ಜಗಳ ವಿಕೋಪಕ್ಕೆ ಹೋಗಿ ಪತ್ನಿಗೆ ಚಾಕುವಿನಿಂದ ಇರಿದು ಜೈಲುಪಾಲಾದ ಪತಿ!
ಬೆಂಗಳೂರು: ತನ್ನ ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲ ಎಂದು ಜಗಳವಾಡುತ್ತಿದ್ದಾಗ ಜಗಳ ವಿಕೋಪಕ್ಕೆ ತಿರುಗಿ ಪತಿ ತನ್ನ ಪತ್ನಿಗೆ ಚಾಕುವಿನಿಂದ ಇರಿದ ಘಟನೆ ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿ ನಡೆದಿದೆ. ಜಯಪ್ರಕಾಶ್(32ವ) ತನ್ನ ಪತ್ನಿ ದಿವ್ಯಶ್ರೀ (26ವ)ಗೆ ಚಾಕು ಇರಿದು ಜೈಲುಪಾಲಾದ ವ್ಯಕ್ತಿ.
ಕಳೆದ ಫೆಬ್ರವರಿ 15ರ ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕೊಲೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಆರೋಪಿ ಜಯಪ್ರಕಾಶ್ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಜಯಪ್ರಕಾಶ್ ಹಾಗೂ ದಿವ್ಯಶ್ರೀ ಇಬ್ಬರೂ ಪರಸ್ಪರ ಪ್ರೀತಿಸಿ 2019ರಲ್ಲಿ ಮದುವೆಯಾಗಿದ್ದರು. ಪೋಷಕರ ವಿರೋಧ ಹಿನ್ನಲೆ ಬೆಂಗಳೂರಲ್ಲಿ ವಾಸವಾಗಿದ್ದರು. ಗಂಡನಿಗೆ ಅನಾರೋಗ್ಯ ಹಿನ್ನಲೆ ಮನೆಯ ಖರ್ಚೆಲ್ಲ ಪತ್ನಿಯೇ ನೋಡಿಕೊಳ್ಳುತ್ತಿದ್ದಳು. ಮೊದಲು ಮೂಡಲಪಾಳ್ಯದಲ್ಲಿ ಮನೆ ಮಾಡಿಕೊಂಡು ವಾಸವಿದ್ದ ದಂಪತಿ, ನಂತರ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು. ಇವರಿಬ್ಬರೂ ಮನೆಯ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದರೂ ಇವರ ನಡುವೆ ಗಲಾಟೆ, ಜಗಳ ಸಾಮಾನ್ಯವಾಗಿತ್ತು.
ಮದುವೆ ಆದಾಗಿನಿಂದಲೂ ಜಯಪ್ರಕಾಶ್ಗೆ ತನ್ನ ಪತ್ನಿ ಮೇಲೆ ಅನುಮಾನವಿತ್ತು. ನಿನಗೆ ಅಕ್ರಮ ಸಂಬಂಧ ಇದೆ ಎಂದು ಪ್ರತಿದಿನ ಜಯಪ್ರಕಾಶ್ ಗಲಾಟೆ ಮಾಡುತ್ತಿದ್ದನಂತೆ. ಫೋನಲ್ಲಿ ಯಾರ ಯಾರ ಜೊತೆಗೆ ಮಾತನಾಡುತ್ತೀಯಾ ಎಂದು ಹಲ್ಲೆ ನಡೆಸುತ್ತಿದ್ದ. ಹೀಗೆ ಒಮ್ಮೆ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ತನ್ನ ತಂಗಿಯ ನಿಶ್ಚಿತಾರ್ಥಕ್ಕೆ ಬರಲಿಲ್ಲ ಎಂಬ ಕೋಪದಿಂದ ಜಯಪ್ರಕಾಶ್ ಚಾಕು ತೆಗೆದುಕೊಂಡು ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಮುಂದಾದಾಗ ಚಾಕು ಕಾಲಿಗೆ ತಾಕಿ ದಿವ್ಯಶ್ರೀಗೆ ಗಾಯಗಳಾಗಿವೆ. ಕಾಲಿಗೆ ಗಾಯ ಆಗಿದ್ದು ಎಂಟು ಹೊಲಿಗೆ ಹಾಕಲಾಗಿದೆ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ಜಯಪ್ರಕಾಶ್ ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.