Aero India 2025 ಶೋಗೆ ಆರಂಭದಲ್ಲೇ ವಿಘ್ನ: ಮೀಸಲು ಅರಣ್ಯದ ಆಕ್ಷೇಪ ಎತ್ತಿದ ಅರಣ್ಯ ಇಲಾಖೆ
ಬೆಂಗಳೂರು: ಬಹು ನಿರೀಕ್ಷಿತ ದ್ವೈವಾರ್ಷಿಕ ಏರೋ ಇಂಡಿಯಾ ಶೋಗೆ ಇನ್ನು ಕೇವಲ ಎರಡು ತಿಂಗಳು ಬಾಕಿ ಉಳಿದಿದ್ದು, ಫೆಬ್ರವರಿ 10ರಿಂದ 14ರವರೆಗೆ ದೇಶದ ಪ್ರಧಾನ ವೈಮಾನಿಕ ಪ್ರದರ್ಶನ ನಡೆಯಲಿರುವ ಯಲಹಂಕದ ವಾಯುಪಡೆ ನಿಲ್ದಾಣವು ರಾಜ್ಯ ಸರ್ಕಾರದ ಅದರಲ್ಲೂ ಮುಖ್ಯವಾಗಿ ಅರಣ್ಯ ಇಲಾಖೆಯ ಕಣ್ಗಾವಲಿನಲ್ಲಿದೆ.
ಬೆಂಗಳೂರು ಉತ್ತರ ತಾಲೂಕಿನ ಗಂಟಿಗಾನಹಳ್ಳಿ ಅರಣ್ಯ ಬ್ಲಾಕ್ನಲ್ಲಿರುವ ಸರ್ವೆ ನಂಬರ್ 49ರಲ್ಲಿ ಏರೋ ಇಂಡಿಯಾ ಇರುವ ಜಾಗ 159.28 ಎಕರೆ ಮೀಸಲು ಅರಣ್ಯವಾಗಿದ್ದು ಏರೋ ಇಂಡಿಯಾ ಶೋ ಬೇರೆ ಕಡೆ ಮಾಡುವಂತೆ ಹೇಳುತ್ತಿದೆ.
ಅಕ್ಟೋಬರ್ 1, 1931, ಗೆಜೆಟ್ ಅಧಿಸೂಚನೆ ಮತ್ತು ಸರ್ಕಾರಿ ಆದೇಶದ ಪ್ರಕಾರ, ಭೂಮಿ ಮೀಸಲು ಅರಣ್ಯ ಪ್ರದೇಶವಾಗಿದೆ. ಅದನ್ನು ಡಿನೋಟಿಫೈ ಮಾಡಿದ ಯಾವುದೇ ಸೂಚನೆಯಿಲ್ಲ. ಸರ್ಕಾರವು 1996 ರಿಂದ ಈ ಸ್ಥಳದಲ್ಲಿ ಏರೋ ಇಂಡಿಯಾ ಪ್ರದರ್ಶನವನ್ನು ಆಯೋಜಿಸುತ್ತಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 3, 2024 ರಂದು ನಡೆದ ನಾಗರಿಕ ಮಿಲಿಟರಿ ಸಂಪರ್ಕ ಸಭೆಯಲ್ಲಿ ಈ ವಿಷಯವು ಮುನ್ನೆಲೆಗೆ ಬಂದಿತು. ಸಭೆಯಲ್ಲಿ ಅರಣ್ಯ ಇಲಾಖೆಯು ನಗರದ ಬೇರೆಡೆ ಜಾಗ ನೀಡಿ ಅದರ ಬದಲಾಗಿ ಅರಣ್ಯ ಇಲಾಖೆಗೆ ಭೂಮಿ ನೀಡುವಂತೆ ಪರಿವೇಶ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸುವಂತೆ ರಕ್ಷಣಾ ಸಂಸ್ಥೆಗಳಿಗೆ ಸೂಚಿಸಿದರು.
ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು TNIE ಜೊತೆ ಈ ಬಗ್ಗೆ ಮಾತನಾಡಿ, ಭಾರತೀಯ ವಾಯುಪಡೆಯು ಬಳಸುತ್ತಿರುವ ಭೂಮಿ ಮೀಸಲು ಅರಣ್ಯ ಪ್ರದೇಶದ ಒಂದು ಭಾಗವಾಗಿದೆ. ಅದನ್ನು ಡಿನೋಟಿಫೈ ಮಾಡಲಾಗಿಲ್ಲ. ಆದರೂ ಇದು ಕಾಡಿನ ಎಲ್ಲಾ ಗುಣಲಕ್ಷಣಗಳನ್ನು ಕಳೆದುಕೊಂಡಿದೆ. 2012 ರ ನಂತರ ಹಸಿರು/ಮರಗಳ ಹೊದಿಕೆಯನ್ನು ಹೊಂದಿಲ್ಲ.
ಈ ಭೂಮಿಯನ್ನು ರಕ್ಷಣಾ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ ಎಂಬುದಕ್ಕೆ ಅರಣ್ಯ ಇಲಾಖೆ ಅಥವಾ ಕಂದಾಯ ಇಲಾಖೆ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದರು.
