ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಫೆಬ್ರವರಿ 16 ಶುಕ್ರವಾರ ಮಂಡಿಸಲಿರುವ ಬಜೆಟ್ನಲ್ಲಿ ರಾಜಧಾನಿ ಬೆಂಗಳೂರಿಗೆ ಯಾವೆಲ್ಲಾ ಹೊಸ ಯೋಜನೆಗಳನ್ನು ಪ್ರಕಟಿಸಲಿದ್ದಾರೆ ಎಂಬ ಕುತೂಹಲ ಇದೆ. ನಗರದ ಸಂಚಾರ ದಟ್ಟಣೆನ್ನು ತಗ್ಗಿಸುವ ಕ್ರಮವಾಗಿ ಸುರಂಗ ಮಾರ್ಗಗಳ(Tunnel road) ಕುರಿತು ಘೋಷಣೆ ಮಾಡುವ ಸಾಧ್ಯತೆಯಿದೆ. ರಾಜ್ಯ ರಾಜಧಾನಿಯಲ್ಲಿ ಸಂಚಾರ ಸುಗಮಗೊಳಿಸಲು ಬ್ರ್ಯಾಂಡ್ ಬೆಂಗಳೂರು ಭಾಗವಾಗಿ ಸುರಂಗ ರಸ್ತೆಗಳನ್ನು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ ಆರಂಭದ ದಿನವಾದ ನಿನ್ನೆ ಜಂಟಿ ಸದನ ಉದ್ದೇಶಿಸಿ ಮಾತನಾಡುವ ವೇಳೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಿತಿಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸುರಂಗ ರಸ್ತೆಗಳ ನಿರ್ಮಾಣವನ್ನು ಉದ್ದೇಶಿಸಲಾಗಿದೆ ಎಂದಿದ್ದರು.
ಸುರಂಗ ಮಾರ್ಗ ನಿರ್ಮಾಣದ ಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಮೆಟ್ರೋ ಹಂತ-2 ಮತ್ತು ರೀಚ್-5 ಹೊಸ ಮಾರ್ಗದಡಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ 19.15 ಕಿ.ಮೀ ಉದ್ದದ 16 ನಿಲ್ದಾಣಗಳು ಡಬಲ್ ಡೆಕ್ಕರ್ ಆಗಲಿವೆ. ಪ್ರಸ್ತುತ, ಶೇಕಡಾ 98ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಜುಲೈ ವೇಳೆಗೆ ಈ ಮಾರ್ಗ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೃಷ್ಣರಾಜಪುರದವರೆಗೆ 19.75 ಕಿಮೀ ಮತ್ತು ಹಂತ-2ಬಿ ಅಡಿಯಲ್ಲಿ ಕೃಷ್ಣರಾಜಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮೆಟ್ರೋ ಯೋಜನೆ ಕೆಲಸ ನಡೆಯುತ್ತಿದೆ. ಜೂನ್ 2026 ರೊಳಗೆ ಎರಡು ವಿಭಾಗಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕುರಿತು ಮಾತನಾಡಿದ್ದ ಅವರು, ಬೈಯಪ್ಪನಹಳ್ಳಿ-ಚಿಕ್ಕಬಾಣಾವರ 25 ಕಿಮೀ ಕಾರಿಡಾರ್ನ ಸಿವಿಲ್ ಕಾಮಗಾರಿ ಪ್ರಗತಿಯಲ್ಲಿದೆ. ಹೀಲಲಿಗೆ-ರಾಜನಕುಂಟೆ 46.24 ಕಿ.ಮೀ ಕಾರಿಡಾರ್ನ ಸಿವಿಲ್ ಕಾಮಗಾರಿಗೆ ಟೆಂಡರ್ ಅಂತಿಮಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.
Advertisement