ಮೈಸೂರಿನಲ್ಲಿ ಆಘಾತಕಾರಿ ಘಟನೆ: ಮುಸ್ಲಿಂ ಯುವಕನ ಜೊತೆ ಪ್ರೇಮ; ತನ್ನ ತಾಯಿ ಮತ್ತು ಸಹೋದರಿಯನ್ನು ಕೊಂದ ಯುವಕ!

ಮುಸ್ಲಿಂ ಯುವಕನ್ನು ಪ್ರೀತಿಸುತ್ತಿದ್ದ ಸಹೋದರಿ ಮತ್ತು ತಾಯಿಯನ್ನು ಯುವಕನೇ ಕೊಂದಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ಮರೂರು ಗ್ರಾಮದಲ್ಲಿ ನಡೆದಿದೆ.
ತಾಯಿ-ಸಹೋದರಿಯನ್ನು ಕೊಂದ ಯುವಕ
ತಾಯಿ-ಸಹೋದರಿಯನ್ನು ಕೊಂದ ಯುವಕ

ಮೈಸೂರು: ಮುಸ್ಲಿಂ ಯುವಕನ್ನು ಪ್ರೀತಿಸುತ್ತಿದ್ದ ಸಹೋದರಿ ಮತ್ತು ತಾಯಿಯನ್ನು ಯುವಕನೇ ಕೊಂದಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ಮರೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಹಿರಿಕ್ಯಾತನಹಳ್ಳಿ ನಿವಾಸಿ 19 ವರ್ಷದ ಧನುಶ್ರೀ ಮತ್ತು ಆಕೆಯ ತಾಯಿ 40 ವರ್ಷದ ಅನಿತಾ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿ ಸಹೋದರ ನಿತಿನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ನಿತಿನ್ ತನ್ನ ಸಹೋದರಿ ಧನುಶ್ರೀ ಮುಸ್ಲಿಂ ಹುಡುಗನನ್ನು ಪ್ರೀತಿಸುತ್ತಿದ್ದರಿಂದ ತೀವ್ರವಾಗಿ ಅಸಮಾಧಾನಗೊಂಡಿದ್ದನು. ಈ ವಿಚಾರವಾಗಿ ಆಕೆಯೊಂದಿಗೆ ಹಲವು ಬಾರಿ ಜಗಳವಾಡಿದ್ದು, ಪ್ರತಿ ಬಾರಿ ಪೋಷಕರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸುತ್ತಿದ್ದರು. ಪೋಷಕರು ಸಹ ಯುವತಿಗೆ ಮುಸ್ಲಿಂ ಹುಡುಗನೊಂದಿಗಿನ ಪ್ರೀತಿ-ಪ್ರೇಮ ಮುಂದುವರಿಸಬೇಡ ಎಂದು ಸಲಹೆ ನೀಡಿದ್ದರು.

ಆದರೆ ಮಂಗಳವಾರ ಸಂಜೆ ಆರೋಪಿ ನಿತಿನ್ ಸಮೀಪದ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡುವ ನೆಪದಲ್ಲಿ ಧನುಶ್ರೀ ಮತ್ತು ತಾಯಿ ಅನಿತಾ ಅವರನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದ. ಮರೂರು ಕೆರೆಯ ಬಳಿ ಬೈಕ್ ನಿಲ್ಲಿಸಿದ ನಿತಿನ್ ಸಹೋದರಿ ಧನುಶ್ರೀಯನ್ನು ಕೆರೆಗೆ ತಳ್ಳಿದ್ದಾನೆ. ಇದನ್ನು ತಡೆಯಲು ಬಂದ ತಾಯಿ ಅನಿತಾಳನ್ನು ಆರೋಪಿ ಕೆರೆಗೆ ತಳ್ಳಿದ್ದಾನೆ. ಆದರೆ ಸ್ವಲ್ಪ ಸಮಯದ ನಂತರ, ಆರೋಪಿ ತನ್ನ ತಾಯಿಯನ್ನು ರಕ್ಷಿಸಲು ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು.

ಒದ್ದೆ ಬಟ್ಟೆಯಲ್ಲೇ ಮನೆಗೆ ಬಂದ ನಿತಿನ್ ತಂದೆ ಮುಂದೆ ನಿರಂತರವಾಗಿ ಕಣ್ಣೀರು ಹಾಕಿದ್ದಾನೆ. ಈ ವೇಳೆ ಏನಾಯಿತು ಎಂದು ತಂದೆ ಸತೀಶ್ ವಿಚಾಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

ಏಳು ತಿಂಗಳಿಂದ ನಿತಿನ್ ತನ್ನ ತಂಗಿಯೊಂದಿಗೆ ಮಾತನಾಡುತ್ತಿರಲಿಲ್ಲ ಎಂದು ಸತೀಶ್ ಹೇಳಿದ್ದಾರೆ. ಯಾವುದೇ ವಿಷಯಕ್ಕೆ ಪರಸ್ಪರ ಜಗಳವಾಡಬೇಡಿ ಎಂದು ನಾನು ಅವರಿಗೆ ಹೇಳಿದ್ದೆ. ಪೋಷಕರಾದ ನಾವು ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಲ್ಲದೆ ತಂಗಿಯೊಂದಿಗೆ ಜಗಳವಾಡಿದರೆ ಮನೆಗೆ ಬರಬೇಡಿ ಎಂದು ತಾಕೀತು ಮಾಡಿದ್ದೆ. ಹೀಗಾಗಿ ಆತನ ಮನೆ ಬಿಟ್ಟು ಬೇರೆಯಾಗಿ ವಾಸಿಸುತ್ತಿದ್ದನು. 

ಆ ದಿನ ರಾತ್ರಿ 9 ಗಂಟೆಗೆ ಮನೆಗೆ ಬಂದು ಚಿಕ್ಕಪ್ಪನೊಬ್ಬರಿಗೆ ಹುಷಾರಿಲ್ಲ, ಅವರನ್ನು ತುರ್ತಾಗಿ ಭೇಟಿ ಮಾಡಬೇಕೆಂದು ಹೇಳಿದ್ದನು. ಹೀಗಾಗಿ ನಾನು ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಂಡು ಬರಲು ಹೋದೆ. ನಾನು ಮನೆಗೆ ಬಂದು ನೋಡಿದಾಗ ನಿತಿನ್ ಒಬ್ಬನೆ ಇದ್ದ. ಈ ವೇಳೆ ನಿನ್ನ ತಾಯಿ ಮತ್ತು ತಂಗಿ ಎಲ್ಲಿ ಎಂದು ವಿಚಾರಿಸಿದೆ. ಆಗ ನಿತಿನ್ ನನ್ನನ್ನು ಕೆರೆ ಬಳಿಗೆ ಕರೆದೊಯ್ದು ನೀರಿಗೆ ತಳ್ಳಿರುವುದಾಗಿ ಹೇಳಿ ಅಲ್ಲಿಂದ ಹೊರಟುಹೋದ. ನಾನು ಸಂಬಂಧಿಕರ ಬಳಿಗೆ ಧಾವಿಸಿ ನಂತರ ಪೊಲೀಸರಿಗೆ ವಿಷಯ ಮುಟ್ಟಿಸಿದೆ.

ಅಗ್ನಿಶಾಮಕ ದಳ ಸಿಬ್ಬಂದಿ ಬುಧವಾರ ಕೆರೆಯಿಂದ ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಹುಣಸೂರು ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com