ಬೆಂಗಳೂರು: ಪತಿಯೊಂದಿಗೆ ಸೇರಿ ಚಿಕ್ಕಮ್ಮನನ್ನು ಕೊಲ್ಲಲು ಯತ್ನಿಸಿದ ಮಹಿಳೆ ಬಂಧನ

ಪತಿಯೊಂದಿಗೆ ಸೇರಿ ಚಿಕ್ಕಮ್ಮನನ್ನು ಕೊಲಲ್ಲು ಯತ್ನಿಸಿದ 36 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪತಿಯೊಂದಿಗೆ ಸೇರಿ ಚಿಕ್ಕಮ್ಮನನ್ನು ಕೊಲಲ್ಲು ಯತ್ನಿಸಿದ 36 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಕ್ಕಳಾಗದ ಅಣ್ಣಯ್ಯಮ್ಮ ತನ್ನ ಸೊಸೆ ಸುಮಿತ್ರಾಳನ್ನು ಬಾಲ್ಯದಿಂದಲೂ ನೋಡಿಕೊಂಡಿದ್ದರು. ಅವರು ಯಶವಂತಪುರದಲ್ಲಿ ವಸತಿ ಕಟ್ಟಡ ಹೊಂದಿದ್ದು, ಅದರಿಂದ ಬಾಡಿಗೆ ಪಡೆಯುತ್ತಿದ್ದರು. ಹೀಗಾಗಿ ಅವರನ್ನು ಕೊಂದು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಸುಮಿತ್ರಾ ಮತ್ತು ಆಕೆಯ ಪತಿ ಮುನಿರಾಜು ಯೋಜಿಸಿದ್ದರು. ಆದರೆ ಅಣ್ಣಯ್ಯಮ್ಮ ಕೊಲೆ ಯತ್ನದಿಂದ ಬದುಕುಳಿದಿದ್ದು, ದಂಪತಿ ವಿರುದ್ಧ ದೂರು ದಾಖಲಿಸಿದ್ದಾರೆ.

ಸುಮಿತ್ರಾ, ಅಣ್ಣಯ್ಯಮ್ಮನ ತಂಗಿಯ ಮಗಳು. ಆರ್‌ಎಂಸಿ ಯಾರ್ಡ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ದಂಪತಿ, ಕೊಲೆ ಸಂಚು ರೂಪಿಸಿ ಅಣ್ಣಯ್ಯಮ್ಮನ ಮನೆಯಲ್ಲಿ ವಾಸವಾಗಿದ್ದರು. ಮನೆಯಲ್ಲಿ ಆಕೆ ಚಿನ್ನಾಭರಣ, ಹಣ ಇಟ್ಟಿರುವುದನ್ನು ಅವರು ಕಂಡುಕೊಂಡಿದ್ದರು.

ಮಾರ್ಚ್ 18 ರಂದು, ರಾತ್ರಿ 9.30 ರ ಸುಮಾರಿಗೆ, ಆರೋಪಿಗಳು ಬಾಡಿಗೆದಾರರಿಂದ ಹಣ ಪಡೆಯಲು ಸಹಾಯ ಮಾಡುವ ನೆಪದಲ್ಲಿ ತಮ್ಮ ಚಿಕ್ಕಮ್ಮನನ್ನು ಮಾರುಕಟ್ಟೆಗೆ ಕರೆದೊಯ್ದಿದ್ದಾರೆ. ದಾರಿ ಮಧ್ಯೆ ಸುಮಿತ್ರಾ ತನ್ನ ಪತಿಯನ್ನು ಅಣ್ಣಯ್ಯಮ್ಮನೊಂದಿಗೆ ಬಿಟ್ಟು ಮನೆಗೆ ಮರಳಿದ್ದಾರೆ. ಕತ್ತಲೆಯಲ್ಲಿ ಮುನಿರಾಜು ಆಕೆಗೆ ಹಿಂದಿನಿಂದ ಚಾಕುವಿನಿಂದ ಇರಿದಿದ್ದು, ಆಕೆ ಸಹಾಯಕ್ಕಾಗಿ ಕಿರುಚಲು ಆರಂಭಿಸಿದಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಅಣ್ಣಯಮ್ಮ ಮನೆಗೆ ಹಿಂತಿರುಗಿ ನೋಡಿದಾಗ ನಗದು, ಚಿನ್ನಾಭರಣ, ಬೆಳ್ಳಿ ಆಭರಣಗಳು ಕಳವಾಗಿರುವುದು ಕಂಡು ಬಂದಿದೆ.

ಸಾಂದರ್ಭಿಕ ಚಿತ್ರ
ಬೆಂಗಳೂರು: ನೆರೆಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಚಾಲಾಕಿ ಬಂಧನ

ಈ ಸಂಬಂಧ ಆರ್‌ಎಂಸಿ ಯಾರ್ಡ್ ಪೊಲೀಸರು ಕೊಲೆ ಯತ್ನ (ಐಪಿಸಿ 307) ಮತ್ತು ಮನೆ ಕಳ್ಳತನ (ಐಪಿಸಿ 379) ಪ್ರಕರಣವನ್ನು ದಾಖಲಿಸಿಕೊಂಡು ಗುರುವಾರ ದಂಪತಿಯನ್ನು ಬಂಧಿಸಿದ್ದಾರೆ. 4.12 ಲಕ್ಷ ನಗದು ಸೇರಿದಂತೆ ಸುಮಾರು 8.7 ಲಕ್ಷ ಮೌಲ್ಯದ ಕಳವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಗಳು ನಡೆಯುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com