ಬಡ ಅರ್ಚಕರಿಂದ ನೀಡಿದ್ದ ವೇತನ ವಾಪಸ್ ಕೇಳುವುದು ಎಷ್ಟು ಸರಿ: ಹೀರೇಮಗಳೂರು ಕಣ್ಣನ್ ಗೆ ನೊಟೀಸ್ ನೀಡಿದ್ದಕ್ಕೆ ಆಕ್ಷೇಪ

ಮುಜರಾಯಿ ಇಲಾಖೆ ಮೂಲಕ ತಾವು ಪೂಜೆ ಸಲ್ಲಿಸುವ ದೇವಾಲಯದಲ್ಲಿ ಹೆಚ್ಚಿನ ಆದಾಯವಿಲ್ಲ, ಹೀಗಾಗಿ ವೇತನದಲ್ಲಿ ಇಷ್ಟು ಭಾಗವನ್ನು ಹಿಂತಿರುಗಿಸಬೇಕೆಂದು ಬಂದಿರುವ ನೊಟೀಸ್ ಬಗ್ಗೆ ಕನ್ನಡದ ಪೂಜಾರಿ ಎಂದೇ ಹೆಸರಾಗಿರುವ ಹೀರೇಮಗಳೂರು ಕಣ್ಣನ್ ಬೇಸರ ವ್ಯಕ್ತಪಡಿಸಿದ್ದಾರೆ.
ಹೀರೇಮಗಳೂರು ಕಣ್ಣನ್
ಹೀರೇಮಗಳೂರು ಕಣ್ಣನ್

ಚಿಕ್ಕಮಗಳೂರು: ಮುಜರಾಯಿ ಇಲಾಖೆ ಮೂಲಕ ತಾವು ಪೂಜೆ ಸಲ್ಲಿಸುವ ದೇವಾಲಯದಲ್ಲಿ ಹೆಚ್ಚಿನ ಆದಾಯವಿಲ್ಲ, ಹೀಗಾಗಿ ವೇತನದಲ್ಲಿ ಇಷ್ಟು ಭಾಗವನ್ನು ಹಿಂತಿರುಗಿಸಬೇಕೆಂದು ಬಂದಿರುವ ನೊಟೀಸ್ ಬಗ್ಗೆ ಕನ್ನಡದ ಪೂಜಾರಿ ಎಂದೇ ಹೆಸರಾಗಿರುವ ಹೀರೇಮಗಳೂರು ಕಣ್ಣನ್ ಬೇಸರ ವ್ಯಕ್ತಪಡಿಸಿದ್ದಾರೆ.

ಮುಜರಾಯಿ ಇಲಾಖೆ ಮೂಲಕ ದೇವಾಲಯಗಳನ್ನು ಸಂರಕ್ಷಿಸಬೇಕು. 44 ವರ್ಷದಿಂದ ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡಿದ್ದೇನೆ. ದೇವಾಲಯಕ್ಕೆ ಆದಾಯ ಇಲ್ಲ ಎಂದು ಸಂಬಳ ತಡೆಹಿಡಿದು, ನೀಡಿದ್ದ ವೇತನ ವಾಪಸ್ ಕೇಳುವುದು ಸರಿಯಲ್ಲ. ದೇವಾಲಯಗಳಲ್ಲಿ ಅರ್ಚಕರ ಕೊರತೆ ಇದೆ. ಬಡ ಅರ್ಚಕರ ವೇತನವನ್ನು ವಾಪಸ್ ಕೇಳುವುದು ಎಷ್ಟು ಸರಿ. ಜಿಲ್ಲಾಡಳಿತದ ಈ ನಡೆ ಅಚ್ಚರಿ ಮತ್ತು ಬೇಸರ ತರಿಸಿದೆ ಎಂದು ಅರ್ಚಕರಾದ ಹಿರೇಮಗಳೂರು ಕಣ್ಣನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇಂದು ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಸಾಹಿತಿಗಳಿಗೆ ಪ್ರೋತ್ಸಾಹ ನೀಡಬೇಕು. ಬಡ ಅರ್ಚಕರ ಸಂಬಳವನ್ನು ವಾಪಸ್ ಕೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸರ್ಕಾರ  ನೀಡಿರುವ ನೋಟಿಸ್ ಬಗ್ಗೆ ಹಿರೇಮಗಳೂರು ಕಣ್ಣನ್​ ಅವರು ಮಾಜಿ ಸಚಿವ ಸಿಟಿ ಅವರ ಗಮನಕ್ಕೆ ತಂದಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿ ಟಿ ರವಿ, ಯಾರು ಕೂಡ ಹಣ ವಾಪಸ್​ ನೀಡುವುದು ಅವಶ್ಯಕತೆ ಇಲ್ಲ, ಸರ್ಕಾರ ಇರುವ ದೇವಸ್ಥಾನಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದರು. 

ಸರ್ಕಾರ ಹುಚ್ಚು ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಇದು. ನೀಡಿದ್ದ ವೇತನವನ್ನು ವಾಪಸ್​ ನೀಡುವಂತೆ ಹಿರೇಮಗಳೂರು ಕಣ್ಣನ್ ಅವರಿಗೆ ನೋಟಿಸ್​ ನೀಡಲಾಗಿದೆ. ಇದು ಕನ್ನಡದ ಪೂಜಾರಿಗೆ ಮಾಡುವ ದೊಡ್ಡ ಅಪಚಾರವಾಗಿದೆ. ಅರ್ಚಕರಿಗೆ ಮಾಡುತ್ತಿರುವ ದೊಡ್ಡ ಅವಮಾನವಿದು. ಹಿಂದೂ ಸಮಾಜ ಇದನ್ನೂ ಒಪ್ಪುವುದಿಲ್ಲ. ನಿಮಗೂ ಹೀಗೆ ಸಂಬಳ ವಾಪಸ್ ನೀಡಿ ಅಂದರೆ ಹೇಗೆ ಆಗುತ್ತದೆ? ಕಳೆದ  44 ವರ್ಷದಿಂದ ಅವರು ಕೋದಂಡರಾಮನ ಪೂಜೆ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದು ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಹೇಳಿದರು.

ಮುಜರಾಯಿ ಇಲಾಖೆ ಸಚಿವರು ರಾಜ್ಯದ ಜನರ ಕ್ಷಮೆ ಕೇಳಬೇಕು. ತಪ್ಪು ಆಗಿರುವುದನ್ನು ಒಪ್ಪಿಕೊಳ್ಳಬೇಕು. ಎಲ್ಲ ಹಿಂದೂ ಭಕ್ತರಿಗೆ ಅವಮಾನವಾಗಿದೆ. ತಹಸೀಲ್ದಾರ ಮತ್ತು ಜಿಲ್ಲಾಧಿಕಾರಿಯನ್ನು ಕೂಡಲೇ ಅಮಾನತ್ತು ಮಾಡಿ. ರಾಜ್ಯದಲ್ಲಿ 50 ಸಾವಿರ ಅರ್ಚಕರು ಇದ್ದಾರೆ. ಕೂಡಲೇ ನೋಟಿಸ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com