ಬೆಂಗಳೂರು: 55 ವರ್ಷದ ಮಹಿಳೆಯೊಬ್ಬರನ್ನು ಮನೆಯಲ್ಲಿ ಕಟ್ಟಿ ಹಾಕಿ ದರೋಡೆ ಮಾಡಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಸಂತ್ರಸ್ತೆಯನ್ನು ಗೌರಮ್ಮ ಎಂದು ಗುರುತಿಸಲಾಗಿದೆ. ಆರ್ಆರ್ ನಗರದ ಪಟ್ಟಣಗೆರೆ ನಿವಾಸಿಯಾಗಿದ್ದು, ಮೊಮ್ಮಗನನ್ನು ಟ್ಯೂಷನ್ ಸೆಂಟರ್ನಲ್ಲಿ ಬಿಟ್ಟು ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿ ಆಕೆಯನ್ನು ಹಿಂಬಾಲಿಸಿದ್ದಾನೆ.
ಗೌರಮ್ಮ ಮನೆಗೆ ಹಿಂತಿರುಗುತ್ತಿದ್ದಂತೆಯೇ ರೌಡಿ ಶೀಟರ್ ಆಗಿರುವ ಆರೋಪಿ ಕುಮಾರ್ ಅಲಿಯಾಸ್ ಲೊಡ್ಡೆ ಕುಮಾರ್ ಆಕೆಯನ್ನು ಮನೆಗೆ ಒಳಗಡೆ ತಳ್ಳಿದ್ದಾನೆ. ನಂತರ ಬಟ್ಟೆಯಿಂದ ಬಾಯಿ ಕಟ್ಟಿಹಾಕಿ ಮನೆ ದರೋಡೆ ಮಾಡಿದ್ದಾನೆ ಎಂದುಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. 120 ಗ್ರಾಂ ಚಿನ್ನಾಭರಣ ಹಾಗೂ 50 ಸಾವಿರ ನಗದು ಸೇರಿದಂತೆ ಒಟ್ಟು 3.2 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ. ಆರೋಪಿ ಮನೆಯನ್ನು ಹೊರಗಿನಿಂದ ಬೀಗ ಹಾಕಿಕೊಂಡು ಹೋಗಿದ್ದ ಎಂದು ಅವರು ಹೇಳಿದ್ದಾರೆ.
ಸಂತ್ರಸ್ತೆ ಮನೆ ಒಳಗಿನಿಂದ ಬಾಗಿಲು ಬಡಿದ ನಂತರ ನೆರೆಹೊರೆಯವರು ಬಂದು ಬಾಗಿಲು ತೆಗೆದಿದ್ದಾರೆ. ಸಂತ್ರಸ್ತೆಯ ಕುಟುಂಬವು ವಸತಿ ಸಂಕೀರ್ಣದ ಮೊದಲ ಮಹಡಿಯಲ್ಲಿಯೇ ಇದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಕಳವು ಮಾಡಿದ ವಸ್ತುವನ್ನು ವಶಪಡಿಸಿಕೊಂಡಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Advertisement