ಬೆಂಗಳೂರು: ರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ದಾಖಲಾದ ಸುಳ್ಳು ಪ್ರಕರಣಗಳನ್ನು ಹಾಕಲು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಂಚು ನಡೆಸುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಬುಧವಾರ ಆರೋಪಿಸಿದೆ.
ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ 1992ರಲ್ಲಿ ರಾಮಮಂದಿರ ಆಂದೋಲನದ ಸಂದರ್ಭದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾದ ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿಯನ್ನು ಕಳೆದ ವಾರ ಬಂಧಿಸಿದ ಹಿನ್ನೆಲೆಯಲ್ಲಿ ವಿಎಚ್ಪಿ ಕಿಡಿಕಾರಿದೆ.
ಬಂಧನವನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಬುಧವಾರ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿತು.
'30-35 ವರ್ಷಗಳಷ್ಟು ಹಳೆಯ ಪ್ರಕರಣಗಳು ಇವಾಗಿವೆ. ಆ ಪೈಕಿ ಅನೇಕರು ಸಾವಿಗೀಡಾಗಿದ್ದಾರೆ ಮತ್ತು ಉಳಿದವರಲ್ಲಿ ಹೆಚ್ಚಿನವರ ವಯಸ್ಸು 70 ರಿಂದ 80 ವರ್ಷವಾಗಿದೆ' ಎಂದು ವಿಎಚ್ಪಿಯ ಕೇಂದ್ರ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಹೇಳಿದ್ದಾರೆ.
ಆ ಪ್ರಕರಣಗಳು ಬೋಗಸ್ ಆಗಿದ್ದರಿಂದ ಕೆಲವು ಸರ್ಕಾರಗಳು ನಂತರ ಅವುಗಳನ್ನು ರದ್ದುಗೊಳಿಸಿದವು. ಆದರೆ, ಇಂದು ಆ ಪ್ರಕರಣಗಳನ್ನು ಮತ್ತೆ ತೆರೆದು, ಕರಸೇವಕರನ್ನು ಮತ್ತೆ ಬಂಧಿಸಲಾಗುತ್ತಿದೆ. ಈ ಎಲ್ಲಾ ಕರಸೇವಕರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಏನನ್ನು ಸಾಬೀತುಪಡಿಸಲು ಬಯಸುತ್ತಿದೆ?. ಆ ಸಮಯದಲ್ಲಿ 10,000 ಕ್ಕೂ ಹೆಚ್ಚು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
'ಆ ಎಲ್ಲಾ ಪ್ರಕರಣಗಳನ್ನು ಮತ್ತೆ ಕೆದಕುವ ಮೂಲಕ ಕರ್ನಾಟಕದ ಹಿಂದೂ ಸಮಾಜದಲ್ಲಿ ಭಯೋತ್ಪಾದನೆಯ ವಾತಾವರಣವನ್ನು ಸೃಷ್ಟಿಸಲು ಬಯಸುತ್ತದೆಯೇ? ಇದು ಕಾಂಗ್ರೆಸ್ ಪಕ್ಷದ ನಿಜವಾದ ಮುಖವೇ?' ಎಂದು ಪ್ರಶ್ನಿಸಿದ್ದಾರೆ.
Advertisement