ಯಾರೂ ಯಾರನ್ನೂ ಕೊಲೆ ಮಾಡುತ್ತಿಲ್ಲ, ಸಭೆ ನಡೆಸಲು ಪೊಲೀಸ್ ಠಾಣೆ BJP ಕಚೇರಿಯೇ: ಸಿ.ಟಿ ರವಿ ಆರೋಪಕ್ಕೆ ಡಿಕೆಶಿ ತಿರುಗೇಟು
ಬೆಂಗಳೂರು: ಯಾರು ಯಾರನ್ನೂ ಕೊಲೆ ಮಾಡುತ್ತಿಲ್ಲ. ಪೊಲೀಸರ ಕ್ರಮ ಸರಿಯಾಗಿದೆ, ನಾವು ಯಾವುದರಲ್ಲೂ ಮಧ್ಯ ಪ್ರವೇಶಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.
ಪೊಲೀಸರು ತಮ್ಮನ್ನು ಹತ್ಯೆ ಮಾಡಲು ಯತ್ನಿಸುತ್ತಿದ್ದಾರೆಂಬ ಎಂಬ ಸಿಟಿ ರವಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಯಾರೂ ಯಾರನ್ನೂ ಕೊಲೆ ಮಾಡುತ್ತಿಲ್ಲ, ನಾನೂ ವಿಡಿಯೋ ತುಣುಕನ್ನು ನೋಡಿದ್ದೇನೆ, ಪೊಲೀಸರು ಭೇಟಿಯಾಗಲು ಅವಕಾಶ ನೀಡಿದಾಗ ಬಿಜೆಪಿಯವರು ಠಾಣೆಯಲ್ಲಿಯೇ ಸಭೆ ನಡೆಸಿರುವುದು ಕಂಡು ಬಂದಿದೆ. ಸಭೆ ನಡೆಸಲು ಪೊಲೀಸ್ ಠಾಣೆ ಬಿಜೆಪಿ ಸ್ಥಳವೇ? ಪೊಲೀಸರ ಕ್ರಮ ಸರಿಯಾಗಿದೆ. ನಾವು ಯಾವುದರಲ್ಲೂ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ.
ವ್ಯಕ್ತಿ ಬಂಧನವಾದರೆ ಆತನ ಕುಟುಂಬದ 1-2 ಸದಸ್ಯರಿಗೆ ಭೇಟಿಯಾಗಲು ಅನುಮತಿ ನೀಡಲಾಗುತ್ತದೆ. ಆದರೆ, ಬಿಜೆಪಿಯವರು ಠಾಣೆಯಲ್ಲಿ ಸಭೆ ನಡೆಸಿದ್ದಾರೆ. ಇದಕ್ಕೆ ಅನುಮತಿ ನೀಡಿದ ಪೊಲೀಸರಿಗೇ ಪ್ರಶ್ನೆ ಮಾಡುತ್ತೇನೆ. ಯಾರು ಯಾರನ್ನು ಹತ್ಯೆ ಮಾಡುತ್ತಿದ್ದಾರೆ? ತಮ್ಮ ನಾಯಕರ ವಿರುದ್ಧ ಕೆಟ್ಟ ಪದಗಳನ್ನು ಬಳಕೆ ಮಾಡಿದರೆ, ಅವರ ಬೆಂಬಲಿಗರು ಪ್ರತಿಭಟನೆ ನಡೆಸುವುದು ಸಹಜ. ಅದೇ ರೀತಿ ಈ ಪ್ರಕರಣದಲ್ಲೂ ಆಗಿದೆ.
ಸದನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಬಿಜೆಪಿಯವರು ಮಾಡಿದ್ದ ಅಗೌರವದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ರವಿಯವರು ರಾಹುಲ್ ಗಾಂಧಿಯನ್ನು ಮಾದಕ ವ್ಯಸನಿ ಎಂದು ಕರೆದಿದ್ದರು. ಈ ವೇಳೆ ಪ್ರತಿಭಟನೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸಿಟಿ ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವೇಶ್ಯೆ ಎಂದು ನಿಂದಿಸಿದು. ಇದಕ್ಕೆ ನಮ್ಮ ಬಳಿ ವಿಡಿಯೋ ಸಾಕ್ಷ್ಯಗಳಿವೆ. ರಾಹುಲ್ ಗಾಂಧಿಯವರನ್ನೇಕೆ ಮಾದಕ ವ್ಯಸನಿ ಎಂದು ಕರೆದರು? ಇದು ಚಿಕ್ಕಮಗಳೂರಿನ, ಬಿಜೆಪಿಯ ಮತ್ತು ಭಾರತೀಯನ ಸಂಸ್ಕೃತಿಯೇ? ನಾನು ನಿಮಗೆ ವಿಡಿಯೋ ಸಾಕ್ಷ್ಯವನ್ನು ನೀಡುತ್ತೇನೆ. ಅದನ್ನು ಎಲ್ಲರಿಗೂ ತೋರಿಸಿ ಎಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