ಕೆಂಪೇಗೌಡ ಲೇಔಟ್: ಭೂಸ್ವಾಧೀನವನ್ನು ಎತ್ತಿ ಹಿಡಿದ ಹೈಕೋರ್ಟ್!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 4,000 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡ ಲೇಔಟ್ ಅಭಿವೃದ್ಧಿಗೆ ಭೂಸ್ವಾಧೀನ ಪ್ರಕ್ರಿಯೆಯ ಸಿಂಧುತ್ವವನ್ನು ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 4,000 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡ ಲೇಔಟ್ ಅಭಿವೃದ್ಧಿಗೆ ಭೂಸ್ವಾಧೀನ ಪ್ರಕ್ರಿಯೆಯ ಸಿಂಧುತ್ವವನ್ನು ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ.

ಇದರಿಂದ ಸುಮಾರು 16 ವರ್ಷಗಳಿಂದ ಬಾಕಿ ಉಳಿದಿರುವ ವ್ಯಾಜ್ಯಗಳ ತೀರ್ಪಿಗಾಗಿ ಕಾಯುತ್ತಿರುವ ಸಾವಿರಾರು ನಿವೇಶನ ಮಾಲೀಕರು ಮತ್ತು ಹಂಚಿಕೆದಾರರಿಗೆ ದೊಡ್ಡ ಪರಿಹಾರ ಸಿಕ್ಕಂತಾಗಿದೆ.

ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರಿದ್ದ ವಿಭಾಗೀಯ ಪೀಠ, ಒಂದು ಗುಂಪಿನ ಅರ್ಜಿಗಳನ್ನು ಆಲಿಸಿದ ನಂತರ, 2014 ರಲ್ಲಿ ಏಕಸದಸ್ಯ ನ್ಯಾಯಾಧೀಶರು ನೀಡಿದ್ದ ಆದೇಶವನ್ನು ರದ್ದುಗೊಳಿಸಿತು. ಭೂ ಸ್ವಾಧೀನಕ್ಕಾಗಿ ಬಿಡಿಎ ಕ್ರಮವಾಗಿ 2008 ಮತ್ತು 2010 ರಲ್ಲಿ ಹೊರಡಿಸಿದ ಅಂತಿಮ ಅಧಿಸೂಚನೆಯನ್ನು ರದ್ದುಗೊಳಿಸಿತು.

2014ರ ಜುಲೈ 11ರಂದು ನೀಡಿದ್ದ ಏಕಸದಸ್ಯ ಪೀಠವು ನೀಡಿದ್ದ ಆದೇಶಕ್ಕೆ 2014ರ ಆಗಸ್ಟ್ 18ರಂದು ವಿಭಾಗೀಯ ಪೀಠ ತಡೆಯಾಜ್ಞೆ ನೀಡಿತ್ತು. ಸುಮಾರು 600 ಎಕರೆ ಪ್ರದೇಶವನ್ನು ಹೊರತುಪಡಿಸಿ ವಿವಾದರಹಿತ ಜಮೀನುಗಳಲ್ಲಿ ಬಡಾವಣೆ ಅಭಿವೃದ್ಧಿ ನಡೆಯುತ್ತಿದೆ. ಏಕ ಸದಸ್ಯ ನ್ಯಾಯಾಧೀಶರ ಆದೇಶದ ವಿರುದ್ಧ ಬಿಡಿಎ ಸಲ್ಲಿಸಿದ ಮೇಲ್ಮನವಿಗಳನ್ನು ಕೆಲವು ಷರತ್ತುಗಳೊಂದಿಗೆ ಅನುಮತಿಸುವ ಮೂಲಕ ಅಧಿಸೂಚನೆಗಳನ್ನು ಎತ್ತಿಹಿಡಿದ ನ್ಯಾಯಾಲಯ, ನಿವೇಶನಗಳ ಹಂಚಿಕೆದಾರರು ಮತ್ತು ಭೂ ಮಾಲೀಕರ ಕಾಳಜಿ ನಿಟ್ಟಿನಲ್ಲಿ ಈ ವಿಷಯವನ್ನು ತೀರ್ಮಾನಿಸಲಾಗಿದೆ ಎಂದು ಹೇಳಿತು.

