ಕೆಎಸ್ ಆರ್ ಟಿಸಿಯಿಂದ ಮೃತ ಉದ್ಯೋಗಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ವಿತರಣೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕಾರ್ಮಿಕ ಕಲ್ಯಾಣ ವರ್ಷವನ್ನು ಮುಕ್ತಾಯಗೊಳಿಸಿದ್ದು, ಕಾರ್ಮಿಕರ ಯೋಗಕ್ಷೇಮವನ್ನು ಹೆಚ್ಚಿಸುವುದರತ್ತ ಈ ಅಭಿಯಾನ ಉದ್ದೇಶಿಸಲಾಗಿತ್ತು. 
ಪರಿಹಾರ ಚೆಕ್ ವಿತರಣೆ ಮಾಡುತ್ತಿರುವ ರಾಮಲಿಂಗಾ ರೆಡ್ಡಿ
ಪರಿಹಾರ ಚೆಕ್ ವಿತರಣೆ ಮಾಡುತ್ತಿರುವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕಾರ್ಮಿಕ ಕಲ್ಯಾಣ ವರ್ಷವನ್ನು ಮುಕ್ತಾಯಗೊಳಿಸಿದ್ದು, ಕಾರ್ಮಿಕರ ಯೋಗಕ್ಷೇಮವನ್ನು ಹೆಚ್ಚಿಸುವುದರತ್ತ ಈ ಅಭಿಯಾನ ಉದ್ದೇಶಿಸಲಾಗಿತ್ತು. 

2023 ರಲ್ಲಿ ಮೃತಪಟ್ಟ ಉದ್ಯೋಗಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ವಿತರಣೆ ಮಾಡಲಾಗಿದೆ. ಮೂರು ಕುಟುಂಬಗಳಿಗೆ ಈ ಪರಿಹಾರದ ಮೊತ್ತ ಲಭ್ಯವಾಗಿದೆ. 

ನಿಗಮವು ಪ್ರಯಾಣಿಕರ ಅಪಘಾತ ಪರಿಹಾರವನ್ನು 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಿದೆ. ತನ್ನ ಅಸ್ತಿತ್ವದಲ್ಲಿರುವ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸಲು, ಕೆಎಸ್ ಆರ್ ಟಿಸಿ ಅಂಬಾರಿ ಉತ್ಸವ, ಐರಾವತ ಕ್ಲಬ್ ಕ್ಲಾಸ್, ಪಲ್ಲಕ್ಕಿ, ಪಾಯಿಂಟ್-ಟು-ಪಾಯಿಂಟ್ ಹೊಸ ವಿನ್ಯಾಸದ ಬಸ್ ಮತ್ತು ಎಲೆಕ್ಟ್ರಿಕ್ ಬಸ್ ಸೇರಿದಂತೆ 2,000 ಹೊಸ ವಾಹನಗಳನ್ನು ಸೇರ್ಪಡೆಗೊಳಿಸಿದೆ.

‘ನಮ್ಮ ಕಾರ್ಗೋ’ ಪಾರ್ಸೆಲ್ ಸೇವೆಗಳನ್ನು ಈಗಿರುವ 20 ಟ್ರಕ್‌ಗಳಿಂದ ವರ್ಷಾಂತ್ಯದ ವೇಳೆಗೆ 500ಕ್ಕೆ ಹೆಚ್ಚಿಸಲಾಗುವುದು. ವಾಹನ ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ಸಿಸ್ಟಮ್ (ವಿಟಿಎಂಎಸ್) ಮತ್ತು ಮೀಸಲಾದ ಮೊಬೈಲ್ ಅಪ್ಲಿಕೇಶನ್ ಸೇರಿದಂತೆ ಆಧುನಿಕ ಐಟಿ ಪರಿಹಾರಗಳ ಪರಿಚಯದೊಂದಿಗೆ 1,000 ಹಳೆಯ ವಾಹನಗಳನ್ನು ನವೀಕರಿಸುವ ಗುರಿಯನ್ನು ನಿಗಮ ಹೊಂದಿದೆ ಎಂದು ಬಸ್ ನಿಗಮದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇದಷ್ಟೇ ಅಲ್ಲದೇ, ಮಕ್ಕಳಿಗಾಗಿ ವಿದ್ಯಾರ್ಥಿವೇತನದ ಮೊತ್ತವನ್ನು ಹೆಚ್ಚಿಸಲಾಯಿತು ಮತ್ತು ಹೊಸ ಕೋರ್ಸ್‌ಗಳನ್ನು ಸೇರಿಸಲಾಯಿತು ಮತ್ತು ಸುಮಾರು 3,345 ಮಕ್ಕಳು 'ವಿದ್ಯಾ ಚೇತನ ಯೋಜನೆ' ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ರೂ.1.67 ಕೋಟಿ ಶಿಷ್ಯವೇತನ ವಿತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತನ್ನ ಉದ್ಯೋಗಿಗಳ ಆರೋಗ್ಯಕ್ಕೆ ಆದ್ಯತೆ ನೀಡುವ ಪ್ರಯತ್ನದಲ್ಲಿ, ನಿಗಮ ವಾರ್ಷಿಕವಾಗಿ ನಡೆಸಲಾಗುವ ಹೃದಯ ಸಂಬಂಧಿ ಪರೀಕ್ಷೆಗಳಿಗೆ ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ ಮತ್ತು ಈ ಉದ್ದೇಶಕ್ಕಾಗಿ 2.55 ಕೋಟಿ ರೂ.ಗಳನ್ನು ಮೀಸಲಿರಿಸಿದೆ.

ಕೆಎಸ್‌ಆರ್‌ಟಿಸಿ ನೌಕರರ ಮೇಲಿನ 10,364 ಶಿಸ್ತು ಕ್ರಮ  ಪ್ರಕರಣಗಳನ್ನು ಕನಿಷ್ಠ ದಂಡದೊಂದಿಗೆ ಇತ್ಯರ್ಥಗೊಳಿಸಿದೆ ಮತ್ತು 425 ಚಾಲಕರು ಕೆಲಸಕ್ಕೆ ಮರಳಲು ಅವಕಾಶ ನೀಡಿದೆ. 2023 ರಲ್ಲಿ ಬಸ್ ನಿಗಮ 50 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ ಎಂದು ಅದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com