ತೆಲಂಗಾಣ- ಆಂಧ್ರಪ್ರದೇಶದ ಗಡಿಗಳಲ್ಲಿ ಮದ್ಯದಂಗಡಿ ತೆರೆಯಲು ಶಾಸಕಾಂಗ ಸಮಿತಿ ಶಿಫಾರಸು

ತೆಲಂಗಾಣ ಮತ್ತು ಆಂಧ್ರಪ್ರದೇಶದ ಗಡಿಭಾಗದ ಪ್ರದೇಶಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ 'ಸೇಂದಿ' ಸೇವಿಸುತ್ತಿದ್ದು, ಅಲ್ಲಿ ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗಳನ್ನು ತೆರೆಯಲು ಕರ್ನಾಟಕ ಶಾಸಕಾಂಗ ಸಮಿತಿಯು ಶಿಫಾರಸು ಮಾಡಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ತೆಲಂಗಾಣ ಮತ್ತು ಆಂಧ್ರಪ್ರದೇಶದ ಗಡಿಭಾಗದ ಪ್ರದೇಶಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ 'ಸೇಂದಿ' ಸೇವಿಸುತ್ತಿದ್ದು, ಅಲ್ಲಿ ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗಳನ್ನು ತೆರೆಯಲು ಕರ್ನಾಟಕ ಶಾಸಕಾಂಗ ಸಮಿತಿಯು ಶಿಫಾರಸು ಮಾಡಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿಯು ವಿಧಾನಸಭೆಯಲ್ಲಿ ಮಂಡಿಸಿದ ತನ್ನ ಎರಡನೇ ವರದಿಯಲ್ಲಿ, ಕರ್ನಾಟಕ ಸರ್ಕಾರದ ಕೇಂದ್ರೀಕೃತ ಮಾರುಕಟ್ಟೆ ಘಟಕವಾದ ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ (ಎಂಎಸ್‌ಐಎಲ್) ಬೇಡಿಕೆ ಇರುವ ಪ್ರದೇಶಗಳಲ್ಲಿ ತನ್ನ ಮದ್ಯದ ಮಳಿಗೆಗಳನ್ನು ತೆರೆಯಬೇಕು ಎಂದು ಹೇಳಿದೆ.

ಮಳವಳ್ಳಿಯ ಕಾಂಗ್ರೆಸ್ ಶಾಸಕ ಪಿಎಂ ನರೇಂದ್ರ ಸ್ವಾಮಿ ನೇತೃತ್ವದ ಸಮಿತಿ, ಕೆಲವೆಡೆ ಎಂಎಸ್‌ಐಎಲ್ ಮಳಿಗೆಗಳು ಗ್ರಾಮದ ಮಧ್ಯದಲ್ಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕಾರಣ ಅವುಗಳನ್ನು ಸ್ಥಳಾಂತರಿಸಬೇಕು. ಎಸ್‌ಸಿ/ಎಸ್‌ಟಿಗಳು ಮತ್ತು ಬಡವರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಸರ್ಕಾರವು ಜನೌಷಧಿ ಕೇಂದ್ರಗಳನ್ನು (ಜನರಿಕ್ ಔಷಧ ಮಳಿಗೆಗಳು) ತೆರೆಯುವಂತೆ ಬಲವಾಗಿ ಶಿಫಾರಸು ಮಾಡಿದೆ.

ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯಗಳ ನಿರ್ವಹಣೆಗೆ ಮೀಸಲಾದ ಹಣವನ್ನು ನೀರಿನ ಟ್ಯಾಂಕ್‌ಗಳಿಗೆ ಬಣ್ಣ ಬಳಿಯಲು ಮತ್ತು ಇತರ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ಸೂಚಿಸಿದ ಸಮಿತಿಯು, 'ಶೌಚಾಲಯ ನಿಧಿ' ರಚಿಸಲು ಶಿಫಾರಸು ಮಾಡಿದೆ.

ಪ್ರತಿ ಶಾಲೆಗೆ ಶೌಚಾಲಯ ದುರಸ್ತಿಗೆ ವರ್ಷಕ್ಕೆ ಈ ಹಿಂದೆ ₹20,000 ಸಿಗುತ್ತಿತ್ತು. ಇದೀಗ ಅದನ್ನು ₹40,000 ಕ್ಕೆ ಏರಿಸಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಶಾಲಾ ಶಿಕ್ಷಣಕ್ಕೆ ಕೇವಲ ₹ 120 ಕೋಟಿ ಅನುದಾನ ನೀಡಲಾಗಿದ್ದು, ಅದು ಸಾಕಾಗುವುದಿಲ್ಲ. ಈ ಅನುದಾನವನ್ನ ₹ 240 ಕೋಟಿಗೆ ದ್ವಿಗುಣಗೊಳಿಸಬೇಕು ಎಂದು ಅದು ತಿಳಿಸಿದೆ.

ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ ಕೋಟಾವನ್ನು ಈಗಿರುವ ಶೇ 25 ನ್ನು ಹೆಚ್ಚಿಸಬೇಕು. ಇದರಲ್ಲಿ ಎಸ್‌ಸಿಗೆ ಶೇ 7.5 ಮತ್ತು ಎಸ್‌ಟಿಗೆ ಶೇ 1.5 ಮತ್ತು ಇತರರಿಗೆ ಶೇ 16 ನೀಡಬೇಕು. ಇದಲ್ಲದೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ), ಎಸ್‌ಸಿ/ಎಸ್‌ಟಿಗಳಿಗೆ ಜಾಹೀರಾತು ಟೆಂಡರ್‌ಗಳಲ್ಲಿ ಶೇ 24.1 ರಷ್ಟು ನೀಡಬೇಕು ಎಂದು ಅದು ಹೇಳಿದೆ.

ಬೆಂಗಳೂರು ವಿಮಾನ ನಿಲ್ದಾಣದ ಬಳಿಯ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನ ಮೊದಲ ಹಂತದ ನಿವೇಶನಗಳ ಹಂಚಿಕೆಯಲ್ಲಿ ಎಸ್‌ಸಿ/ಎಸ್‌ಟಿ ಉದ್ಯಮಿಗಳಿಗೆ ಯಾವುದೇ ಮೀಸಲಾತಿ ನೀಡದೆ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಂವಿಧಾನದ ನಿಯಮವನ್ನು ಉಲ್ಲಂಘಿಸಿದೆ. ಎರಡನೇ ಹಂತದಲ್ಲಿ ಎಸ್‌ಸಿ/ಎಸ್‌ಟಿ ಉದ್ಯಮಿಗಳಿಗೆ ಪ್ಲಾಟ್‌ಗಳನ್ನು ಮಂಜೂರು ಮಾಡಬೇಕು, ಬಾಕಿಯನ್ನು ಸರಿದೂಗಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com