ಬೆಂಗಳೂರು: ಮಾಜಿ ಕೃಷಿ ಸಚಿವ, ಕಾಂಗ್ರೆಸ್ ನ ನಾಯಕ ಎನ್ ಹೆಚ್ ಶಿವಶಂಕರ ರೆಡ್ಡಿ ಕಾಂಗ್ರೆಸ್ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ತಮಗೆ ಟಿಕೆಟ್ ಸಿಗದೇ ಇದ್ದಲ್ಲಿ ಪಕ್ಷ ತೊರೆಯುವುದಕ್ಕೆ ಶಿವಶಂಕರ ರೆಡ್ಡಿ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವರು, ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವವರೆಗೂ ಕಾಯುವುದಾಗಿ ತಿಳಿಸಿದ್ದಾರೆ. ಟಿಕೆಟ್ ವಿಷಯವಾಗಿ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಟಿಕೆಟ್ ಸಿಗದೇ ಇದ್ದಲ್ಲಿ ಪಕ್ಷ ತೊರೆಯುತ್ತೇನೆ ಎಂದು ಹೇಳಿದ್ದಾರೆ.
ದಶಕಗಳಿಂದ ತಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿರುವುದಾಗಿ ಹೇಳಿರುವ ಶಿವಶಂಕರ ರೆಡ್ಡಿ, ತಾಲೂಕು ಪಂಚಾಯತ್ ಸದಸ್ಯರಾಗಿದ್ದಾಗಿನಿಂದ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಆಯ್ಕೆಗೊಂಡಾಗಿನವರೆಗೂ ನಾನು ಕಾಂಗ್ರೆಸ್ ನಲ್ಲಿಯೇ ಇದ್ದೇನೆ, ಪಕ್ಷ ನನ್ನನ್ನು ಕೃಷಿ ಸಚಿವನನ್ನಾಗಿ, ಉಪಸಭಾಧ್ಯಕ್ಷನನ್ನಾಗಿ ಗುರುತಿಸಿದೆ. ಎಲ್ಲಾ ಸಮಯಗಳಲ್ಲೂ ನಾನು ಪಕ್ಷದ ನಿಷ್ಠಾವಂತನಾಗಿದ್ದೆನೆ ಎಂದು ಶಿವಶಂಕರ ರೆಡ್ಡಿ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರಿಂದ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿಲ್ಲ ಸೋಲಿನ ನಂತರವೂ ರಾಜಕೀಯದಲ್ಲಿ ಸಕ್ರಿಯರಾಗಿ ಪಕ್ಷ ಕಟ್ಟುವುದರಲ್ಲಿ ಉತ್ಸುಕನಾಗಿದ್ದೇನೆ ಎಂದು ಶಿವಶಂಕರ ರೆಡ್ಡಿ ಹೇಳಿದ್ದಾರೆ.
ಪಕ್ಷದ ತಳಮಟ್ಟದ ಕಾರ್ಯಕರ್ತರು ಹಾಗೂ ಹಿರಿಯ ಮುಖಂಡರ ಆಶಯದಂತೆ ಚಿಕ್ಕಬಳ್ಳಾಪುರ ಲೋಕಸಭೆಯಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ನಾನು ಸ್ಥಳೀಯ ಅಭ್ಯರ್ಥಿ, ಪಕ್ಷದ ಹಿರಿಯ ನಾಯಕರು ಪಕ್ಷಕ್ಕೆ ನಿಷ್ಠರಾಗಿದ್ದ ನನ್ನನ್ನು ನಾಯಕ ಎಂದು ಗುರುತಿಸುವ ಬದಲು ಹೊರಗಿನವರನ್ನು ಬೆಂಬಲಿಸುತ್ತಿರುವುದು ನೋವಿನ ಸಂಗತಿ ಎಂದು ಮಾಜಿ ಸಚಿವ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದು ಬ್ಲಾಕ್ ಮೇಲ್ ಅಲ್ಲ, ಆದರೆ ಪಕ್ಷದ ನಾಯಕರಿಂದ ನಿರಾಶೆಯನ್ನು ಎದುರಿಸುತ್ತಿದೆ ಎಂದು ರೆಡ್ಡಿ ಹೇಳಿದ್ದಾರೆ. ಈಗಾಗಲೇ ಇಪ್ಪತ್ತು ಸೀಟುಗಳನ್ನು ಸಚಿವರ ಬಂಧುಗಳು, ಹಿರಿಯ ನಾಯಕರ ಕುಟುಂಬದ ಸದಸ್ಯರಿಗೆ ನೀಡಲಾಗಿದೆ ಎಂದ ಅವರು, ದಶಕಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಶ್ರೀಸಾಮಾನ್ಯನ ಸ್ಥಿತಿ ಹೀಗಿದೆ, ಟಿಕೆಟ್, ಹಣ ಪಡೆಯಲು ಹಣವೇ ಪ್ರಮುಖ ಪಾತ್ರ ವಹಿಸುತ್ತಿರುವುದು ದುರದೃಷ್ಟಕರ. ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಿಲ್ಲ, ಉತ್ತಮ ಅಭ್ಯರ್ಥಿ ಯಾರು ಎಂಬುದನ್ನು ಮತದಾರರೇ ನಿರ್ಧರಿಸುತ್ತಾರೆ ಎಂದರು.
Advertisement