3.5 ಲಕ್ಷ ಅನರ್ಹ BPL ಕಾರ್ಡ್‌ಗಳ ತೆಗೆದು, APLಗೆ ಪರಿವರ್ತಿಸಲಾಗಿದೆ: ಸಚಿವ ಕೆ.ಎಚ್‌ ಮುನಿಯಪ್ಪ

ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಟಿ.ಎನ್‌. ಜವರಾಯಿಗೌಡ, ಟಿ.ಎ. ಶರವಣ, ಬಿಜೆಪಿಯ ಸಿ.ಟಿ. ರವಿ, ಹಣಮಂತ ನಿರಾಣಿ, ಕಾಂಗ್ರೆಸ್‌ನ ಐವನ್‌ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿರುವ 25 ಲಕ್ಷ ಎಪಿಎಲ್ ಕಾರ್ಡುದಾರರ ಪೈಕಿ ಕೇವಲ 1 ಲಕ್ಷ ಮಂದಿ ಮಾತ್ರವೇ ಪಡಿತರ ಪಡೆಯುತ್ತಿದ್ದಾರೆ.
Food Minister KH Muniyappa
ಕೆಹೆಚ್ ಮುನಿಯಪ್ಪ
Updated on

ಬೆಂಗಳೂರು/ಬೆಳಗಾವಿ: ರಾಜ್ಯ ಸರಕಾರ ಅರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್'ಗಳನ್ನು ರದ್ದು ಮಾಡುವುದಿಲ್ಲ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಪುನರುಚ್ಛರಿಸಿದ್ದು, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಸರಳೀಕರಿಸುವ ಗುರಿ ಹೊಂದಲಾಗಿದೆ ಎಂದು ಸೋಮವಾರ ಹೇಳಿದರು.

ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಟಿ.ಎನ್‌. ಜವರಾಯಿಗೌಡ, ಟಿ.ಎ. ಶರವಣ, ಬಿಜೆಪಿಯ ಸಿ.ಟಿ. ರವಿ, ಹಣಮಂತ ನಿರಾಣಿ, ಕಾಂಗ್ರೆಸ್‌ನ ಐವನ್‌ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿರುವ 25 ಲಕ್ಷ ಎಪಿಎಲ್ ಕಾರ್ಡುದಾರರ ಪೈಕಿ ಕೇವಲ 1 ಲಕ್ಷ ಮಂದಿ ಮಾತ್ರವೇ ಪಡಿತರ ಪಡೆಯುತ್ತಿದ್ದಾರೆ. ಕೇಂದ್ರದ ಆದೇಶದ ಮೇರೆಗೆ ಹೊಸದಾಗಿ ಎಪಿಎಲ್ ಕಾರ್ಡುಗಳನ್ನು ವಿತರಿಸುವುದನ್ನು ನಿಲ್ಲಿಸಲಾಗಿದೆ. ಬಿಪಿಎಲ್ ಕಾರ್ಡುದಾರರ ಪಟ್ಟಿಯಲ್ಲಿ ಶೇ.20ರಷ್ಟು ಅನರ್ಹರಿದ್ದಾರೆ. ಅವರನ್ನು ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿದೆ ಎಂದು ಹೇಳಿದರು.

ಬಿಪಿಎಲ್, ಎಪಿಎಲ್ ಸೇರಿದಂತೆ ಒಟ್ಟು 5.29 ಕೋಟಿ ಕಾರ್ಡುದಾರರಿದ್ದಾರೆ. ವಾರ್ಷಿಕ 1.20 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಬಿಪಿಎಲ್ ವ್ಯಾಪ್ತಿಯಲ್ಲಿ ಬರಲಿದ್ದಾರೆ. ಬಿಪಿಎಲ್ ಕಾರ್ಡುದಾರರ ಪಟ್ಟಿಯಲ್ಲಿ ಶೇ.20ರಷ್ಟು ಮಂದಿ ಅನರ್ಹರಿದ್ದಾರೆ. ಇವರನ್ನು ಎಪಿಎಲ್ ಕಾರ್ಡುದಾರರಾಗಿ ಪರಿಷ್ಕರಿಸುವ ಪ್ರಕ್ರಿಯೆಯಲ್ಲಿ ಗೊಂದಲವಾಗಿರುವುದು ನಿಜ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಬಡತನ ರೇಖೆಗಿಂತ ಕಡಿಮೆ ಆದಾಯ ಹೊಂದಿರುವ ಓರ್ವ ಕಾರ್ಡುದಾರರಿಗೂ ಅನ್ಯಾಯ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಪಂಚಾಯತ್ ಹಾಗೂ ಗ್ರಾಮ ಮಟ್ಟದಲ್ಲಿ ಈ ಬಗ್ಗೆ ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Food Minister KH Muniyappa
ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ, ಬಡವರ ಬಿಪಿಎಲ್ ಕಾರ್ಡ್ ಕಸಿಯಲ್ಲ: ಸಿಎಂ ಸಿದ್ದರಾಮಯ್ಯ ಪುನರುಚ್ಛಾರ

