
ಬೆಂಗಳೂರು: ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 44 ವರ್ಷದ ಕೈದಿಯೊಬ್ಬರು ನಾಲ್ಕು ಸ್ನಾತಕೋತ್ತರ ಪದವಿ ಮತ್ತು ಎರಡು ಡಿಪ್ಲೊಮಾ ಪದವಿಗಳನ್ನು ಗಳಿಸಿದ್ದಾರೆ.
ಬೆಂಗಳೂರು ಮೂಲದ ಐಟಿ ಸಂಸ್ಥೆಯ ಮಾಜಿ ಹೆಚ್ ಆರ್ ಮ್ಯಾನೇಜರ್ ಸತೀಶ್ ಕುಮಾರ್ ಗುಪ್ತಾ ಅವರು ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್ 10, 2010ರಲ್ಲಿ ಪತ್ನಿಯನ್ನು ಹತ್ಯೆಗೈದಿದ್ದಕ್ಕಾಗಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಜುಲೈ 2017 ರಲ್ಲಿ ದೋಷಿ ಎಂದು ತೀರ್ಪು ನೀಡಿತು.
ಸನ್ನಡತೆ ತೋರಿದ 76 ಕೈದಿಗಳನ್ನು ಮಂಗಳವಾರ ಬಿಡುಗಡೆ ಮಾಡಲಾಗಿದ್ದು, ಅವರಲ್ಲಿ ಗುಪ್ತಾ ಕೂಡ ಒಬ್ಬರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೊಸ ಉದ್ಯೋಗ ಗಳಿಸುವ ಮೂಲಕ ಹೊಸ ಜೀವನವನ್ನು ಪ್ರಾರಂಭಿಸಲು ಬಯಸುತ್ತೇನೆ ಎಂದು ಹೇಳಿದರು. ಇದರ ಜೊತೆಗೆ ಜನರಿಗೆ ಕಾನೂನು ಸಲಹೆಯನ್ನು ನೀಡಲು, ಜನರ ಪ್ರಕರಣಗಳಿಗೆ ಸಂಬಂಧಿಸಿದ ಕರಡು ದಾಖಲೆಗಳಿಗೆ ಸಹಾಯ ಮಾಡಲು ಉತ್ಸುಕರಾಗಿದ್ದಾರೆ.
ಆರೋಗ್ಯ ಕಾಪಾಡಲು ನ್ಯೂಟ್ರಿಷನ್ ಕೋರ್ಸ್: ಗುಪ್ತಾ ಅವರು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU)ದಿಂದ ಕ್ರಿಮಿನಲ್ ಜಸ್ಟೀಸ್, ಇಂಟರ್ ನ್ಯಾಷನಲ್ ಬಿಸಿನೆಸ್ ಆಪರೇಷನ್, ಬಿಸಿನೆಸ್ ಲಾ ಮತ್ತು ಮಾನವ ಹಕ್ಕುಗಳ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ, ಸೈಬರ್ ಕಾನೂನಿನಲ್ಲಿ ಡಿಪ್ಲೊಮಾ ಮತ್ತು ಆಹಾರ ಮತ್ತು ಪೋಷಣೆಯನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಗುಪ್ತಾ ಅವರು 14 ವರ್ಷಗಳ ಜೈಲಿನಲ್ಲಿ ಕಳೆದಿದ್ದಾರೆ. ಜೈಲಿನಲ್ಲಿರುವಾಗ ಸಮಾಜ ವಿರೋಧಿ ಶಕ್ತಿಗಳಿಂದ ದೂರವಿರಲು ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಂಡೆ. ನಾನು 24 ಸರ್ಟಿಫಿಕೇಟ್ ಕೋರ್ಸ್ಗಳನ್ನು ಸಹ ಪೂರ್ಣಗೊಳಿಸಿದೆ. ನನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಮತ್ತು ಪೌಷ್ಟಿಕಾಂಶದ ಕೋರ್ಸ್ ಮಾಡಿದ್ದೇನೆ. ಜೈಲಿನಲ್ಲಿರುವ ಅಧಿಕಾರಿಗಳು ಮತ್ತು ಶಿಕ್ಷಕರು ನನ್ನ ಅಧ್ಯಯನಕ್ಕೆ ಸಹಾಯ ಮಾಡಿದರು. ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆಯಲು ನನಗೆ ಅವಕಾಶ ಮಾಡಿಕೊಟ್ಟರು ಎಂದರು.
ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಗುಪ್ತಾ ಅವರ ಈ ಸಾಧನೆಯನ್ನು ಕೊಂಡಾಡಿದ್ದಾರೆ. ಇತರ ಕೈದಿಗಳು ಅವರನ್ನು ಅನುಕರಿಸುವ ರೀತಿಯಲ್ಲಿದ್ದಾರೆ ಎಂದರು.
Advertisement