ದಾಖಲೆ ಪ್ರಕಾರ ಅರಣ್ಯ ಭೂಮಿ
ನಾವು ಅರಣ್ಯ ಸಂರಕ್ಷಣಾ ಕಾಯಿದೆಯಡಿಯಲ್ಲಿ ಸೆಕ್ಷನ್ 64 (ಎ) ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದೇವೆ, ಭಾರತೀಯ ವಾಯುಪಡೆ ಮತ್ತು ರಕ್ಷಣಾ ಸಂಸ್ಥೆಗಳು ಭೂಮಿಯಲ್ಲಿ ತಮ್ಮ ಮಾಲೀಕತ್ವವನ್ನು ಸಾಬೀತುಪಡಿಸುವ ಸಂಬಂಧಿತ ದಾಖಲೆಗಳನ್ನು ಸಲ್ಲಿಸಲು ಕೇಳಿಕೊಳ್ಳುತ್ತೇವೆ ಎಂದು ಹೇಳಿದರು.
ಸರ್ಕಾರಿ ಭೂ ದಾಖಲೆಗಳನ್ನು ಪರಿಶೀಲಿಸುವಾಗ ಮತ್ತು ತಂಡಗಳು ರಚಿಸಿದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪರಿಕರಗಳನ್ನು ಬಳಸಿಕೊಂಡು ಗೂಗಲ್ ಅರ್ಥ್ ಚಿತ್ರಗಳೊಂದಿಗೆ ಹೋಲಿಸಿದಾಗ ಇದು ಅರಣ್ಯ ಭೂಮಿ ಎಂದು ನಾವು ಕಂಡುಹಿಡಿದಿದ್ದೇವೆ. ಗೋಧವರ್ಮನ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್, ಒಮ್ಮೆ ಅರಣ್ಯವನ್ನು ಡಿನೋಟಿಫೈ ಮಾಡುವವರೆಗೆ ಯಾವಾಗಲೂ ಅದು ಅರಣ್ಯ ಪ್ರದೇಶವೇ ಆಗಿರುತ್ತದೆ ಎಂದರು.
ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಜಮೀನಿನ ಮಾಲೀಕರು ಯಾರು ಎಂಬುದನ್ನು ಕಂದಾಯ ದಾಖಲೆಗಳ ಮೂಲಕ ಪರಿಶೀಲಿಸಿದ್ದೇವೆ. ಆದರೆ ಹಸ್ತಾಂತರದ ದಾಖಲೆಗಳು ಸಿಕ್ಕಿಲ್ಲ. ಹಕ್ಕುಗಳು, ಹಿಡುವಳಿ ಮತ್ತು ಬೆಳೆಗಳು (RTC) ದಾಖಲೆಗಳು ಇದು ಅರಣ್ಯ ಭೂಮಿ ಎಂದು ಹೇಳುತ್ತದೆ.
ಡಿಸೆಂಬರ್ 3 ರ ಸಭೆಯನ್ನು ಪ್ರಾಥಮಿಕವಾಗಿ ಜಾಲಹಳ್ಳಿಯಲ್ಲಿ 452 ಎಕರೆ ಮೀಸಲು ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲು ಚರ್ಚಿಸಲು ಕರೆಯಲಾಗಿದೆ, ಇದನ್ನು ಈಗ ರಕ್ಷಣಾ ಇಲಾಖೆಯು ಶೂಟಿಂಗ್ ಅಭ್ಯಾಸ ಶ್ರೇಣಿಯಾಗಿ ಬಳಸುತ್ತಿದೆ. ರಾಜ್ಯ ಸರಕಾರ 2017ರಲ್ಲಿ ಆದೇಶ ಹೊರಡಿಸಿದಾಗ ಜಾಲಹಳ್ಳಿ ಅರಣ್ಯ ಭೂಮಿಯನ್ನು ಮತ್ತೆ ಅರಣ್ಯ ಇಲಾಖೆಗೆ ಏಕೆ ಹಿಂಪಡೆಯಲಿಲ್ಲ ಎಂಬುದನ್ನು ಚರ್ಚಿಸಲು ಸಭೆ ಕರೆಯಲಾಗಿತ್ತು ಎಂದರು.
ಜಾಲಹಳ್ಳಿ ಜಮೀನಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಗೆ 1.65 ಕೋಟಿ ರೂಪಾಯಿ ಪಾವತಿ ಮಾಡಿರುವುದಾಗಿ ರಕ್ಷಣಾ ಸಿಬ್ಬಂದಿ ಹೇಳಿದರೆ, ಅದನ್ನು ತೋರಿಸಲು ಅವರ ಬಳಿ ಯಾವುದೇ ಪುರಾವೆ ಇಲ್ಲ. ಜಮೀನು ಡಿನೋಟಿಫೈ ಆಗಿದೆ ಎಂಬುದಕ್ಕೆ ಅವರ ಬಳಿ ಯಾವುದೇ ಪುರಾವೆ ಇರಲಿಲ್ಲ. ಆರ್ಟಿಸಿ ದಾಖಲೆಗಳ ಪ್ರಕಾರ ಎರಡೂ ಜಮೀನು (ಯಲಹಂಕ ಮತ್ತು ಜಾಲಹಳ್ಳಿ) ಅರಣ್ಯ ಇಲಾಖೆಗೆ ಸೇರಿದ್ದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.