ಬೆಂಗಳೂರು: ಡಾ.ಶಿವರಾಮ ಕಾರಂತ ಲೇಔಟ್ ನಲ್ಲಿ ಮೊದಲ ಕಾರು ರೇಸಿಂಗ್ ಟ್ರ್ಯಾಕ್!
ಬೆಂಗಳೂರು: ಡಾ ಶಿವರಾಮ ಕಾರಂತ ಲೇಔಟ್ನಲ್ಲಿ ಬೆಂಗಳೂರಿನ ಮೊದಲ ಮೋಟಾರ್ಸ್ಪೋರ್ಟ್ ರೇಸ್ ಟ್ರ್ಯಾಕ್ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. 2026ರಲ್ಲಿ ದೇವನಹಳ್ಳಿಯಲ್ಲಿ ಮತ್ತೊಂದು ರೇಸ್ ಟ್ರ್ಯಾಕ್ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ಯೋಜನೆ ಕುರಿತು ನಡೆಯುತ್ತಿರುವ ಚರ್ಚೆಗಳು ಫಲಪ್ರದವಾಗಿ, ಎಲ್ಲವೂ ಅಂದುಕೊಂಡಂತೆ ಸರಿಯಾಗಿ ನಡೆದರೆ ಇದೇ ವರ್ಷದ ನವೆಂಬರ್ ವೇಳೆಗೆ ಶಿವರಾಮ ಕಾರಂತ ಲೇಔಟ್ನಲ್ಲಿ ಯೋಜಿತ ಟ್ರ್ಯಾಕ್ ಸಿದ್ಧಗೊಳ್ಳಬಹುದು.
ನವೆಂಬರ್ನೊಳಗೆ ಟ್ರ್ಯಾಕ್ ಸಿದ್ಧಗೊಳಿಸಲು ಸೋಮಶೆಟ್ಟಿ ಹಳ್ಳಿಯ ಉದ್ದೇಶಿತ 25 ಎಕರೆ ಕ್ರೀಡಾಂಗಣದ ಸುತ್ತಲಿನ ಲೇಔಟ್ನಲ್ಲಿ 2.5 ಕಿಮೀ ಜಾಗದ ಹುಡುಕಾಟ ನಡೆಸುತ್ತಿರುವುದಾಗಿ ಬಿಡಿಎ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.
"2.5 ಕಿಮೀ ಜಾಗ ಕ್ರೀಡಾಂಗಣವನ್ನು ಸುತ್ತುವರೆದಿರುವ ಲೂಪ್ ರೂಪದಲ್ಲಿರುತ್ತದೆ. ಕ್ರೀಡಾಕೂಟದ ಅವಧಿಯಲ್ಲಿ ಮಾತ್ರ ಅವರು ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ. ಇದು ಕೆಲವು ದಿನಗಳವರೆಗೆ ಇರುತ್ತದೆ. ಓಟಕ್ಕೆ ಅಗತ್ಯವಾದ ಉನ್ನತೀಕರಣ ಮತ್ತು ರೇಸಿಂಗ್ಗೆ ಬ್ಯಾರಿಕೇಡಿಂಗ್ ಮತ್ತಿತರ ಕೆಲಸಗಳನ್ನು ಮಾಡಲಾಗುತ್ತದೆ. ಇಲ್ಲದಿದ್ದರೆ ಬಿಡಿಎ ಸೈಟ್ ನೀಡಿದವರಿಗೆ ರಸ್ತೆ ಮುಕ್ತವಾಗಲಿದೆ. ಇನ್ನು ಕ್ರೀಡಾಂಗಣ ನಿರ್ಮಾಣವಾಗಬೇಕಿದೆ. ಆದರೆ ಅದಕ್ಕೆ ಈಗಾಗಲೇ ಜಾಗವನ್ನು ಮೀಸಲಿಡಲಾಗಿದೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಉದ್ದೇಶಿತ ಕ್ರೀಡಾಂಗಣದ ಸುತ್ತಲೂ ಬಹು ಕ್ರೀಡಾ ಸೌಲಭ್ಯ ಕಲ್ಪಿಸಲಾಗುವುದು, ಇದಕ್ಕೆ ಕೆಲವು ವರ್ಷಗಳು ಬೇಕಾಗಲಿದೆ ಎಂದು ಅವರು ಹೇಳಿದರು.
