Photo of child in prisoners dress on social media
ದರ್ಶನ್ ಖೈದಿ ನಂಬರ್ ಫೋಟೋಗಳು

Darshan case: ಅಂಧಾಭಿಮಾನಕ್ಕೆ ''ಬರೆ'' ಎಳೆದ ಮಕ್ಕಳ ಆಯೋಗ; ಕಂದಮ್ಮನಿಗೆ ''ಖೈದಿ'' ವೇಷ ಹಾಕಿದ್ದ ಅಭಿಮಾನಿ ವಿರುದ್ಧ ಪ್ರಕರಣ ದಾಖಲು!

ದರ್ಶನ್ ಅಭಿಮಾನಿಯೊಬ್ಬ ಪುಟ್ಟ ಕಂದಮ್ಮನಿಗೆ ದರ್ಶನ್‌ ಖೈದಿ ನಂಬರ್ ಇರುವ ಬಟ್ಟೆ ಹಾಗೂ ಕೋಳ ಜೊತೆಗಿಟ್ಟು ಫೋಟೋ ಶೂಟ್ ಮಾಡಿಸಿ ಹುಚ್ಚಾಟ ಮೆರೆದಿದ್ದಾನೆ.
Published on

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅಭಿಮಾನಿಗಳ 'ಅಂಧಾಭಿಮಾನ'' ಮುಂದುವರೆದಿರುವಂತೆಯೇ ಅತ್ತ ಅಭಿಮಾನಿಗಳ ಹುಚ್ಚಾಟಕ್ಕೆ ಮಕ್ಕಳ ರಕ್ಷಣಾ ಆಯೋಗ ಪ್ರಕರಣ ದಾಖಲಿಸಿದೆ.

ಹೌದು.. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿ 15 ಮಂದಿ ಸದ್ಯ ಇಲ್ಲಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರಿಗೆ 6106 ಎಂಬ ಖೈದಿ ಸಂಖ್ಯೆ ನೀಡಲಾಗಿದೆ.

ಆದರೆ ಹುಚ್ಚು ಅಭಿಮಾನಿಗಳು ಇದನ್ನೂ ತಮ್ಮ ಅಂಧಾಭಿಮಾನಕ್ಕೆ ಬಳಸಿಕೊಂಡಿದ್ದು, ದರ್ಶನ್ ಅಭಿಮಾನಿಯೊಬ್ಬ ಪುಟ್ಟ ಕಂದಮ್ಮನಿಗೆ ದರ್ಶನ್‌ ಖೈದಿ ನಂಬರ್ ಇರುವ ಬಟ್ಟೆ ಹಾಗೂ ಕೋಳ ಜೊತೆಗಿಟ್ಟು ಫೋಟೋ ಶೂಟ್ ಮಾಡಿಸಿ ಹುಚ್ಚಾಟ ಮೆರೆದಿದ್ದಾನೆ.

ಈ ಹುಚ್ಚಾಟದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸ್ ಇಲಾಖೆ ಮತ್ತು ಮಕ್ಕಳ ರಕ್ಷಣಾ ಆಯೋಗ ಬಿಸಿ ಮುಟ್ಟಿಸಲು ಮುಂದಾಗಿದೆ.

Photo of child in prisoners dress on social media
ಜೈಲಿನಲ್ಲಿರುವ ದರ್ಶನ್ ಭೇಟಿಯಾದ ಮೀನಾ ತೂಗುದೀಪ್ ಹಾಗೂ ದಿನಕರ್: ಮಗನನ್ನು ಸಂತೈಸಿದ ತಾಯಿ!

ಈಗಾಗಲೇ ಘಟನೆಯ ಬಗ್ಗೆ ಮಾಹಿತಿ ಪಡೆದಿರುವ ಮಕ್ಕಳ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ಮಗುವಿಗೆ ಖೈದಿ ನಂಬರ್ ಹಾಕಿಸಿ ಫೋಟೋ ಶೂಟ್ ಮಾಡಿದ್ದ ಪೋಷಕರಿಗೆ ನೊಟೀಸ್ ಕೊಡಲು ಮುಂದಾಗಿದೆ.

ಅಲ್ಲದೆ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಸೈಬರ್ ಅಪರಾಧ ಇಲಾಖೆಗೆ ಮತ್ತು ಪೊಲೀಸರಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ಬುಧವಾರ ನಿರ್ದೇಶನ ನೀಡಿದೆ.

