ಬೆಂಗಳೂರು ಇಮೇಜ್ ಸುಧಾರಣೆಗೆ, ಸಂಚಾರ ದಟ್ಟಣೆ ಸಮಸ್ಯೆಗೆ ಸ್ಕೈಡೆಕ್ ಪ್ರಯೋಜನವಿಲ್ಲ, ಅದಕ್ಕೆ ಪ್ರಾಶಸ್ತ್ಯ ಕೊಡುವ ಅಗತ್ಯವೇನಿದೆ?: ತಜ್ಞರ ಅಭಿಮತ

ಬಜೆಟ್ ಮಂಡನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್
ಬಜೆಟ್ ಮಂಡನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2024ನೇ ಸಾಲಿನ ಬಜೆಟ್‌ನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ 250 ಮೀಟರ್ ಸ್ಕೈಡೆಕ್ ಯೋಜನೆಯನ್ನು ಸೇರಿಸಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ.

ಉದ್ಯೋಗ ಸೃಷ್ಟಿಸುವುದು, ಪ್ರವಾಸಿಗರನ್ನು ಆಕರ್ಷಿಸುವುದು ಮತ್ತು ಬೆಂಗಳೂರು ನಗರವನ್ನು ಜನಪ್ರಿಯ ನಗರವನ್ನಾಗಿ ಮಾಡುವುದು ಈ ಯೋಜನೆ ಹಿಂದಿನ ಉದ್ದೇಶವಾದರೂ ಕೂಡ ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ತಜ್ಞರು ಇದಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವನ್ನು ಪ್ರಶ್ನಿಸಿದ್ದಾರೆ.

ಬಜೆಟ್ ಮಂಡನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್
ಕರ್ನಾಟಕ ಬಜೆಟ್ 2024: ರಾಜಧಾನಿ ಬೆಂಗಳೂರಿಗೆ ಸಿಕ್ಕಿದ್ದೇನು?

ಏನಿದು ಸ್ಕ್ರೈಡೆಕ್ ಯೋಜನೆ?: ರಾಜ್ಯ ಸರ್ಕಾರಿ ಸ್ವಾಮ್ಯದ NGEF ಭೂಮಿಯಲ್ಲಿ ಸುಮಾರು 350 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಕೈಡೆಕ್ ಯೋಜನೆಯನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕೆ ಮೂರು ವರ್ಷಗಳ ಕಾಲಾವಧಿಯಿರುತ್ತದೆ. ಇದಕ್ಕೆ ಎನ್ ಜಿಇಎಫ್ ನ ಇಡೀ ಭೂಮಿಯನ್ನು ಬಳಸಿಕೊಳ್ಳಲಾಗುವುದು. ಇದರಲ್ಲಿ ಉದ್ಯಾನ, ಪಾರ್ಕಿಂಗ್ ಸ್ಥಳ ಮತ್ತು ಕುಳಿತುಕೊಳ್ಳುವ ಸ್ಥಳವನ್ನು ಹೊಂದಿರುತ್ತದೆ. ಮೇಲ್ಛಾವಣಿಯಲ್ಲಿ ರೆಸ್ಟೋರೆಂಟ್‌ಗಳನ್ನು ಹೊಂದುವುದು ಯೋಜನೆ ಭಾಗವಾಗಿದೆ. ನೈಸರ್ಗಿಕ ಬೆಳಕಿಗಾಗಿ ವ್ಯೂಪಾಯಿಂಟ್ ಮತ್ತು ಸೌರ ಫಲಕಗಳು ಇರುತ್ತವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಆದರೆ, ಅಧಿಕಾರಿಗಳು ಇಂತಹ ಯೋಜನೆ ಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ. 'ಬಜೆಟ್ ಪೂರ್ವ ಚರ್ಚೆಯ ವೇಳೆ ಯೋಜನೆಗೆ ಆದ್ಯತೆ ನೀಡಬಾರದು ಎಂದು ಮುಖ್ಯಮಂತ್ರಿ ಹಾಗೂ ಡಿಸಿಎಂಗೆ ತಿಳಿಸಲಾಗಿತ್ತು. ಬೆಂಗಳೂರಿನ ಚಿತ್ರಣವನ್ನು ಸುಧಾರಿಸಲು, ಒಳಚರಂಡಿ ಮಾರ್ಗಗಳು ಮತ್ತು ಮಳೆನೀರು ಚರಂಡಿಗಳಂತಹ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು. ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಆದ್ಯತೆ ನೀಡಬೇಕು. ನಗರದ ಹೊರವಲಯದಲ್ಲಿರುವ ಟೆಕ್ಕಿಗಳು ಮತ್ತು ಕಾರ್ಪೊರೇಟ್‌ಗಳು ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿವೆ. ಸಂಚಾರ ದಟ್ಟಣೆಯಿಂದಾಗಿ ಕಂಪನಿಗಳು ತಮ್ಮ ಕಚೇರಿಯ ಸಮಯವನ್ನು ಬದಲಾಯಿಸಿವೆ. ಹೊರ ವರ್ತುಲ ರಸ್ತೆ ಕಂಪನಿಗಳ ಸಂಘವು ಟ್ರಾಫಿಕ್ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಹಲವಾರು ಸಲಹೆಗಳನ್ನು ಮನವಿಗಳನ್ನು ಮಾಡಿವೆ.

ಸ್ವಚ್ಛ ಸರ್ವೇಕ್ಷಣಾ ಶ್ರೇಯಾಂಕದಲ್ಲಿ ಬೆಂಗಳೂರು ಹಿಂದಿದೆ. ಘನತ್ಯಾಜ್ಯ ನಿರ್ವಹಣೆಗೂ ಆದ್ಯತೆ ನೀಡಬೇಕು. ತ್ಯಾಜ್ಯ ನಿರ್ವಹಣೆಗಾಗಿ ಬೆಂಗಳೂರನ್ನು ನಾಲ್ಕು ವಲಯಗಳಾಗಿ ವಿಭಜಿಸುವ ಪ್ರಸ್ತಾವನೆ ಹೊಸದೇನಲ್ಲ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಘನತ್ಯಾಜ್ಯ ನಿರ್ವಹಣಾ ಸಮಿತಿಯು ಇದನ್ನು ಪ್ರಸ್ತಾಪಿಸಿದೆ, ಅದು ಈಗ ಜಾರಿಯಲ್ಲಿದೆ. ಕೊರತೆ ಬಜೆಟ್ ಎಂದು ಸಿಎಂ ಅವರೇ ಪ್ರಸ್ತಾಪಿಸಿದ್ದಾರೆ. ನಗರದ ಅಭಿವೃದ್ಧಿಯತ್ತ ಗಮನ ಹರಿಸಬೇಕು, ಇಂತಹ ಸಮಯದಲ್ಲಿ ಸ್ಕ್ರೈಡೆಕ್ ಯೋಜನೆಯ ಅಗತ್ಯವೇನಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಕೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com