ಮಂಡ್ಯ: ಚುನಾವಣೆ ಬಂದ್ರೆ ಸಾಕು ಎಚ್ಡಿ ಕುಮಾರಸ್ವಾಮಿ ಹೃದಯದ ಸಮಸ್ಯೆ ಇದೆ ಎಂದು ಹೇಳಿ ಆಸ್ಪತ್ರೆ ಸೇರುತ್ತಾರೆ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಲೇವಡಿ ಮಾಡಿದ್ದಾರೆ.
ಮಂಡ್ಯದ ಮಳವಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಲೆಕ್ಷನ್ ಸಮೀಪ ಬಂದಾಗ ಕುಮಾರಸ್ವಾಮಿ ಆಸ್ಪತ್ರೆ ಸೇರ್ತಾರೆ. ಹೃದಯದ ಶಸ್ತ್ರ ಚಿಕಿತ್ಸೆ ಆಗುತ್ತದೆ. ಮೂರೇ ದಿನಕ್ಕೆ ಆಸ್ಪತ್ರೆಯಿಂದ ಹೊರಗೆ ಬರ್ತಾರೆ, ನಾಲ್ಕನೇ ದಿನಕ್ಕೆ ಇಡೀ ರಾಜ್ಯ ಸುತ್ತಾಡ್ತಾರೆ. ಅದು ಹೇಗೆ ಸಾಧ್ಯ ಎಂಬುದೇ ಅರ್ಥ ಆಗ್ತಿಲ್ಲ. ಇದು ಹೊಸ ಟೆಕ್ನಿಕ್ಕಾ ಹೇಗೆ ಅಂತಾ ಗೊತ್ತಾಗ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಚಲುವರಾಯಸ್ವಾಮಿಗೆ ಇರುವ ಸೇಮ್ ಕಾಯಿಲೆ ಅವರ ಸ್ನೇಹಿತ ಕುಮಾರಸ್ವಾಮಿಯವರಿಗೆ ಇದೆ. ಚಲುವರಾಯಸ್ವಾಮಿ ಆಸ್ಪತ್ರೆ ಸೇರಿದ್ರೆ ಒಂದು ತಿಂಗಳು ಈಚೆಗೆ ಬರಲ್ಲ. ಅದು ಹೇಗೆ ಹಾರ್ಟ್ ಆಪರೇಷನ್ ಮಾಡಿಸಿ 2 ದಿನಕ್ಕೆ ಆಚೆ ಬರ್ತಾರೆ ಎಂದು ಪ್ರಶ್ನಿಸಿದ್ದಾರೆ.
ಈ ಚುನಾವಣೆ ಅಭಿವೃದ್ದಿ ವರ್ಸಸ್ ಕಣ್ಣೀರಿಡುವ ಜನರ ನಡುವಿನ ಚುನಾವಣೆ. ನನಗೆ ಆ ತೊಂದರೆ ಇದೆ, ಈ ತೊಂದರೆ ಇದೆ ಎಂದರೆ ಕೇಳಬೇಡಿ. ಅಧಿಕಾರದಲ್ಲಿ ಇದ್ದಾಗ ಏನ್ ಮಾಡಿದ್ರಿ ಎಂದು ಪ್ರಶ್ನೆ ಮಾಡಿ. ಕಾಂಗ್ರೆಸ್ ಅಭ್ಯರ್ಥಿಗೆ ಅತಿ ಹೆಚ್ಚು ಮತ ಕೊಟ್ಟು ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದರು.
Advertisement