ಸಿದ್ದರಾಮಯ್ಯ ಸರ್ಕಾರಕ್ಕೆ ಅಕ್ಕಿ ಖರೀದಿಗೆ ಮತ್ತಷ್ಟು ಸವಾಲು: ನಗದು ಜಮಾ ಯೋಜನೆ ಮುಂದುವರಿಕೆ!

ಹಲವು ರಾಜ್ಯಗಳಲ್ಲಿ ಅಕ್ಕಿ ಉತ್ಪಾದನೆ ಕಡಿಮೆಯಾಗಿರುವುದರಿಂದ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರವು ತನ್ನ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಪೂರ್ಣ ಪ್ರಮಾಣದಲ್ಲಿ ಜನರಿಗೆ ನೀಡಲು ಆಗುತ್ತಿಲ್ಲ. ಕುಟುಂಬದ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ನೀಡುವ ಭರವಸೆ ನೀಡಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರವು ತನ್ನ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಪೂರ್ಣ ಪ್ರಮಾಣದಲ್ಲಿ ಜನರಿಗೆ ನೀಡಲು ಆಗುತ್ತಿಲ್ಲ. ಕುಟುಂಬದ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ನೀಡುವ ಭರವಸೆ ನೀಡಿತ್ತು.

ಆದರೆ ಅಕ್ಕಿಯನ್ನು ಸಂಗ್ರಹಿಸಲು ಸುಮಾರು ಏಳು ತಿಂಗಳಿಂದ ಶ್ರಮಿಸುತ್ತಿದೆ, ಆದರೆ ಡಿಸೆಂಬರ್ 31 ಕ್ಕೆ ಕೊನೆಗೊಳ್ಳುವ ಅವಧಿಗೆ ಉತ್ಪಾದನೆಯಲ್ಲಿ ಕುಸಿತವು ರಾಷ್ಟ್ರದಾದ್ಯಂತ 48 ಲಕ್ಷ ಟನ್ ಅಕ್ಕಿ ಕೊರತೆಗೆ ಕಾರಣವಾಗಿದೆ.

‘ನುಡಿದಂತೆ ನಡೆದ ಸರ್ಕಾರ’ದ ಭರವಸೆ ಸಾಕಾರಗೊಂಡಿಲ್ಲ, ಖರೀದಿಯಲ್ಲಿನ ಹಲವಾರು ಸವಾಲುಗಳು ಹಾಗೂ ಎದುರಾದ ಸನ್ನಿವೇಶಗಳಿಂದಾಗಿ ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸುವುದರಲ್ಲಿ ನಿಸ್ಸೀಮರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಕಿಯ ಬದಲು ನಗದು ಪಾವತಿ ಮೊರೆ ಹೋಗಿದ್ದಾರೆ.

ಅಕ್ಕಿಯ ಮಾರುಕಟ್ಟೆ ಬೆಲೆ ಹೆಚ್ಚಿರುವುದರಿಂದ, ರಾಜ್ಯವು ತನ್ನ ಪಿಡಿಎಸ್ ಯೋಜನೆಗೆ ಅಗತ್ಯವಾದ ಪ್ರಮಾಣವನ್ನು ಸಂಗ್ರಹಿಸಲು ಸಾಧ್ಯವಾಗದಿರಬಹುದು ಎಂದು ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಮಾಜಿ ಅಧ್ಯಕ್ಷರಾದ ಡಿವಿ ಪ್ರಸಾದ್ ಅವರು ಅಂಕಿಅಂಶಗಳನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ವಿವರಿಸಿದ್ದಾರೆ.

ಹಲವು ರಾಜ್ಯಗಳಲ್ಲಿ ಅಕ್ಕಿ ಉತ್ಪಾದನೆ ಕಡಿಮೆಯಾಗಿರುವುದರಿಂದ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿದೆ. ಛತ್ತೀಸ್‌ಗಢದಲ್ಲಿ 51.6 ಲಕ್ಷ ಟನ್‌ನಿಂದ 38.5 ಲಕ್ಷ ಟನ್‌ಗೆ, ತೆಲಂಗಾಣದಲ್ಲಿ 37 ಲಕ್ಷ ಟನ್‌ನಿಂದ 27 ಲಕ್ಷ ಟನ್‌ಗೆ ಇಳಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ ಉತ್ಪಾದನೆ 27 ಲಕ್ಷ ಟನ್‌ನಿಂದ 23 ಲಕ್ಷ ಟನ್‌ಗೆ ಮತ್ತು ಮಧ್ಯಪ್ರದೇಶದಲ್ಲಿ 20.5 ಲಕ್ಷ ಟನ್‌ನಿಂದ 11.6 ಲಕ್ಷ ಟನ್‌ಗೆ ಇಳಿದಿದೆ. ಒಟ್ಟಾರೆ ಕೊರತೆಯು ಸುಮಾರು 48 ಲಕ್ಷ ಟನ್ ಆಗಿದೆ, ಆದ್ದರಿಂದ ರಾಜ್ಯಕ್ಕೆ ಅಕ್ಕಿ ಸಂಗ್ರಹಿಸಲು ಕಷ್ಟವಾಗಬಹುದು, ಹೀಗಾಗಿ ನಗದು ಹಣ ನೀಡುವ ಯೋಜನೆ ಮುಂದುವರಿಯಲಿದೆ. ರಾಜ್ಯ ಸರ್ಕಾರವು ಅಕ್ಕಿ ಸಂಗ್ರಹಿಸಲು ಸಾಧ್ಯವಿಲ್ಲ,  ಅಕ್ಕಿ ಪೂರೈಕೆಗಾಗಿ ರಾಜ್ಯ ಎಫ್‌ಸಿಐ ಅವಲಂಬಿಸಿದೆ. ಎಫ್ ಸಿಐಗೆ ಕೇಂದ್ರ ಸರ್ಕಾರದಿಂದ ಅಕ್ಕಿ ಪೂರೈಕೆಯಾಗುತ್ತದೆ.

