ಠಾಣೆಗೆ ಶಾಮಿಯಾನ ಹಾಕಿ ನಟ ದರ್ಶನ್'ಗೆ ರಾಜಾತಿಥ್ಯ: ಆರೋಪ ನಿರಾಕರಿಸಿದ ಗೃಹ ಸಚಿವ ಪರಮೇಶ್ವರ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ವಾಕಿಂಗ್ ಮಾಡಲು ಪೊಲೀಸ್ ಠಾಣೆ ಸುತ್ತ ಶಾಮಿಯಾನ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್
Updated on

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ವಾಕಿಂಗ್ ಮಾಡಲು ಪೊಲೀಸ್ ಠಾಣೆ ಸುತ್ತ ಶಾಮಿಯಾನ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ನಡೆಸಲು ಪೊಲೀಸರಿಗೆ ಫ್ರೀಹ್ಯಾಂಡ್ ಕೊಡಬೇಕು. ಯಾರೂ ಆರೋಪಿಗಳಿಗೆ ರಾಜಾತಿಥ್ಯ ಕೊಡುವುದಿಲ್ಲ, ಕೊಡಬಾರದು. ಪೊಲೀಸರಲ್ಲೂ ಈ ಬಗ್ಗೆ ವಿಚಾರಣೆ ಮಾಡಿದ್ದೇನೆ. ಆ ರೀತಿ ರಾಜಾತಿಥ್ಯ ದರ್ಶನ್‌ಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲಾ ಅಪರಾಧಿಗಳ ರೀತಿಯಲ್ಲೇ ದರ್ಶನ್ ಅವರನ್ನೂ ನಡೆಸಿಕೊಳ್ಳಲಾಗುತ್ತಿದೆ. ಯಾವುದೇ ರಾಜಾತಿಥ್ಯ ನೀಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ನಗರ ಪೊಲೀಸ್‌ ಕಮಿಷನರ್‌ ಬಳಿ ಕೂಡಾ ಮಾತನಾಡಿದ್ದೇನೆ. ಅವರು ಕೂಡಾ ಈ ಆರೋಪವನ್ನು ನಿರಾಕರಿಸಿದ್ದಾರೆ ಎಂದು ತಿಳಿಸಿದರು.

ಗೃಹ ಸಚಿವ ಪರಮೇಶ್ವರ್
ಪೊಲೀಸ್ ಠಾಣೆಗಳನ್ನು ಶಾಮಿಯಾನ ಹಾಕಿ ಮುಚ್ಚುವುದಕ್ಕೆ ಯಾವುದೇ ಕಾನೂನು ಇಲ್ಲ: ಕಾನೂನು ಸಚಿವ

ದರ್ಶನ್ ಇರುವ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ಬಳಿ ರಸ್ತೆ ತಡೆಹಿಡಿಯಲಾಗಿದ್ದು, ಇದರಿಂದ ಶಾಲಾ ವಾಹನಗಳು, ಆಂಬ್ಯುಲೆನ್ಸ್‌ಗಳು ಹಾಗೂ ಅಕ್ಕಪಕ್ಕದ ಜನರ ಓಡಾಟವನ್ನು ನಿರ್ಬಂಧಿಸಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸುವುದಾಗಿ ತಿಳಿಸಿದರು.

ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಸಹಿತ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣದ 17 ಮಂದಿ ಆರೋಪಿಗಳು ಅನ್ನಪೂರ್ಣೇಶ್ವರಿ ನಗರ ಪೊಲಿಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ನಿನ್ನೆ ಏಕಾಏಕಿ ಪೊಲೀಸ್ ಠಾಣೆಯ ಆವರಣದ ಗೋಡೆಗೆ ಶಾಮಿಯಾನ ಹಾಕಲಾಗಿತ್ತು. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಶಾಮಿಯಾನದ ಸೈಡ್ ವಾಲ್ ಹಾಕಿಸಿದ್ದು, ನಟ ದರ್ಶನ್‍ಗಾಗಿಯೇ ಎನ್ನಲಾಗಿತ್ತು. ಪೊಲೀಸರ ಮುಂದೆ ದರ್ಶನ್ ಮನವಿ ಹಿನ್ನೆಲೆಯಲ್ಲಿ ಪೊಲೀಸರು ಈ ಕೆಲಸ ಮಾಡಿದ್ದಾರೆ ಎಂಬ ಹೇಳಲಾಗಿತ್ತು.

ನನಗೆ ಒಂದೇ ಕಡೆ ಕುಳಿತು ಇರಲು ಆಗುತ್ತಿಲ್ಲ. ನಾನು ವಾಕ್ ಮಾಡಬೇಕು ನನ್ನ ಕೈಲಿ ಆಗುತ್ತಿಲ್ಲ. ನಾನು ಬಾಡಿ ರಿಲ್ಯಾಕ್ಸ್ ಮಾಡಬೇಕು. ಸಿಗರೇಟ್ ಇಲ್ಲವಾದರೆ ನನಗೆ ಕೈ ನಡುಗುತ್ತೆ. ನೀವು ಪದೇ ಪದೇ ಪ್ರಶ್ನೆ ಮಾಡುತ್ತಲೇ ಇದ್ದೀರಿ. ನಾನು ಎಷ್ಟು ಸಲ ಹೇಳಲಿ ನನಗೆ ಏನು ಗೊತ್ತಿಲ್ಲ ಎಂದು. ಪದೇ ಪದೇ ಅದೇ ಪ್ರಶ್ನೆ ಕೇಳುತ್ತಿದ್ದೀರಿ ಎಂದು ಪೊಲೀಸರ ಮುಂದೆ ದರ್ಶನ್ ಅಳಲು ತೋಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ದರ್ಶನ್ ವಾಕ್ ಮಾಡಲು ಶಾಮಿಯಾನ ಹಾಕಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಆರೋಪವನ್ನು ಗೃಹ ಸಚಿವರು ನಿರಾಕರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com