ಬೆಂಗಳೂರು: ಭಾರತೀಯ ರೈಲ್ವೆಗೆ ಹೊಸದಾಗಿ ಸೇರಿರುವ ಅಮೃತ್ ಭಾರತ್ ರೈಲು ಸೋಮವಾರ ಸಂಜೆ ಬೆಂಗಳೂರಿಗೆ ಆಗಮಿಸಿತು. ಪಶ್ಚಿಮ ಬಂಗಾಳದ ಮಾಲ್ಡಾದಿಂದ ಶನಿವಾರ ಹೊರಟಿದ್ದ ರೈಲು ಸೋಮವಾರ ಸಂಜೆ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಿತು.
ಪ್ರಧಾನಿ ನರೇಂದ್ರ ಮೋದಿ ಶನಿವಾರ ಪುನರಾಭಿವೃದ್ಧಿಗೊಳಿಸಿದ ಅಯೋಧ್ಯೆ ಧಾಮ ಜಂಕ್ಷನ್ ರೈಲು ನಿಲ್ದಾಣದಿಂದ ಎರಡು ಅಮೃತ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ್ದರು.
ಅಮೃತ್ ಭಾರತ್ ರೈಲಿನ ವಿಶೇಷತೆಗಳು: ಸಾಮಾನ್ಯ ವರ್ಗದ ಆರಾಮದಾಯಕ ಪ್ರಯಾಣವನ್ನು ಗಮನದಲ್ಲಿ ಇರಿಸಿಕೊಂಡು ಈ ರೈಲುಗಳನ್ನು ನಿರ್ಮಿಸಲಾಗಿದೆ. ಹೊಸದಾಗಿ ವಿನ್ಯಾಸಗೊಂಡಿರುವ ಈ ರೈಲುಗಳು ಕೇಸರಿ ಬಣ್ಣ ಹೊಂದಿವೆ. ಪ್ರತಿ ರೈಲು 22 ಕೋಚ್ ಗಳನ್ನು ಹೊಂದಿದ್ದು, 1, 834 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ.
ಈ ರೈಲು ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ವೇಗದ ಪಿಕಪ್ ಗಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಎಂಜಿನ್ ಗಳಿವೆ. ಆಕರ್ಷಕ ಒಳ ವಿನ್ಯಾಸ, ಉತ್ತಮ ಎಲ್ ಇ ಡಿ ಬೆಳಕು, ಸಿಸಿಟಿವಿ, ವಿವಿಧ ಬಗೆಯ ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್, ಉನ್ನತೀಕರಿಸಿದ ಶೌಚಾಲಯ ಇದೆ.
ಮಡಿಸಬಹುದಾದ ತಿಂಡಿ ಟೇಬಲ್, ಸೂಕ್ತವಾದ ಹೋಲ್ಡರ್ ಹೊಂದಿರುವ ಮೊಬೈಲ್ ಚಾರ್ಜರ್, ಮಡಿಸಬಹುದಾದ ಬಾಟಲ್ ಹೋಲ್ಡರ್, ಸುರಕ್ಷಿತ ಪ್ರಯಾಣಕ್ಕಾಗಿ CCTV ಕಣ್ಗಾವಲು ಮತ್ತಿತರ ಸೌಲಭ್ಯಗಳನ್ನು ಈ ರೈಲು ಹೊಂದಿದೆ.
Advertisement