"ಭವಿಷ್ಯದ ಟೂರ್ನಿಗಳಿಗೆ ಇಲ್ಲಿ ಸ್ಥಳಾವಕಾಶ ನೀಡಲು ರೇಸಿಂಗ್ ಆಯೋಜಕರು ಇತ್ತೀಚೆಗೆ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರಿಗೆ ಮನವಿ ನೀಡಿದ್ದಾರೆ ಎಂದು ಬಿಡಿಎ ಉನ್ನತ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಲೇಔಟ್ 17 ಹಳ್ಳಿಗಳನ್ನು ಒಳಗೊಂಡಂತೆ 3,546 ಎಕರೆ ಪ್ರದೇಶವಿದೆ. ಹಂಚಿಕೆಗಾಗಿ ಅಧಿಸೂಚನೆಯೊಂದಿಗೆ ಮುಂದುವರಿಯಲು ಹೈಕೋರ್ಟ್ನಿಂದ ಹಸಿರು ನಿಶಾನೆಗೆ ಕಾಯುತ್ತಿದೆ. ಇಂಡಿಯನ್ ರೇಸಿಂಗ್ ಲೀಗ್ ಮತ್ತು ಫಾರ್ಮುಲಾ 4-ಸಂಬಂಧಿತ ಈವೆಂಟ್ಗಳನ್ನು ಇಲ್ಲಿ ಆಯೋಜಿಸುವ ಸಾಧ್ಯತೆಯಿದೆ ಎಂದು ಮೋಟಾರ್ಸ್ಪೋರ್ಟ್ ತಜ್ಞರು ಹೇಳಿದ್ದಾರೆ.
ರೇಸ್ ಸಂದರ್ಭದಲ್ಲಿ ಮಾತ್ರ ಬ್ಯಾರಿಕೇಡ್ ಮತ್ತಿತರ ಕೆಲವು ಮಾರ್ಪಾಡುವ ಮಾಡುವಂತಹ ತಾತ್ಕಾಲಿಕ ರೇಸಿಂಗ್ ಟ್ರ್ಯಾಕ್ ಗಾಗಿ ಯೋಜಿಸುತ್ತಿದ್ದೇವೆ ಎಂದು ಈವೆಂಟ್ ಮ್ಯಾನೇಜರ್ ಘನಶ್ಯಾಮ್ ಹೇಳಿದರು. ಪ್ರಸ್ತುತ ಆಯೋಜಕರು 5 ವರ್ಷಗಳ ಅವಧಿಗೆ ಒಪ್ಪಂದವನ್ನು ಎದುರು ನೋಡುತ್ತಿದ್ದಾರೆ. ಅಗತ್ಯವಿದ್ದರೆ ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬಹುದು ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು. ಶಬ್ದದ ಮಟ್ಟ ಖಂಡಿತವಾಗಿಯೂ ಹೆಚ್ಚಾಗಲಿದೆ. ಆದರೆ, ಬೆಂಗಳೂರಿನ ಹೆಚ್ಚಿನ ಜನರು ವಾಸಿಸುವ ಅಥವಾ ಕೆಲಸ ಮಾಡುವ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯವು ಮನುಷ್ಯರಿಗೆ ಶಿಫಾರಸು ಮಾಡುವುದಕ್ಕಿಂತ ಹೆಚ್ಚಿರುತ್ತದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.
ಜೂನ್ 6 ರಂದು ವಿಚಾರಣೆ: ಡಾ.ಶಿವರಾಮ ಕಾರಂತ ಲೇಔಟ್ಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿದೆ. ಲೇಔಟ್ನಲ್ಲಿ ಒಟ್ಟು 34,000 ನಿವೇಶನಗಳು ಬರುತ್ತಿದ್ದು, ಸುಮಾರು 10,000 ಸಾರ್ವಜನಿಕರಿಗೆ ಹಂಚಿಕೆಯಾಗಲಿದೆ. ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡುವವರೆಗೆ ಈ ಕುರಿತು ಅಧಿಸೂಚನೆ ನೀಡುವಂತಿಲ್ಲ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