ಅಕ್ಕಿ ಗಿರಣಿಗಾರರು, ಸಹಕಾರ ಸಂಘಗಳು ಮತ್ತು ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿ ಹಲವಾರು ರೀತಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಅವರು  ಪ್ರಯತ್ನಿಸಿದರು, ಆದರೆ ಅಗತ್ಯ ಪ್ರಮಾಣದಲ್ಲಿ ಅಕ್ಕಿ ಪಡೆಯಲು ಸಾಧ್ಯವಾಗಲಿಲ್ಲ.

ಅಗತ್ಯವಿರುವ ಪ್ರಮಾಣದ ಅಕ್ಕಿ ಪೂರೈಕೆಯಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಆದರೆ ಕರ್ನಾಟಕಕ್ಕೆ ಅಗತ್ಯವಿರುವ ದಾಸ್ತಾನು ನೀಡಲು ಸಾಧ್ಯವಾಗುವುದಿಲ್ಲ ಎಂದು FCI ಹೇಳಿದೆ ಮತ್ತು ಅಕ್ಕಿಯ ಅಂತರರಾಷ್ಟ್ರೀಯ ಬೆಲೆ ಹೆಚ್ಚಾಗಿದೆ. ಸಚಿವರು ಮಧ್ಯಸ್ಥಗಾರರೊಂದಿಗೆ ಹಲವಾರು ಸಭೆಗಳನ್ನು ನಡೆಸಿದರು ಆದರೆ ಅಗತ್ಯ ಪ್ರಮಾಣದಲ್ಲಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ.

ಎಫ್‌ಸಿಐ ಮತ್ತು ಕೇಂದ್ರಕ್ಕೆ ಪಿಡಿಎಸ್‌ಗಾಗಿ ಅಕ್ಕಿ ಸಂಗ್ರಹಿಸಲು ಯಾವುದೇ ಸಮಸ್ಯೆ ಇರುವುದಿಲ್ಲ, ಆದರೆ ರಾಜ್ಯ ಸರ್ಕಾರಗಳ ಪ್ರಾಯೋಜಿತ ಅಕ್ಕಿ ಯೋಜನೆಗಳಿಗೆ ನೀಡಲು ಹೆಚ್ಚುವರಿ ಅಕ್ಕಿಯನ್ನು ಹೊಂದಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಸರ್ಕಾರವು ಸಂಘಟಿತ ಮತ್ತು ಯೋಜಿತ ರೀತಿಯಲ್ಲಿ ಏನನ್ನೂ ಮಾಡುತ್ತಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲವೇ ಎಂದು ಖಾತ್ರಿಪಡಿಸಿಕೊಳ್ಳದ ಮುಖಂಡರು, ಜನರಿಗೆ ಭರವಸೆ ನೀಡಿದರು. ಅವರು ತಮ್ಮ ಯೋಜನೆಗಳನ್ನು ಜನರಿಗೆ ತಲುಪಿಸಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ, ಆದರೆ ಈಗಲೂ ಅವರು ಕಷ್ಟಪಡುತ್ತಿದ್ದಾರೆ , ಜನರಿಗೆ ಶೀಘ್ರವೇ ಸರ್ಕಾರದ ವಂಚನೆ ತಿಳಿಯುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ  ಯಾವುದೇ ಭರವಸೆಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಸಂಸತ್ ಚುನಾವಣೆಗೆ ಯಾವುದೇ ಗ್ಯಾರಂಟಿ ಅವರ ಪರವಾಗಿ ಕೆಲಸ ಮಾಡುತ್ತಿಲ್ಲ. ಅವರು ಭ್ರಮೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com