ಅಕ್ರಮ ಪಡಿತರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ವ್ಯಕ್ತಿಗಳ ವಿರುದ್ಧ ಆರೋಪ ಸಾಬೀತಾದಲ್ಲಿ ನ್ಯಾಯಾಲಯದ ಆದೇಶದಂತೆ ಕಾನೂನು ಕ್ರಮ ವಹಿಸಲಾಗುವುದು. 2021ರಿಂದ 2023ರ ಮೇ ಅವಧಿಯಲ್ಲಿ 3,35,463 ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದ್ದು, ಇವರಿಂದ 13.51 ಕೋಟಿ ರೂ ದಂಡ ವಿಧಿಸಲಾಗಿದೆ. 2024ನೇ ಸಾಲಿನಲ್ಲಿ 213 ಎಫ್ಐಆರ್ ದಾಖಲಿಸಿ ಒಟ್ಟು 2.68 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, 238 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಪರಿಶೀಲಿಸಲು, ಮೇಲ್ವಿಚಾರಣೆ ಮಾಡಲು ಇಲಾಖಾ ವತಿಯಿಂದ ವಿಭಾಗವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅನ್ನು ಸಂಪೂರ್ಣವಾಗಿ ಸುವ್ಯವಸ್ಥಿತಗೊಳಿಸಲು ಸರ್ಕಾರಕ್ಕೆ ಸರಿಸುಮಾರು ಮೂರು ತಿಂಗಳ ಅಗತ್ಯವಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿಪಕ್ಷಗಳ ಸಹಕಾರದ ಅಗತ್ಯವಿದೆ. ನಾವು ಅನರ್ಹರನ್ನು ತೆಗೆದುಹಾಕಲು ಕ್ರಮಗಳನ್ನು ತೆಗೆದುಕೊಂಡಾಗ, ಪ್ರತಿಪಕ್ಷಗಳು ಮಾಧ್ಯಮದ ಮೊರೆ ಹೋಗುತ್ತವೆ ಮತ್ತು ಸರ್ಕಾರವನ್ನು ಟೀಕಿಸುತ್ತವೆ ಎಂದು ಹೇಳಿದರು. ಈ ವೇಳೆ ಬಿಜೆಪಿ ಎಂಎಲ್ಸಿಗಳ ಸಚಿವರು ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದರು. ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾಧ್ಯಮದವರ ಮೊರೆ ಹೋಗುವುದು ಯಾವುದೇ ರಾಜಕೀಯ ಪಕ್ಷದ ಹಕ್ಕು ಎಂದು ಹೇಳಿ, ಆಕ್ರೋಶಗೊಂಡ ಬಿಜೆಪಿ ಸದಸ್ಯರನ್ನು ಸಮಾಧಾನ ಪಡಿಸಲು ಯತ್ನಿಸಿದರು.

ಈ ವೇಳೆ ಬಿಜೆಪಿ ಎಂಎಲ್ ಸಿ ಸಿ.ಟಿ. ರವಿ ಅವರು, BPL ಅಂಕಿಅಂಶಗಳ ನಿಖರತೆ ಕುರಿತು ಪ್ರಶ್ನೆ ಎತ್ತಿದರು. ಕರ್ನಾಟಕದ ಜನಸಂಖ್ಯೆಯ ಶೇ.70 ಕ್ಕಿಂತ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ದಕ್ಷಿಣದ ಇತರ ರಾಜ್ಯಗಳಲ್ಲಿ BPL ಕಾರ್ಡುದಾರರು ಜನಸಂಖ್ಯೆಯ ಶೇ.50ಕ್ಕಿಂತ ಕಡಿಮೆಯಿದ್ದರೆ, ಕರ್ನಾಟಕದಲ್ಲಿ ಈ ಸಂಖ್ಯೆ ಶೇ.70ಕ್ಕಿಂತ ಹೆಚ್ಚಿದೆ, ಈ ಬಗ್ಗೆ ಗ್ರಾಮ ಹಾಗೂ ಗ್ರಾಮವಾರು ಪರಿಶೀಲನೆ ನಡೆಸಲಾಗುವುದು. ಇಂತಹ ಅಕ್ರಮ ತಡೆಗೆ ವಿರೋಧ ಪಕ್ಷಗಳು ಸಹಕಾರ ನೀಡಬೇಕು. ರಾಜಕೀಯ ಮಾಡಬಾರದು ಎಂದು ಕೋರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com