ಅಂತೆಯೇ ಫೋಟೋಗಳನ್ನು ಹಂಚಿಕೊಂಡಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಕೆಎಸ್‌ಪಿಸಿಆರ್‌ ಅಧ್ಯಕ್ಷ ಕೆ.ನಾಗಣ್ಣಗೌಡ ಅವರು ಅಪರಾಧ ತನಿಖಾ ವಿಭಾಗದ ಸೈಬರ್‌ ಕ್ರೈಂ ವಿಭಾಗಕ್ಕೆ ಪತ್ರ ಬರೆದಿದ್ದು, ಮಕ್ಕಳು ತಿಳಿಯದೆ ತಪ್ಪು ಮಾಡಿದರೂ ನಾವು ಅವರನ್ನು ಆರೋಪಿಗಳು ಅಥವಾ ಅಪರಾಧಿಗಳು ಎಂದು ಕರೆಯುವುದಿಲ್ಲ.

ನಾವು ಅವರನ್ನು ಕಾನೂನು ಹೋರಾಟದಲ್ಲಿ ತೊಡಗಿರುವ ಮಕ್ಕಳು' ಎಂದು ಕರೆಯುತ್ತೇವೆ. ಆದರೆ ಈ ಬೆಳವಣಿಗೆ ಸರಿಯಲ್ಲ. ಇಂತಹ ಪರಿಣಾಮ ಮಕ್ಕಳ ಮೇಲೆ ಆಗಬಾರದು. ಮಕ್ಕಳಿಗೆ ಉತ್ತಮ ವಾತಾವರಣವನ್ನು ಒದಗಿಸುವ ಬದಲು ನಾವು ಅವರ ಮೇಲೆ ನಮ್ಮ ಪ್ರೀತಿ ಅಥವಾ ಕುರುಡು ಪ್ರೀತಿಯನ್ನು ಹೇರಬಾರದು ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ದರ್ಶನ್ ಮೊಬೈಲ್ ಕವರ್

ಈ ಎಲ್ಲ ಬೆಳವಣಿಗೆಗಳ ಮಧ್ಯೆ ದರ್ಶನ್ ಖೈದಿ ನಂಬರ್ ನಲ್ಲಿಯೇ ಮೊಬೈಲ್ ಕವರ್ ಕೂಡಾ ಮರುಕಟ್ಟೆಗೆ ಬಂದಿದ್ದು, ಕೈದಿ ನಂಬರ್ 6106 ನಂಬರ್ ನ ಮೊಬೈಲ್ ಕವರ್ ಮಾಡ್ಕೊಂಡ ಫ್ಯಾನ್ಸ್ ಅದನ್ನು ವೈರಲ್ ಮಾಡುತ್ತಿದ್ದಾರೆ. ಕೈದಿ ನಂಬರ್ 6106 ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಟ್ರೆಂಡಿಂಗ್ ಆಗುತ್ತಿದ್ದು, ಬೈಕ್, ಆಟೋಗಳ ಹಿಂದೆ ಕೂಡ ಇದೆ ಖೈದಿ ನಂಬರ್ ಸ್ಟಿಕ್ಕರ್ ಹಾಕಿಕೊಂಡು ದರ್ಶನ್ ಅಭಿಮಾನಿಗಳು ಓಡಾಡುತ್ತಿರುವುದು ಕಂಡು ಬಂದಿದೆ.

ಕೈಗೆ ಬೇಡಿ ಹಾಕಿಸಿರುವ ಸ್ಟಿಕ್ಕರ್ ಜೊತೆಗೆ ಕೈದಿ ನಂಬರ್ ಹಾಕಿಸಿ ಟ್ರೆಂಡಿಂಗ್ ಮಾಡಲಾಗುತ್ತಿದೆ. ತಮ್ಮ ವಾಹನಗಳಿಗೆ ಈ ರೀತಿಯ ಸ್ಟಿಕ್ಕರ್ ಹಾಕಿಸಿರುವ ನೂರಾರು ಫ್ಯಾನ್ಸ್ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೋ ಮಾಡುತ್ತಿದ್ದಾರೆ. ಸದ್ಯ ಈಗ ಕೈದಿ ನಂಬರ್ 6106 ಸ್ಟಿಕ್ಕರ್ ಗಳಿಗೆ ಫುಲ್ ಡಿಮ್ಯಾಂಡ್ ಇದೆ ಎನ್ನಲಾಗಿದ್ದು ವಿಭಿನ್ನ ಬಣ್ಣ, ವಿನ್ಯಾಸದಲ್ಲಿ ದರ್ಶನ್ ಫ್ಯಾನ್ಸ್ ಇದನ್ನು ಮಾಡಿಸಿಕೊಂಡು ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com