ಹೈಕೋರ್ಟ್
ಕೆಂಪೇಗೌಡ ಲೇಔಟ್ ಸೈಟ್ ಹಂಚಿಕೆದಾರರಿಗೆ ಹಣವನ್ನು ಹಿಂತಿರುಗಿಸಿ: ನ್ಯಾಯಾಲಯದಿಂದ ಬಿಡಿಎಗೆ ಆದೇಶ 

ಭೂ ಸ್ವಾಧೀನದ ಉದ್ದೇಶ ಕಾಪಾಡಲು ನ್ಯಾಯಾಲಯವು ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಬಿಡಿಎ ಮತ್ತು ರಾಜ್ಯ ಸರ್ಕಾರವು ಕಾಳಜಿ ವಹಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ಷರತ್ತುಗಳ ಪೈಕಿ, ತಮ್ಮ ಭೂಮಿಯನ್ನು ಸ್ವಾಧೀನದಿಂದ ಕೈಬಿಡಲು ಬಯಸುವ ಭೂ ಮಾಲೀಕರು/ಅರ್ಜಿದಾರರಿಗೆ (ಸೈಟ್ ಮಾಲೀಕರನ್ನು ಹೊರತುಪಡಿಸಿ), ಮೂರು ತಿಂಗಳೊಳಗೆ ಅಗತ್ಯ ದಾಖಲೆಗಳೊಂದಿಗೆ ಬಿಡಿಎಗೆ ಅರ್ಜಿ ಸಲ್ಲಿಸಲು ನ್ಯಾಯಾಲಯವು ಅನುಮತಿ ನೀಡಿದೆ. ಬಿಡಿಎ ಆರು ತಿಂಗಳೊಳಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು.

ಕೆಂಪೇಗೌಡ ಬಡಾವಣೆ ಭೂಸ್ವಾಧೀನಕ್ಕೆ ಮುನ್ನ ಬಡಾವಣೆಯಲ್ಲಿ ನಿವೇಶನ ಖರೀದಿಸಿದ ನಿವೇಶನದಾರರು, ನೋಂದಣಿ ಶುಲ್ಕ ಪಾವತಿಸಿ ಮೂರು ತಿಂಗಳೊಳಗೆ ಬಿಡಿಎಗೆ ನಿವೇಶನ ಹಂಚಿಕೆ ಮಾಡಲು ನೋಂದಣಿ ಮಾಡಿಕೊಳ್ಳುವಂತೆ ನ್ಯಾಯಾಲಯ ತಿಳಿಸಿದೆ. ಆರಂಭಿಕ ಠೇವಣಿಯ ಪಾವತಿಯಿಂದ ಅವರಿಗೆ ವಿನಾಯಿತಿ ನೀಡಲಾಗಿದೆ.

ಸದ್ಯದ ಮಾರುಕಟ್ಟೆ ದರ ಪ್ರಕಾರ 30x40 ಚದರ ಅಡಿ ಅಳತೆಯ ಸೈಟ್‌ಗಳ ಹಂಚಿಕೆಗಾಗಿ ಬರುವ ಅರ್ಜಿಗಳನ್ನು ಬಿಡಿಎ ಪರಿಗಣಿಸಬೇಕು. ಅರ್ಜಿದಾರರು ನಿಯಮಗಳ ಅಡಿಯಲ್ಲಿ ಬರದಿದ್ದಲ್ಲಿ ಅವರನ್ನು 20x30 ಚದರ ಅಡಿ ನಿವೇಶನ ಹಂಚಿಕೆಗೆ ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನಿವೇಶನ ಹಂಚಿಕೆ ಅಥವಾ ಭೂ ಸ್ವಾಧೀನದಿಂದ ಕೈಬಿಡುವುದಕ್ಕೆ ಯಾವುದೇ ತೊಂದರೆಯಾಗಬಾರದು, ಈಗಿರುವ ಕಟ್ಟಡಗಳನ್ನು ಬಿಡಿಎ ನೆಲಸಮ ಮಾಡಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com