
ಬೆಳಗಾವಿ: ರಸ್ತೆ ಮೇಲೆ ಹೋಗುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕಾರು ಡಿಕ್ಕಿ ಹೊಡೆಸಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿರುವ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಬೀಮ್ಸ್ ಆಸ್ಪತ್ರೆ ಎದುರಿಗೆ ಮೇ 5 ರಂದು ನಡೆದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲೆಯ ಬೆಟಗೇರಿ ನಿವಾಸಿ ಸುರೇಶ ಹರ್ಲಾಪುರ ಅವರು, ತಮ್ಮ ಸಹೋದರ ಧಾರವಾಡದ ವನಶ್ರೀ ನಗರ, ಎಸ್ಡಿಎಂ ಕಾಲೇಜು ಹಿಂದೆ ಸತ್ತೂರ ನಿವಾಸಿ ವಿರೂಪಾಕ್ಷ ಕೊಟ್ರೆಪ್ಪ ಹರ್ಲಾಪೂರ (60) ಅವರಿಗೆ ಅಪಘಾತ ಆಗಿರುವ ಬಗ್ಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ. ಸಂಚಾರ ಉತ್ತರ ಠಾಣೆಯ ಪಿಐ ಪಿ. ಐ. ಚನ್ನಗಿರಿ ರವರು ಸಿಸಿಟಿವಿ ದೃಶ್ಯಾವಳಿ ಮತ್ತು ಇತರೆ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಿ ಆರೋಪಿ ಬೆಳಗಾವಿಯ ಶಾಸ್ತ್ರಿ ನಗರ, ಕಂಗ್ರಾಳ ಬಿ. ಕೆ. ನಿವಾಸಿ ಮಹೇಶ ಸಿದ್ರಾಮ ಸುಂಕದ (24) ಈತನನ್ನ ಪತ್ತೆ ಮಾಡಿ ವಿಚಾರಿಸಿ ಹೇಳಿಕೆ ಪಡೆದುಕೊಂಡಾಗ ಇದೊಂದು ಪೂರ್ವಯೋಜಿತ ಅಪರಾಧಿಕ ಕೃತ್ಯವೆಂದು ದೃಢವಾಗಿದೆ.
ಬಳಿಕ ಪೊಲೀಸರು ಕೊಲೆ ಮಾಡಲು ಬಳಸಿದ ಕಾರನ್ನು ವಶಕ್ಕೆ ಪಡೆದುಕೊಂಡು, ಈ ಪ್ರಕರಣವನ್ನು ಎಪಿಎಂಸಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ನಂತರ ತನಿಖೆ ಮುಂದುವರೆಸಿ ಸಂಚಾರ ಮತ್ತು ಎಪಿಎಂಸಿ ಠಾಣೆಯ ಸಿಬ್ಬಂದಿಯವರ ತಂಡ ಈ ಕೃತ್ಯದಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳುನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬಸವರಾಜ ಯಲ್ಲಪ್ಪ ಭಗವತಿ (50), ಪ್ರಕಾಶ ರಾಠೋಡ (41), ರವಿ ಬಸು ಕುಂಬರಗಿ (28), ಸಚಿನ್ ಚಂದ್ರಕಾಂತ ಪಾಟೀಲ (24), ರಾಮ ವಂಟಮುರಿ (28) ಎಂದು ಗುರ್ತಿಸಲಾಗಿದೆ.
ಇವರೆಲ್ಲನ್ನು ಪತ್ತೆ ಮಾಡಿ ವಿಚಾರಿಸಿದಾಗ, ಬಸವರಾಜ ಭಗವತಿ ಈತನು ವೈಯಕ್ತಿಕ ದ್ವೇಷದಿಂದ ವಿರೂಪಾಕ್ಷ ಹರ್ಲಾಪೂರ ಇವರಿಗೆ ಕಾರು ಡಿಕ್ಕಿ ಹೊಡೆಸಿ ಕೊಲೆ ಮಾಡಿ, ಕಾರನ್ನು ನಿಲ್ಲಿಸದೇ ಓಡಿಸಿಕೊಂಡು ಹೋಗಿರುವುದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಭಂದಿಸಿದಂತೆ ಮತ್ತೊಬ್ಬ ಆರೋಪಿ ರಾಮಾ ಪಾಟೀಲ್ ಎಂಬಾತ ಪರಾರಿಯಾಗಿದ್ದು, ಆತನ ಪತ್ತೆ ಕಾರ್ಯ ಹಾಗೂ ಪ್ರಕರಣ ತನಿಖೆ ನಡೆಯುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ ಆರೋಪಿಗಳು ಕೊಲೆಗೆ ಯತ್ನಿಸಿದ್ದು ಇದೇ ಮೊದಲಲ್ಲ. ಜೂನ್ 15, 2023 ರಂದೂ ಕೂಡ ಇದೇ ರೀತಿಯಲ್ಲಿ ಕೊಲ್ಲಲು ಪ್ರಯತ್ನಿಸಿದ್ದರು, ಆದರೆ, ವಿರೂಪಾಕ್ಷ ಕೊಟ್ರೆಪ್ಪ ಹರ್ಲಾಪೂರ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದರು. ಸಂಚಾರ ಪೊಲೀಸರಲ್ಲಿ ಪ್ರಕರಣವೂ ದಾಖಲಾಗಿದೆ. ಇದಾದ ಒಂದು ವರ್ಷದ ನಂತರ ಆರೋಪಿಗಳು ಕೊಲೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಬಳಿಕ ಪ್ರಕರಣವನ್ನು ಅಪಘಾತವೆಂದು ಬಿಂಬಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement