
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿನ ಹಲವಾರು ಅಂಗನವಾಡಿ ಕೇಂದ್ರಗಳು ದುಸ್ಥಿತಿಯಲ್ಲಿವೆ. ಬಿಬಿಎಂಪಿ ಅಂಗನವಾಡಿ ಕೇಂದ್ರಗಳಿಗೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ, ಪರಿಶೀಲಿಸಿದ ವೇಳೆ ಕಳಪೆ ಆಹಾರ ಹಾಗೂ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣಿಸಿದೆ.
ಅನೇಕ ಸಣ್ಣ ಮತ್ತು ಸುತ್ತುವರಿದ ಕೇಂದ್ರಗಳಲ್ಲಿ ಕುಡಿಯಲು ನೀರು ಮತ್ತು ತೊಳೆಯಲು ಸುರಕ್ಷಿತ ನೀರಿನ ಸಂಪರ್ಕ ಇಲ್ಲ. ವಿದ್ಯುತ್ ಇಲ್ಲ ಮತ್ತು ಮೂಲಭೂತ ನೈರ್ಮಲ್ಯ ಸೌಕರ್ಯಗಳಿಲ್ಲದಿರುವುದು ಕಂಡು ಬಂದಿದೆ.
ಕರ್ನಾಟಕ ಹೈಕೋರ್ಟ್ನ ಮಾಜಿ ನ್ಯಾಯಾಧೀಶ ಹಾಗೂ ರಾಜ್ಯ ಮಟ್ಟದ ಅಪೌಷ್ಟಿಕತೆ ತಡೆ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಎಎನ್ ವೇಣುಗೋಪಾಲಗೌಡ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ (ಕೆಎಸ್ಎಲ್ಎಸ್ಎ) ಸದಸ್ಯ ಕಾರ್ಯದರ್ಶಿ ಎಂ.ಎಲ್.ರಘುನಾಥ್ ಮತ್ತು ಇತರ ಅಧಿಕಾರಿಗಳು ಜೂನ್ 12 ರಂದು ನಾಲ್ಕು ಅಂಗನವಾಡಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು.
ನಿರ್ವಹಣೆಗೆ ಅಗತ್ಯವಿರುವ ರಿಜಿಸ್ಟರ್ಗಳಲ್ಲಿ ಡೇಟಾ ಕೊರತೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು ನಿಯಮಿತವಾಗಿ ಕೇಂದ್ರಗಳಿಗೆ ಭೇಟಿ ನೀಡದಿರುವುದನ್ನು ಉನ್ನತ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ.
ಆಹಾರದ ಗುಣಮಟ್ಟ ಕಳಪೆಯಾಗಿರುವುದು ದೊಡ್ಡ ಆತಂಕವಾಗಿದೆ. ಬಿಬಿಎಂಪಿ ಅಂಗನವಾಡಿಗಳು "ಸಮಯ ಕೊಲ್ಲುವ ಕೇಂದ್ರಗಳು", "ಕಲಿಕಾ ಕೇಂದ್ರಗಳಲ್ಲ" ಎಂದು ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಸ್ಲಂ ಬೋರ್ಡ್ ಅಡಿಯಲ್ಲಿ ಸರಬಂಡೆ ಪಾಳ್ಯದಲ್ಲಿ 8x12 ಅಡಿಯ ಸಣ್ಣ ಜಾಗದಲ್ಲಿ ನಿರ್ಮಿಸಲಾದ ಅಂಗನವಾಡಿ ಕೇಂದ್ರಕ್ಕೆ ಪ್ರತ್ಯೇಕ ಅಡುಗೆ ಕೋಣೆ ಇಲ್ಲ ಎಂದು ತಪಾಸಣಾ ತಂಡ ಬಹಿರಂಗಪಡಿಸಿತು ಮತ್ತು ಅಧಿಕಾರಿಗಳಿಗೆ ನ್ಯಾಯಮೂರ್ತಿ ಗೌಡ ಅವರು ನಿರ್ದೇಶನ ನೀಡಿದ ನಂತರವೇ ವಿದ್ಯುತ್ ಸಂಪರ್ಕ ನೀಡಲಾಯಿತು.
“ಪುಸ್ತಕಗಳು ಮತ್ತು ಆಟಿಕೆಗಳು ಕಳಪೆ ಸ್ಥಿತಿಯಲ್ಲಿದ್ದವು. 2021 ರಲ್ಲಿಯೇ ಆಟಿಕೆಗಳ ಬಾಕ್ಸ್ ನೀಡಲಾಗಿದ್ದರೂ, ತಪಾಸಣೆ ದಿನದವರೆಗೂ ಆ ಬಾಕ್ಸ್ ತೆರೆದಿರಲಿಲ್ಲ. ಆಹಾರದ ಪಾಕೇಟ್ ಗಳು ಕೊಳೆಯುತ್ತಿವೆ’ ಎಂದು ಎಂ.ಎಲ್.ರಘುನಾಥ್ ವಿವರಿಸಿದರು.
Advertisement