ಬೆಂಗಳೂರು: ಬೆಂಗಳೂರಿಗೆ 500 ಎಂಎಲ್ ಡಿ ನೀರಿನ ಕೊರತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 2,600 ಎಂಎಲ್ ಡಿಯಷ್ಟು ನೀರಿನ ಅಗತ್ಯತೆ ಇದೆ, ಈ ಪೈಕಿ 500 ಎಂಎಲ್ ಡಿ ನೀರಿನ ಕೊರತೆ ಇದೆ ಎಂದು ಸಿಎಂ ಹೇಳಿದ್ದು, ನೀರಿನ ಕೊರತೆಯನ್ನು ನಿಭಾಯಿಸುವುದಕ್ಕೆ ಕಾರ್ಯ ಯೋಜನೆಯನ್ನು ಸಿದ್ಧಪಡಿಸುವುದಕ್ಕೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.
ಸಿಎಂ ಪ್ರಕಾರ, ಕಾವೇರಿ ನದಿಯಿಂದ 1,470 ಎಂಎಲ್ಡಿ ನೀರು ಬರುತ್ತದೆ ಮತ್ತು 650 ಎಂಎಲ್ಡಿ ಬೋರ್ವೆಲ್ನಿಂದ ಪಡೆಯಲಾಗುತ್ತದೆ. ಬೆಂಗಳೂರಿನಲ್ಲಿ 14,000 ಬೋರ್ವೆಲ್ಗಳಿದ್ದು, 6,900 ಬತ್ತಿ ಹೋಗಿವೆ. ಜಲಮೂಲಗಳು ಅತಿಕ್ರಮಿಸಲ್ಪಟ್ಟಿವೆ ಅಥವಾ ನಾಶವಾಗಿದೆ.
ನಗರದ ಬಹುತೇಕ ನೀರಿನ ಬವಣೆ ನೀಗಿಸಲು ಜೂನ್ನಲ್ಲಿ ಆರಂಭವಾಗಲಿರುವ ಕಾವೇರಿ ಐದು ಯೋಜನೆ ಬಗ್ಗೆ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 2006-07ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ಕಾವೇರಿ ಐದು ಯೋಜನೆ ಪೂರೈಸಲು ಸಾಧ್ಯವಾಗುತ್ತದೆ ಎಂದು ಸಿಎಂ ಹೇಳಿದರು.
ನೀರಿನ ಬಿಕ್ಕಟ್ಟಿನ ಆತಂಕವನ್ನು ಹೋಗಲಾಡಿಸುವ ಪ್ರಯತ್ನವಾಗಿ, ಕಾವೇರಿ ಮತ್ತು ಕಬಿನಿಯಲ್ಲಿ ಸಾಕಷ್ಟು ಕುಡಿಯುವ ನೀರಿನ ಸಂಗ್ರಹ ಇದೆ, ಅದು ಜೂನ್ ವರೆಗೆ ಸಾಕಾಗುತ್ತದೆ. ಕೆಆರ್ ಎಸ್ ನಲ್ಲಿ 11.04 ಟಿಎಂಸಿ, ಕಬಿನಿಯಲ್ಲಿ 9.02 ಟಿಎಂಸಿ ನೀರು ಸಂಗ್ರಹವಿದೆ. ಸರ್ಕಾರವು 313 ಸ್ಥಳಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಲಿದೆ ಮತ್ತು 1,200 ನಿಷ್ಕ್ರಿಯ ಕೊಳವೆ ಬಾವಿಗಳನ್ನು ಪುನರುಜ್ಜೀವನಗೊಳಿಸಲಾಗುವುದು ಎಂದು ಸಿಎಂ ಹೇಳಿದರು.
Advertisement