ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ; ವಿದೇಶಿ ಕರೆನ್ಸಿ ಪತ್ತೆ!

ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮಾಡುತ್ತಿದ್ದ ವೇಳೆ ವಿದೇಶಿ ಕರೆನ್ಸಿ ಪತ್ತೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮಾಡುತ್ತಿದ್ದ ವೇಳೆ ವಿದೇಶಿ ಕರೆನ್ಸಿ ಪತ್ತೆಯಾಗಿದೆ.

ಎಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಜಿಲ್ಲಾಧಿಕಾರಿ ಕಚೇರಿ, ಮುಜರಾಯಿ ಇಲಾಖೆ, ಸವದತ್ತಿ ತಹಶೀಲ್ದಾರ್ ಕಚೇರಿ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮೂರು ಹಂತಗಳಲ್ಲಿ ಹುಂಡಿ ಎಣಿಕೆ ಕಾರ್ಯವನ್ನು ಗುರುವಾರ ನಡೆಯಿತು.

ಈ ವೇಳೆ ಹುಂಡಿಯಲ್ಲಿ ಕೀನ್ಯಾ, ಸಿಂಗಾಪುರ, ಸೌದಿ ಅರೇಬಿಯಾ, ಯುಎಇ ಸೇರಿದಂತೆ ಇತರ ದೇಶಗಳ ಕರೆನ್ಸಿ ಗಳು ಪತ್ತೆಯಾಗಿವೆ.

ನ.1ರಿಂದ ಡಿ.31, 2023ರ ಅವಧಿಯಲ್ಲಿ ದೇವಾಲಯದ ಹುಂಡಿಯಲ್ಲಿ 1.39 ಕೋಟಿ ರೂಪಾಯಿ ನಗದು, 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಮತ್ತು 3.28 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹವಾಗಿದೆ.

ಹುಂಡಿ ಎಣಿಕೆ ಕಾರ್ಯದಲ್ಲಿವೇಳೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಸದಸ್ಯರಾದ ವೈ.ವೈ.ಕಾಳಪ್ಪನವರ, ಕೊಲ್ಲಪ್ಪಗೌಡ ಗಂದಿಗವಾಡ, ಲಕ್ಷ್ಮೀ ಹೂಲಿ, ಪುಂಡಲೀಕ ಮೇಟಿ, ರಮೇಶ ಗೋಮಾಡಿ, ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ, ಮೇಲ್ವಿಚಾರಕಿ ನಾಗರತ್ನಾ ಚೋಳಿನ್, ಸಂತೋಷ ಶಿರಸಂಗಿ, ಬೆಳಗಾವಿ ಮುಜರಾಯಿ ಇಲಾಖೆ ಅಧಿಕಾರಿ ಬಾಳೇಶ ಅಬ್ಬಾಯಿ, ಅಭಿಯಂತರರಾದ ರೇಣುಕಾ ಬಿ.ವಿ.ವಿ. ಮುಳ್ಳೂರು, ಡಿ.ಆರ್.ಚವ್ಹಾಣ, ಅಲ್ಲಮಪ್ರಭು ಪ್ರಭುನವರ, ಪ್ರಕಾಶ ಪ್ರಭುನವರ, ಎಂ.ಪಿ.ದ್ಯಾಮನಗೌಡ್ರ, ಪ್ರಭು ಹಂಜಗಿ, ವಿ.ಆರ್.ನೀಲಗುಂದ, ಮಲ್ಲಯ್ಯ ತೊರಗಲ್ಲಮಠ, ಸದಾನಂದ ಇ.ಟಿ., ಎಎಸ್‌ಐ ಎಸ್.ಆರ್.ಗಿರಿಯಾಳ್, ಪಿ.ಎಫ್.ಗೋವನಕೊಪ್ಪ, ಪಂಡಿತ್ ಯಡೂರಯ್ಯ, ಪಿ.ರಾಜಶೇಖರ ಬಂಕಯ್ಯ ದೇವಸ್ಥಾನದ ಸಿಬ್ಬಂದಿ ಪಾಲ್ಗೊಂಡಿದ್ದರು.

''ದೇವಸ್ಥಾನದ ಆದಾಯವನ್ನು ಸದ್ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಈ ಮೊತ್ತದಲ್ಲಿ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು. ಇದಲ್ಲದೇ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು’ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ ಅವರು ತಿಳಿಸಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಿಂದ ಲಕ್ಷಾಂತರ ಭಕ್ತರು ಸೇರಿದಂತೆ ವಿದೇಶಗಳಿಂದಲೂ ಹಲವರು ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.  ಭಕ್ತಾಧಿಗಳು ತಮ್ಮ ಇಷ್ಟಾರ್ಥ ಈಡೇರಿಸಿದ ದೇವಿಗೆ ಕಾಣಿಕೆ ರೂಪದಲ್ಲಿ ಚಿನ್ನ, ಬೆಳ್ಳಿ ಆಭರಣ ನೀಡುತ್ತಾರೆ. ಅಲ್ಲದೆ, ದೇವಸ್ಥಾನ ಹುಂಡಿಯಲ್ಲಿ ಹಣ ಹಾಕಿ ಭಕ್ತಿಯನ್ನು ಸಮರ್ಪಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com