೆ ಅವಕಾಶ ನೀಡುವ ಮೂಲಕ ಸಮಸ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರದೇಶವನ್ನು ಅಸುರಕ್ಷಿತಗೊಳಿಸುತ್ತದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ವರ್ಷಗಳ ನಿರ್ಲಕ್ಷ್ಯತೆಯ ನಂತರ ಯೋಜನೆಯು ಇತ್ತೀಚೆಗೆ ಪುನರಾರಂಭಗೊಂಡಿದೆ ಎಂದು ಬಿಬಿಎಂಪಿ ಎಂಜಿನಿಯರ್ಗಳು ಹೇಳಿಕೊಂಡರೂ, ಇದು ಪೂರ್ಣಗೊಳ್ಳಲು ಇನ್ನೂ ಕನಿಷ್ಠ ಎರಡು ವರ್ಷಗಳು ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ
ಈ ಯೋಜನೆಗೆ 2017 ರಲ್ಲಿ ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಅಡಿಪಾಯ ಹಾಕಿದರು. ಇದನ್ನು 2021 ರಲ್ಲಿ ಕೆಂಪೇಗೌಡರ 511 ನೇ ಜನ್ಮದಿನದ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮರುಪ್ರಾರಂಭಿಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್, ಈಶಾನ್ಯ ರಾಜ್ಯಗಳ ವಿದ್ಯಾರ್ಥಿನಿಯರ ವಸತಿನಿಲಯ ಹಾಗೂಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಆರಂಭಿಸಲು ಮಂಜೂರಾತಿ ಸಿಕ್ಕಿತ್ತು. ಈ ಪೈಕಿ, ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಾಮಗಾರಿ ಕಳೆದ ವರ್ಷವೇ ಆರಂಭವಾಗಿದೆ. ಈಶಾನ್ಯ ರಾಜ್ಯಗಳ ವಿದ್ಯಾರ್ಥಿನಿಯರ ವಸತಿನಿಲಯ ಕಟ್ಟಡಮಾ.6ರಂದು ಉದ್ಘಾಟನೆಗೊಂಡಿದೆ. ಆದರೆ,ಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಕಾಮಗಾರಿಯನ್ನು ಇದುವರೆಗೂ ಆರಂಭಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
ವಿಶ್ವವಿದ್ಯಾನಿಲಯದ ಆವರಣದಲ್ಲಿ ಗೋಡೆಗಳು ಒಡೆದು ಹೋಗಿರುವುದರಿಂದ ಕ್ಯಾಂಪಸ್ನಲ್ಲಿ ಭದ್ರತೆಯ ಕೊರತೆ ಎದುರಾಗಿದೆ ಶ್ರೀಗಂಧದ ಮರ ಕಳ್ಳತನದ ಹಾಟ್ಸ್ಪಾಟ್ ಆಗಿ ಮಾರ್ಪಟ್ಟಿದೆ ಎಂದು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು TNIE ಗೆ ತಿಳಿಸಿದ್ದಾರೆ. ಅಧ್ಯಯನ ಕೇಂದ್ರವು ಬೆಂಗಳೂರಿಗೆ ಕೆಂಪೇಗೌಡರ ಕೊಡುಗೆಗಳನ್ನು ಗೌರವಿಸುವ ಉದ್ದೇಶವನ್ನು ಹೊಂದಿದ್ದು, ಅವರ ದೃಷ್ಟಿ ಮತ್ತು ಸಾಧನೆಗಳನ್ನು ತಿಳಿಸುವ ಅಗತ್ಯವಿದೆ. ಆದರೆ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಯಾವುದು ಸಾಧ್ಯವಾಗುತ್ತಿಲ್ಲ ಎಂದು ಅರ್ಥಶಾಸ್ತ್ರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ವಿಷಾಧ ವ್ಯಕ್ತ ಪಡಿಸಿದ್ದಾರೆ.
Advertisement