ಬೆಂಗಳೂರು: ಜೂನ್ 17 ರಂದು ಈದ್ ಅಲ್-ಅಧಾ (ಬಕ್ರೀದ್) ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬಲಿ ನೀಡುವ ಜಾನುವಾರುಗಳ ಬೆಲೆ ಏರಿಕೆಯಾಗಿದೆ. ಆದರೆ, ಮೇಕೆಗಳಿಗೆ ಹೋಲಿಸಿದರೆ ಈ ವರ್ಷ ಕುರಿಗಳಿಗೆ ಬೇಡಿಕೆ ಕುಸಿದಿರುವುದು ರೈತರಲ್ಲಿ ಬೇಸರ ತರಿಸಿದೆ.
ಗ್ರಾಮೀಣ ಭಾಗದಲ್ಲಿನ ಬಹುತೇಕ ರೈತರು ಕೃಷಿ ಮತ್ತು ತೋಟಗಾರಿಕೆ ಜೊತೆಯಲ್ಲಿ ಉಪಕಸುಬುಗಳಾದ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವುದು ಸಾಮಾನ್ಯ. ಬಡ ರೈತರ ಪಾಲಿಗೆ ಕುರಿ ಮತ್ತು ಮೇಕೆ ಸಾಕಾಣೆ ಆರ್ಥಿಕತೆಯ ಮೂಲಗಳಾಗಿವೆ.
ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದಾಗ, ತೋಟಗಳಲ್ಲಿ ಬೆಳೆ ಬಿತ್ತನೆ ಮಾಡುವ ಸಮಯದಲ್ಲಿ, ಮದುವೆಗಳ ಸಮಯದಲ್ಲಿ ಹಣದ ಕೊರತೆ ಎದುರಾದಾಗ ತಾವು ಸಾಕಾಣಿಕೆ ಮಾಡಿರುವ ಕುರಿ, ಮೇಕೆ ಮಾರಾಟ ಮಾಡಿ ತಮ್ಮ ಆರ್ಥಿಕ ಕೊರತೆಗಳನ್ನು ನೀಗಿಸಿಕೊಳ್ಳುತ್ತಾರೆ.
ಜೂನ್ 17 ರಂದು ಬಕ್ರೀದ್ ಹಬ್ಬದ ಹಿನ್ನೆಲೆ ಕುರಿ, ಮೇಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದು, ಬೆಲೆ ಗಗನಕ್ಕೇರಿದೆ. 18-19 ಕೆಜಿ ತೂಕದ ಮೇಕೆಗಳ ಬೆಲೆ 20,000 ರೂ.ಗೆ ಏರಿಕೆಯಾಗಿದೆ.
ಕಳೆದ 15 ವರ್ಷಗಳಿಂದ ಆರ್ಟಿ ನಗರದಲ್ಲಿ ಕುರಿ ಮಾರಾಟ ಮಾಡುತ್ತಿರುವ ರೈತ ಶಾಕಿಬ್ ಎಂಬುವವರು ಮಾತನಾಡಿ, ನಾನು ಮತ್ತು ನನ್ನ ಕುಟುಂಬ ಪ್ರತಿ ವರ್ಷ ಬಕ್ರೀದ್ ಸಂದರ್ಭದಲ್ಲಿ ಬಾಗಲಕೋಟೆಗೆ ಹೋಗಿ ಜಾನುವಾರುಗಳನ್ನು ಮಾರಾಟ ಮಾಡುತ್ತೇವೆ. ಕಳೆದ ವರ್ಷ 150ಕ್ಕೂ ಹೆಚ್ಚು ಕುರಿಗಳನ್ನು ಮಾರಾಟ ಮಾಡಿದ್ದೆವು. ಈ ವರ್ಷವೂ ಇದೇ ಬೇಡಿಕೆಯನ್ನು ನಿರೀಕ್ಷಿಸಿ ಬಾಗಲಕೋಟೆಯಿಂದ ಬಾಡಿಗೆ ಲಾರಿ ಮೂಲಕ 200 ಕುರಿಗಳನ್ನು ಸಾಗಿಸಿದ್ದೆವು. ಆದರೆ, ಇದುವರೆಗೆ ಕೇವಲ 40 ಕುರಿಗಳಿಗೆ ಮಾತ್ರ ಮಾರಾಟವಾಗಿವೆ. ಸಾರಿಗೆ ವೆಚ್ಚವನ್ನು ಮರುಪಾವತಿಸಲು ನಮಗೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೇರಳ ಮತ್ತು ತಮಿಳುನಾಡಿನ ಗ್ರಾಹಕರು ಕುರಿಗಳಿಗಿಂತ ಮೇಕೆ ಮತ್ತು ದನಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೀಗಾಗಿ, ಮೇಕೆ ಮಾರಾಟ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ಹಲವಾರು ಗ್ರಾಹಕರು ಎತ್ತುಗಳಿಗೆ ಮುಂಗಡ ಹಣ ಪಾವತಿ ಮಾಡಿದ್ದರು. ಅದರಂತೆ ಈ ವರ್ಷವೂ ವ್ಯವಸ್ಥೆ ಮಾಡಿದ್ದೆವು. ಆದರೆ, ಈ ವರ್ಷ ಎತ್ತುಗಳ ಬೇಡಿಕೆಯೂ ಕಡಿಮೆಯಾಗಿದೆ.
18-19 ಕೆಜಿ ತೂಕದ ಮೇಕೆಗಳ ಬೆಲೆ ಕಳೆದ ವರ್ಷ 12,000 ರೂ ಇತ್ತು. ಈ ವರ್ಷ 20,000 ರೂ.ಗೆ ಏರಿಕೆಯಾಗಿದೆ. ಆದರೆ, ಕುರಿಗಳ ಬೆಲೆಯಲ್ಲಿ ಏರಿಕೆಯಾಗಿಲ್ಲ. ಕಳೆದ ವರ್ಷದ ಇದ್ದ 15,000 ರಿಂದ 50,000 ರೂಗಳೇ ಈ ವರ್ಷವೂ ಇದೆ.
ಬೆಂಗಳೂರಿನಲ್ಲಿ ಮೇಕೆಗಳಿಗಿಂತ ಕುರಿಗಳಿಗೆ ಬೇಡಿಗೆ ಹೆಚ್ಚಾಗಿದೆ. ನಗರದಲ್ಲಿ ಸೀಮಿತ ಮೇಕೆ ಮಾರಾಟಗಾರರಿದ್ದಾರೆ ಎಂದು ಮತ್ತೊಬ್ಬ ಮಾರಾಟಗಾರ ಜಾಖೀರ್ ತಿಳಿಸಿದ್ದಾರೆ.
ಸಾಕಷ್ಟು ಮಂದಿ ನೆರೆಹೊರೆಯವರು ಹಾಗೂ ಸಂಬಂಧಿಕರೊಂದಿಗೆ ಸೇರಿ ಮೇಕೆ ಅಥವಾ ಕುರಿ ಖರೀದೀಗೆ ಹಣ ಸಂಗ್ರಹಿಸುತ್ತಾರೆ. ಎಲ್ಲರೂ ಒಟ್ಟಿಗೆ ಸೇರಿ ಜಾನುವಾರು ಖರೀದಿ ಮಾಡುತ್ತಾರೆ. ಇದೂ ಕೂಡ ಮಾರಾಟ ಹಾಗೂ ಲಾಭದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಾರ್ವತ್ರಿಕ ಅಧಿನಿಯಮ ಜಾರಿಯಾಗಿದೆ. ಹೀಗಾಗಿ ದನ, ಎತ್ತು, ಕೋಣಗಳ ಬಲಿ ಕೊಡುವುದಕ್ಕೆ ಜನ ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆ ಬಕ್ರೀದ್ ಸಂದರ್ಭ ದನ, ಎತ್ತು ಖರೀದಿ ಮಾಡುತ್ತಿದ್ದ ಹೆಚ್ಚಿನವರು ಈ ಬಾರಿ ಆಡು, ಕುರಿ ಖರೀದಿಸುವುದರಿಂದ ಬೇಡಿಕೆ ಹೆಚ್ಚಾಗಿದೆ.
Advertisement